ರೈತನ ಮಗಳಾಗಿದ್ದರೂ ಭರ್ಜರಿ ಚಿನ್ನದ ಬೇಟೆಯಾಡಿದ ಚಿನ್ನದ ಹುಡುಗಿ
ಬಾಗಲಕೋಟೆ, ಮೇ 26: ಸಾಧನೆ ಮಾಡುವ ಗುರಿ ಇದ್ರೆ, ಸಾಧಿಸುವ ಛಲ ಇದ್ದರೆ ಯಾವುದೇ ಕಾರ್ಯವನ್ನು ಸಾಧಿಸಿ ತೋರಿಸಬಹುದು. ಅದಕ್ಕೆ ಸಾಕ್ಷಿಯಾಗಿ ಆ ವಿದ್ಯಾರ್ಥಿನಿ ಸಾಧಿಸಿ ತೋರಿಸಿದ್ದಾಳೆ. ಓರ್ವ ರೈತನ ಮಗಳು ಅದ್ಭುತ ಸಾಧನೆ ಮಾಡಿ ಸಾಧನೆ ಶಿಖರ ಏರಿದ್ದಾಳೆ. ರೈತನ ಮಗಳಾಗಿದ್ದರೂ ಭರ್ಜರಿ ಚಿನ್ನದ ಭೇಟೆಯಾಡಿ ಚಿನ್ನದ ಹುಡುಗಿ ಎಂಬ ಕೀರ್ತಿಗೆ ಪಾತ್ರಳಾಗಿದ್ದಾಳೆ. ಅಷ್ಟಕ್ಕೂ ಆ ಚಿನ್ನದ ಹುಡುಗಿ ಯಾರು?ಆಕೆಯ ಸಾಧನೆ ಏನು ?
ವೇದಿಕೆ ಮೇಲೆ ರಾಜ್ಯಪಾಲರಿಂದ ಪದವಿ ಪ್ರಮಾಣಪತ್ರ ಚಿನ್ನದ ಪದಕ ವಿತರಣೆ. ತಮಗೆ ಸಿಕ್ಕ ಚಿನ್ನದ ಪದಕ ತೋರಿಸಿ ಸಂಭ್ರಮಿಸುತ್ತಿರುವ ವಿದ್ಯಾರ್ಥಿಗಳು. ಇಡೀ ಘಟಿಕೋತ್ಸವದಲ್ಲಿ ಹಬ್ಬದ ವಾತಾವರಣ ಸಾಂಪ್ರದಾಯಿಕ ಡ್ರೆಸ್ ನಲ್ಲಿ ಮಿಂಚಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು. ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆ ತೋಟಗಾರಿಕೆ ವಿವಿ ಘಟಿಕೋತ್ಸವದಲ್ಲಿ. ಹೌದು ಇಂದು ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ 11ನೇ ಘಟಿಕೋತ್ಸವ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಸ್ನಾತಕ,ಸ್ನಾತಕೋತ್ತರ, ಪಿಹೆಚ್ ಡಿ ಸೇರಿದಂತೆ ಒಟ್ಟು 680 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ನೀಡಲಾಯಿತು. ಇದರಲ್ಲಿ ಒಂದು ವಿದ್ಯಾರ್ಥಿನಿ ಸಾಧನೆ ಮಾತ್ರ ಅಪಾರ. ಸಾಧಿಸೋಕೆ ಛಲ ಬೇಕು ಗುರಿಯಿರಬೇಕು ಎಂಬುದನ್ನು ಓರ್ವ ರೈತನ ಮಗಳು ಸಾಧಿಸಿ ತೋರಿಸಿದ್ದಾಳೆ.
ನಡುರಸ್ತೆಯಲ್ಲಿ ವಕೀಲೆಗೆ ಥಳಿಸಿದಕ್ಕೆ ಕಾರಣ ಹೇಳುವ ಸಂಪೂರ್ಣ ವಿಡಿಯೋ
ರಾಜ್ಯಪಾಲರಿಂದ ಚಿನ್ನದ ಪದಕ ಪಡೆದ ಉಮ್ಮೇಸರಾ
ಉಮ್ಮೇಸರಾ ಹಸ್ಮತ್ ಅಲಿ ಎಂಬ ವಿದ್ಯಾರ್ಥಿನಿ ತೋಟಗಾರಿಕೆ ವಿಜ್ಞಾನಿಗಳ ಬಿ ಎಸ್ ಸಿ ಪದವಿಯಲ್ಲಿ ಬರೊಬ್ಬರಿ 16 ಚಿನ್ನದ ಪದಕ ಪಡೆದು ಚಿನ್ನದ ಹುಡುಗಿ ಎನ್ನಿಸಿಕೊಂಡಿದ್ದಾಳೆ. ತೋಟಗಾರಿಕೆ ಮಹಾವಿದ್ಯಾಲಯ ಶಿರಸಿಯಲ್ಲಿ ಬಿಎಸ್ ಸಿ ಪದವಿ ಓದಿದ ಉಮ್ಮೇಸರಾ ಗೆ 16 ಚಿನ್ನದ ಪದಕಗಳು ಅರಸಿ ಬಂದಿವೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ನಿಂದ ಚಿನ್ನದ ಪದಕ ಪಡೆದ ಉಮ್ಮೇಸರಾ ಚಿನ್ನದ ಪದಕಗಳನ್ನು ತಮ್ಮ ತಂದೆತಾಯಿ ಕೈಗೆ ಕೊಟ್ಟು ಸಂಭ್ರಮಿಸಿದರು.
ಮುಂದೆ ಇಟಲಿಯಲ್ಲಿ ಎಮ್ಎಸ್ ಸಿ ಮಾಡುವ ಕನಸು
ನಾನು ರೈತನ ಮಗಳು ನನ್ನ ಸಾಧನೆಗೆ ತಂದೆ ತಾಯಿ ಪ್ರೋತ್ಸಾಹ ಕಾರಣ ಅವರ ಮುಖದಲ್ಲಿ ನನಗಿಂತ ಖುಷಿ ಸಂಭ್ರಮವಿದೆ ಅದು ನನಗೆ ಸಾಕು ಎಂದರು. ಮುಂದೆ ಇಟಲಿಯಲ್ಲಿ ಎಮ್ ಎಸ್ ಸಿ ಮಾಡುವ ಕನಸು ಹೊಂದಿದ್ದು,ವಿದ್ಯಾಭ್ಯಾಸ ಮುಗಿಸಿ ಸಂಶೋಧನಾ ವಿಭಾಗದಲ್ಲಿ ಸಾಧನೆ ಮಾಡುವ ಅಭಿಲಾಷೆ ವ್ಯಕ್ತಪಡಿಸಿದರು.
ಉಮ್ಮೇಸರಾ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಗುಲ್ಲಂಪೇಟೆ ಮೂಲದವರು. ಸದ್ಯ ಶಿರಸಿಯಲ್ಲಿ ತೋಟಗಾರಿಕೆ ಬಿ ಎಸ್ ಸಿ ಪದವಿ ಮುಗಿಸಿದ್ದಾರೆ. ಬಿಎಸ್ ಸಿಯಲ್ಲಿ 91.1 ಅಂಕ ಪಡೆದು ಉತ್ತಮ ಸಾಧನೆ ಮಾಡಿದ ಹಿನ್ನೆಲೆ 16 ಚಿನ್ನದ ಪದಕಗಳು ಅರಸಿ ಬಂದಿವೆ. ಇವರ ತಂದೆ ಹಸ್ಮತ್ ಅಲಿ ರೈತನಾಗಿದ್ದು ನಾಲ್ಕು ಎಕರೆ ಹೊಲ ಇದೆ, ಹೊಲದಲ್ಲಿ ಕಾಫಿ ಕರಿಮೆಣಸು ಕೃಷಿ ಮಾಡಿದ್ದಾರೆ.
ಸರಕಾರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ ನೀಡಲಿ
ಮೂಲತಃ ಇಂಗ್ಲೀಷ್ ಮಾದ್ಯಮದ ವಿದ್ಯಾರ್ಥಿನಿಯಾಗಿರುವ ಉಮ್ಮೇಸರಾ ಸ್ಕಾಲರ್ ಶಿಪ್, ಎಜ್ಯುಕೇಶನ್ ಲೋನ್ ಪಡೆದು ಓದಿ ಸಾಧಿಸಿದ್ದಾಳೆ. ಮಗಳ ಸಾಧನೆಗೆ ಸಂಭ್ರಮಿಸುತ್ತಲೇ ಅಸಮಾಧಾನ ಹೊರಹಾಕಿದ ತಂದೆ ಹಸ್ಮತ್ ಅಲಿ, ಮಗಳು ವಿದೇಶದಲ್ಲಿ ಸ್ನಾತಕೋತ್ತರ ಪದವಿ ಮಾಡುವ ಕನಸು ಹೊಂದಿದ್ದಾಳೆ. ಏನು ಮಾಡೋದು 16 ಚಿನ್ನದ ಪದಕ ಪಡೆದು ಇಷ್ಟು ಸಾಧನೆ ಮಾಡಿದರೂ ನಮ್ಮ ಹೊಲದ ಮೇಲೆ ಹದಿನೈದು ಲಕ್ಷ ಸಾಲ ಕೊಡಲು ಯಾವ ಬ್ಯಾಂಕ್ ಒಪ್ಪುತ್ತಿಲ್ಲ. ಸರಕಾರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಇನ್ನು ವೇದಿಕೆಯಲ್ಲಿ ಮಾತಾಡಿದ ತೋಟಗಾರಿಕೆ ಸಚಿವ ಮುನಿರತ್ನ ಇಸ್ರೇಲ್ ದೇಶ ಕೃಷಿಯಲ್ಲಿ ಅದ್ಭುತ ಸಾಧನೆ ಮಾಡಿದ್ದು ಇಸ್ರೇಲ್ ಗೆ ಹೋಗಬಯಸುವ ರೈತರ ಪಟ್ಟಿ ಕಳಿಸಿ ಇಸ್ರೇಲ್ ಗೆ ರೈತರನ್ನು ನಮ್ಮ ಇಲಾಖೆಯಿಂದ ಕಳಿಸುವ ಕಾರ್ಯ ಮಾಡೋದಾಗಿ ವಿವಿ ಕುಲಪತಿ ಅವರಿಗೆ ಹೇಳಿದರು.
ರೈತನ ಮಗಳು ಉಮ್ಮೇಸರಾ ತನ್ನ ಶ್ರಮದಿಂದ ಸಾಧನಾಶಿಖರ ತಲುಪಿದ್ದಾಳೆ.ಇವಳ ಸಾಧನೆ ಎಲ್ಲ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದು ನಿಜ.
(ಒನ್ಇಂಡಿಯಾ ಸುದ್ದಿ)