ಪುರಸಭೆ ಪದಗ್ರಹಣ ವೇಳೆ ಕುರಾನ್ ಪಠಣ: ಗೋಮೂತ್ರ ಸಿಂಪಡಿಸಿದ ಬಿಜೆಪಿ ಸದಸ್ಯರು
ಬಾಗಲಕೋಟೆ, ಆಗಸ್ಟ್ 25: ಪುರಸಭೆ ಅಧ್ಯಕ್ಷರ ಪದಗ್ರಹಣದ ವೇಳೆ ಕುರಾನ್ ಪಠಿಸಿದ್ದಕ್ಕೆ ವಿರೋಧವಾಗಿ ಬಿಜೆಪಿ ಸದಸ್ಯರು ಪುರಸಭೆಯ ಸಭಾಂಗಣಕ್ಕೆ ಗೋಮೂತ್ರ ಸಿಂಪಡಿಸಿ ಪೂಜೆ ಮಾಡಿಸಿದ ಘಟನೆ ನಡೆದಿದೆ.
ಹುನಗುಂದ ಪುರಸಭೆಯ 2ನೇ ಅವಧಿಗೆ ಕಾಂಗ್ರೆಸ್ನ ಪರ್ವೇಜ್ ಖಾಜಿ ಪದಗ್ರಹಣ ವೇಳೆ ಕುರಾನ್ ಪಠಣ ಮಾಡಲಾಗಿತ್ತು. ಬುಧವಾರ ಬಿಜೆಪಿ ಸದಸ್ಯರು ಇದಕ್ಕೆ ವಿರುದ್ಧವಾಗಿ ಅದೇ ಸಭಾ ಭವನಕ್ಕೆ ಹಸುವನ್ನು ಕರೆಸಿ, ವಿಶೇಷ ಪೂಜೆ ನೆರವೇರಸಿದ್ದಾರೆ.
ಬಾಗಲಕೋಟೆ ವಿಮಾನ ನಿಲ್ದಾಣಕ್ಕೆ ಹಲಕುರ್ಕಿ ಜಮೀನುಗಳ ಮೇಲೆ ಕಣ್ಣು: ರೈತರ ಆಕ್ರೋಶ
ಒಟ್ಟು 23 ಸ್ಥಾನಗಳನ್ನ ಹೊಂದಿರುವ ಹುನಗುಂದ ಪುರಸಭೆಯಲ್ಲಿ ಕಾಂಗ್ರೆಸ್ 12, ಬಿಜೆಪಿ - 8 ಹಾಗೂ ಜೆಡಿಎಸ್ - 3 ಸದಸ್ಯರನ್ನು ಸಂಖ್ಯಾ ಬಲ ಹೊಂದಿವೆ. ಜುಲೈ 14 ರಂದು ಹುನಗುಂದ ಪುರಸಭೆಯ ಎರಡನೆ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ್ವೇಜ್ ಖಾಜಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ನಂತರ ಪದಗ್ರಹಣ ಕಾರ್ಯಕ್ರಮ ವೇಳೆ ಮೊದಲಿಗೆ ಹಿಂದೂ ಸಂಪ್ರದಾಯದಂತೆ ಪೂಜೆ ನೆರವೇರಿಸಿದ್ದರು ಎನ್ನಲಾಗಿದೆ. ಆ ನಂತರ ಖಾಜಿ ಅವರನ್ನ ಭೇಟಿ ಆಗಲು ಬಂದಂತಹ ಮುಸ್ಲಿಂ ಗುರುಗಳು, ಖಾಜಿರನ್ನು ಅಭಿನಂದಿಸಿದರಲ್ಲದೆ, ಕುರಾನ್ ಪಠಿಸುವ ಮೂಲಕ ಖಾಜಿಗೆ ಶುಭ ಕೋರಿದ್ದರು. ಈ ಕುರಾನ್ ಪಠಣದ ವಿಡಿಯೋ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಸಭಾಂಗಣಕ್ಕೆ ಗೋಮೂತ್ರ ಸಿಂಪಡಿಸಿದ ಬಿಜೆಪಿ
ನೂತನ ಅಧ್ಯಕ್ಷರ ಆಯ್ಕೆ ನಂತರ ಮೊದಲ ಬಾರಿ ಪುರಸಭೆ ಸಾಮಾನ್ಯ ಸಭೆ ಕರೆಯಲಾಗಿತ್ತು. ನಿಗದಿತ ಸಮಯಕ್ಕೆ ಬಿಜೆಪಿ ಸದಸ್ಯರು ಪುರಸಭೆಗೆ ಆಗಮಿಸಿದ್ದರೂ ಸಹ ನಾವೆಲ್ಲಾ ಒಟ್ಟಿಗೆ ಒಳಗೆ ಬರುತ್ತೇವೆ ಎನ್ನುತ್ತಾ ಸಭೆಗೆ ಗೈರಾಗಿದ್ದರು. ಇತ್ತ ಕಾಂಗ್ರೆಸ್ ಸದಸ್ಯರು ವಿರೋಧ ಪಕ್ಷದವರ ಅನುಪಸ್ಥಿತಿಯಲ್ಲೇ ಸಭೆ ಮುಗಿಸಿದ್ದರು. ಸಭೆ ನಂತರ ಅದೇ ಸಭಾಭವನಕ್ಕೆ ಬಿಜೆಪಿ ಸದಸ್ಯರು ಗೋವನ್ನು ಕರೆಸಿ, ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ಗೋವನ್ನ ಸಭಾಂಗಣ ಒಳಗೆ ಕರೆದುಕೊಂಡು ಹೋಗಿ ಸುತ್ತಾಡಿಸಿ, ಗೋಮೂತ್ರ ಸಿಂಪಡಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ವೇಳೆ ನಡೆದಿದ್ದ ಕುರಾನ್ ಪಠಣಕ್ಕೆ ಈ ಕಾರ್ಯವನ್ನು ಮಾಡಿದ್ದಾರೆ.
ಹೊಸ ಸಂಪ್ರದಾಯಕ್ಕೆ ನಾಂದಿ ಆರೋಪ
ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಸದಸ್ಯರು, "ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ನಾವೆಲ್ಲರೂ ಕಾನೂನಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಆದರೆ ಅಧ್ಯಕ್ಷರು ಕುರಾನ್ ಪಠಿಸಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಹಿಂದಿನ ಅವಧಿಯಲ್ಲಿ ಅಧ್ಯಕ್ಷರಾದವರು ಸಾಮೂಹಿಕವಾಗಿ ಸಾಂಪ್ರದಾಯಿಕ ವಿಧಾನದಲ್ಲಿ ಒಂದೇ ರೀತಿಯ ಪೂಜೆ ಮಾಡಿಸುತ್ತಿದ್ದರು. ಆದರೆ ನೂತನ ಅಧ್ಯಕ್ಷರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ " ಎಂದು ಆಕ್ಷೇಪಿಸಿದರು.
ಜೊತೆಗೆ ಕಳೆದ 6 ತಿಂಗಳುಗಳಿಂದ ಸಾಮಾನ್ಯ ಸಭೆ ನಡೆದಿಲ್ಲ. ಪಟ್ಟಣದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿತ್ತು. ಆದರೆ ಪುರಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳು ಸಭೆಯನ್ನು ಬೇಗ ಮುಗಿಸಿದ್ದಾರೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳನ್ನು ಕೇಳಿದರೆ ಬಾಗಲಕೋಟೆಯಲ್ಲಿ ಸಭೆ ಇದೆ ಹೋಗಬೇಕು ಎಂದು ಉತ್ತರಿಸುತ್ತಾರೆ ಎಂದರು.
ಎಲ್ಲರಿಗೂ ಮುಂಚಿತವಾಗಿ ನೋಟಿಸ್
ಇನ್ನು ಆದರೆ ಪುರಸಭೆ ಅಧ್ಯಕ್ಷ ಪರ್ವೇಜ್ ಖಾಜಿ ಮಾತನಾಡಿ, ಚುನಾವಣೆ ನೀತಿ ಸಂಹಿತೆ, ಹಿಂದಿನ ಅವಧಿಯ ಪುರಸಭೆ ಅಧ್ಯಕ್ಷರ ರಾಜೀನಾಮೆ ನೀಡಿದ್ದರಿಂದ ಹಾಗೂ ಇನ್ನಿತರ ಹಲವಾರು ಕಾರಣಗಳಿಂದ ನಾಲ್ಕು ತಿಂಗಳುಗಳಿಂದ ಸಾಮಾನ್ಯ ಸಭೆ ಕರೆಯಲು ಸಾಧ್ಯವಾಗಿಲ್ಲ. ಬುಧವಾರ ನಡೆದ ಸಾಮಾನ್ಯ ಸಭೆಗೆ ಪುರಸಭೆ ಎಲ್ಲ ಸದಸ್ಯರಿಗೂ ಎಂಟು ದಿನಗಳ ಮುಂಚಿತವಾಗಿ ನೋಟಿಸ್ ನೀಡಲಾಗಿದೆ. ನಿಗದಿತ ಸಮಯದಂತೆ 11 ಗಂಟೆಗೆ ಮೀಟಿಂಗ್ ಆರಂಭವಾಗಿದ್ದು, ಸಭೆಯಲ್ಲಿದ್ದ ಸದಸ್ಯರು ಕೆಲ ವಿಷಯಗಳನ್ನು ಚರ್ಚಿಸಿದರು ಎಂದರು.
ಕುರಾನ್ ಪಠಿಸಿದ್ದನ್ನು ವಿವಾದ ಮಾಡಲಾಗುತ್ತಿದೆ
ಗೋವು ಪೂಜೆ ಮಾಡಿದ್ದರ ಬಗ್ಗೆ ಮಾತನಾಡಿ, ಅವರು ಗೋವಿನ ಪೂಜೆ ಮಾಡಿದ್ದಕ್ಕೆ ನಮ್ಮ ವಿರೋಧ ಇಲ್ಲ. ಅ ಪೂಜೆಗೆ ನಮ್ಮನ್ನೂ ಆಹ್ವಾನಿಸಿದ್ದರೆ ನಾವು ಸಹ ಅವರ ಜೊತೆಗೆ ಬಾಗಿಯಾಗುತ್ತಿದ್ದೆವು. ಆದರೆ ಬಿಜೆಪಿಯವರು ಇದನ್ನ ಸುಮ್ಮನೆ ವಿವಾದ ಮಾಡುತ್ತಿದ್ದಾರೆ. ನನ್ನ ಪದಗ್ರಹಣದ ವೇಳೆ ನನ್ನ ಕೊಠಡಿಯಲ್ಲಿ ಮೊದಲಿಗೆ ಗಣೇಶ ಮತ್ತು ಲಕ್ಷ್ಮಿ ಪೂಜೆ ನೆರವೇರಿಸಲಾಗಿತ್ತು. ನಂತರ ಕೊಠಡಿಯಿಂದ ಸಭಾ ಭವನಕ್ಕೆ ತೆರಳಿದಾಗ ನನಗೆ ಶುಭ ಕೊರಲು ಬಂದಿದ್ದ ಧರ್ಮ ಗುರುಗಳು ಕುರಾನ್ ಪಠಿಸಿ ಶುಭ ಕೋರಿದ್ದರು. ಹಿಂದೂ ದೇವರುಗಳನ್ನ ಪೂಜಿಸಿದ್ದರ ಬಗ್ಗೆ ಯಾರೂ ಮಾತನಾಡಲಿಲ್ಲ. ಆದರೆ ಕುರಾನ್ ಪಠಿಸಿದ್ದನ್ನು ವಿವಾದ ಮಾಡುತ್ತಿರುವುದು ದುರಂತ ಎಂದು ಪರ್ವೇಜ್ ಖಾಜಿ ಹೇಳಿದ್ದಾರೆ.
ಒಟ್ಟಿನಲ್ಲಿ, ಹಿಂದೂ ಮುಸ್ಲಿಂ, ಕಾಂಗ್ರೆಸ್- ಬಿಜೆಪಿ ಎನ್ನದೇ ಆಡಳಿತ ನಡೆಸಿ ಜನ ಸಾಮಾನ್ಯರ ಸಮಸ್ಯೆ ಕೇಳಬೇಕಿದ್ದ ಜನ ಪ್ರನಿಧಿಗಳು ಹೀಗೆ ಸರ್ಕಾರಿ ಕಚೇರಿಯಲ್ಲೂ ಧರ್ಮಾದರಿತ ಕಾಳಗ ನಡೆಸುತ್ತಿರುವುದು ಕಳವಳಕಾರಿ ವಿಷಯವಾಗಿದೆ.