ಸಿದ್ದರಾಮಯ್ಯ ಮತಾಂಧ ಎನ್ನುವುದರಲ್ಲಿ ಅನುಮಾನವೇ ಇಲ್ಲ: ಈಶ್ವರಪ್ಪ
ಬಾಗಲಕೋಟೆ, ನವೆಂಬರ್ 10: ಟಿಪ್ಪುವಿಗಿಂತ ಸಿದ್ದರಾಮಯ್ಯ ದೊಡ್ಡ ಮತಾಂಧ. ಮುಖ್ಯಮಂತ್ರಿ ಕುಮಾರಸ್ವಾಮಿ ಟಿಪ್ಪುವಿನ ಬದಲು ಸಿದ್ದರಾಮಯ್ಯನ ಜಯಂತಿ ಮಾಡಬಹುದಿತ್ತು ಎಂಬ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆಯನ್ನು ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ಸಮರ್ಥಿಸಿಕೊಂಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತಾಂಧ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಟೀಲ್ ಅವರ ಹೇಳಿಕೆ ಸರಿಯಾಗಿದೆ. ಅದನ್ನು ನಾನು ಒಪ್ಪುತ್ತೇನೆ ಎಂದರು.
ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾದರೂ ಸಿದ್ದರಾಮಯ್ಯ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಸಿದ್ದರಾಮಯ್ಯ ಅವರನ್ನು ಮತಾಂಧ ಎಂದಿರುವುದು ಸರಿಯಾಗಿದೆ. ಆದರೆ, ಅವರನ್ನು ಟಿಪ್ಪುವಿಗೆ ಹೋಲಿಸಿದ್ದು ಎಷ್ಟು ಸರಿ ಎನ್ನುವುದು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಟಿಪ್ಪು ಜಯಂತಿ ಆಚರಣೆಯನ್ನು ಸಮರ್ಥಿಸಿಕೊಂಡು ಸಿದ್ದರಾಮಯ್ಯ ಬಿಜೆಪಿಗೆ ಟ್ವಿಟ್ಟರ್ನಲ್ಲಿ ಇತಿಹಾಸದ ಪಾಠ ಮಾಡಿದ್ದಾರೆ. ಅದರ ಬೆನ್ನಲ್ಲೇ ಈಶ್ವರಪ್ಪ, ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಕ್ರಮ ತೆಗೆದುಕೊಂಡಿದ್ದರೆ ಒಪ್ಪುತ್ತಿದ್ದೆ
ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಕಣ್ಣೆದುರೇ 21 ಯುವಕರ ಕೊಲೆ ನಡೆಯಿತು. ಆಗ ಸಿದ್ದರಾಮಯ್ಯ ಕೊಲೆಗಡುಕರ ವಿರುದ್ಧ ಕ್ರಮ ತೆಗೆದುಕೊಂಡಿದ್ದರೆ ಸಿದ್ದರಾಮಯ್ಯ ಅವರನ್ನು ಒಳ್ಳೆಯ ಮುಖ್ಯಮಂತ್ರಿ ಎಂದು ಒಪ್ಪಿಕೊಳ್ಳುತ್ತಿದ್ದೆ. ಆದರೆ, ಕೊಲೆಗಡುಕರನ್ನು ಬಿಟ್ಟು ಕೋಮುವಾದಿಗಳನ್ನು ಹತ್ತಿಕ್ಕುತ್ತೇವೆ ಎಂದು ಹೇಳಿಕೊಂಡು ಹೊರಟಿದ್ದಾರೆ. ಹಾಗಾದಿ ಸಿದ್ದರಾಮಯ್ಯ ಒಬ್ಬ ಮತಾಂಧ ಎಂದು ಒಪ್ಪುತ್ತೇನೆ ಎಂದು ಈಶ್ವರಪ್ಪ ಹೇಳಿದರು.

ಸೌಹಾರ್ದತೆ ಇಷ್ಟವಿಲ್ಲ
ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಗೆ ಹಿಂದೂ-ಮುಸ್ಲಿಮರು ಸಂತೋಷದಿಂದ ಇರುವುದನ್ನು ನೋಡಲು ಇಷ್ಟವಿಲ್ಲ. ಅದಕ್ಕಾಗಿ ಈ ರೀತಿ ಬೇರ್ಪಡಿಸಲು ನೋಡುತ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆ ಮಾಡಿ ಎಂದು ಯಾರಾದರೂ ಅವರನ್ನು ಕೇಳಿದ್ದರೇ ಎಂದು ಈಶ್ವರಪ್ಪ ಪ್ರಶ್ನಿಸಿದರು.

ಎಚ್ಡಿಕೆಗೆ ಮನಸಾಕ್ಷಿ ಕಾಡಿರಬೇಕು
ಕುಮಾರಸ್ವಾಮಿ ಟಿಪ್ಪು ಜಯಂತಿಯಿಂದ ದೂರ ಉಳಿದಿರಲು ಕಾರಣವೇನು? ಕುಟ್ಟಪ್ಪನ ಮನೆಗೆ ಭೇಟಿ ನೀಡಿದ್ದ ವೇಳೆ ಅವರು ಟಿಪ್ಪು ಜಯಂತಿ ಆಚರಣೆ ನಿಲ್ಲಿಸುವುದಾಗಿ ಹೇಳಿದ್ದರು. ಈಗ ಅವರ ಮನಸಾಕ್ಷಿಯನ್ನು ಅದು ಕಾಡುತ್ತಿರಬೇಕು. ಅದಕ್ಕಾಗಿ ಅವರು ಭಾಗಿಯಾಗುತ್ತಿಲ್ಲ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಸಂದಿಗ್ಧತೆ ಯಾಕೆ ಬರುತ್ತದೆ? ರೈತರ ಸಾಲ ಮನ್ನಾ ವಿಷಯದಲ್ಲಿ ದುಡ್ಡು ಇಲ್ಲದೆ ಅವರಿಗೆ ಸಂದಿಗ್ಧತೆ ಬಂದಿರಬಹುದು. ಆದರೆ ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಏಕೆ ಸಂದಿಗ್ಧತೆ ಬರುತ್ತದೆ? ಇದಕ್ಕೆ ಕುಮಾರಸ್ವಾಮಿ ಸ್ಪಷ್ಟ ಉತ್ತರ ನೀಡಬೇಕು ಎಂದರು.

ಟಿಪ್ಪು ಒಬ್ಬ ಕೊಲೆಗಾರ
ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಗಲಭೆ ನಡೆದಿಲ್ಲ. ಹಿಂದೂ ಮತ್ತು ಮುಸ್ಲಿಮರು ದೂರ ಹೋಗಲು ಕಾಂಗ್ರೆಸ್ ಕಾರಣ. ಟಿಪ್ಪು ಒಬ್ಬ ಕೊಲೆಗಾರ ಎನ್ನುವುದನ್ನು ಇತಿಹಾಸವೇ ಹೇಳುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿ 104 ಸೀಟುಗಳನ್ನು ಪಡೆದರೆ, ಕಾಂಗ್ರೆಸ್ ಗಳಿಸಿದ್ದು 78 ಸೀಟುಗಳನ್ನಷ್ಟೇ. ಇದನ್ನು ನೋಡಿಕೊಂಡು ಜಮೀರ್ ಅಹ್ಮದ್ ಮಾತನಾಡಬೇಕು. ನಾವು ಮುಸ್ಲಿಮರನ್ನು ವಿರೋಧಿಸುತ್ತಿಲ್ಲ, ಟಿಪ್ಪುವನ್ನು ವಿರೋಧಿಸುತ್ತಿದ್ದೇವೆ ಎಂದು ಹೇಳಿದರು.

ಇತಿಹಾಸ ನೋಡಿ ಏನಾಯಿತು?
ಈ ಮುಂಚೆಯೂ ಈಶ್ವರಪ್ಪ ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದರು. ಇಷ್ಟೊಂದು ಪ್ರತಿರೋಧ ವ್ಯಕ್ತವಾಗುತ್ತಿದ್ದರೂ ಟಿಪ್ಪು ಜಯಂತಿ ಆಚರಿಸಲು ಸರ್ಕಾರ ಯಾಕಿಷ್ಟು ಉತ್ಸುಕವಾಗಿದೆ ಎನ್ನುವುದೇ ಅರ್ಥವಾಗುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದರು.
ಟಿಪ್ಪು ಸುಲ್ತಾನ್ನನ್ನು ಹಿಡ್ಕೊಂಡ ಸಿದ್ದರಾಮಯ್ಯನವರ ಗತಿಯೇನಾಯಿತು, ಉದ್ಯಮಿ ವಿಜಯ್ ಮಲ್ಯ ಗತಿಯೇನಾಯಿತು ಎನ್ನುವುದನ್ನು ಅರಿತಿದ್ದರೂ ಕುಮಾರಸ್ವಾಮಿ ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವುದು ವಿಷಾದನೀಯ ಎಂದಿದ್ದರು.












Click it and Unblock the Notifications