ಸಚಿವ ಗೋವಿಂದ ಕಾರಜೋಳ ವಿರುದ್ಧ ವ್ಯಂಗ್ಯ ಪೋಸ್ಟ್ ಹಾಕಿದ್ದ ರೈತನ ಬಂಧನ
ಬಾಗಲಕೋಟೆ, ನವೆಂಬರ್ 18: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿ ವ್ಯಂಗ್ಯಭರಿತ ಪೋಸ್ಟ್ ಹಾಕಿದ್ದ ರೈತನನ್ನು ಪೊಲೀಸರು ಬಂಧಿಸಿದ್ದಾರೆ.
ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಮುಧೋಳ ನವನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮುಧೋಳ ತಾಲೂಕಿನ ಶಿರೋಳ ಗ್ರಾಮದ ನಿಗಪ್ಪ ಮಟಗಾರ ಬಂಧಿತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮುಧೋಳ: ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ
ಸೂಕ್ತ ಬೆಲೆ ನಿಗದಿಗೆ ಆಗ್ರಹಿಸಿ ಬಾಗಲಕೋಟೆಯ ಮುಧೋಳ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ರೈತರ ಸಮಸ್ಯೆ ಕೇಳದ ಶಾಸಕರ ವಿರುದ್ಧ ರೈತರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರೈತ ನಿಗಪ್ಪ ಮಟಗಾರ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿರುದ್ಧ ವ್ಯಂಗ್ಯವಾಡಿದ್ದರು. ''ಶಾಸಕರು ಕಾಣೆಯಾಗಿದ್ದಾರೆ. ಮೌನವಾಗಿದ್ದಾರೆ. ಎಲ್ಲಿರುವೆ ಗೋಪಾಲ ಮನೆಗೆ ಬಾರೋ'' ಎಂದು ಪೋಸ್ಟ್ ಹಂಚಿಕೊಂಡಿದ್ದರು.
ನಿಗಪ್ಪ ಮಟಗಾರ ತಮ್ಮ ಪೋಸ್ಟ್ ಮೂಲಕ ಸಚಿವ ಗೋವಿಂದ ಕಾರಜೋಳ ಅವರ ಮೇಲೆ ಸಾರ್ವಜನಿಕರಿಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ವಕೀಲ ಶಿವಾನಂದ ಟವಳಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.
ಸಂಧಾನ ಸಭೆ ವಿಫಲ: ಕಬ್ಬಿಗೆ ಸೂಕ್ತ ಬೆಲೆ ಆಗ್ರಹಿಸಿ ಮುಧೋಳ ಬಂದ್
ಇನ್ನು ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ಬಾಗಲಕೋಟೆಯಲ್ಲಿ ರೈತರ ಹಾಗೂ ಕಾರ್ಖಾನೆ ಮಾಲೀಕರ ಸಂಧಾನ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಜಿಲ್ಲಾ ರೈತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ನಿಗದಿಗೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಕರೆ ಮೇರೆಗೆ ನವೆಂಬರ್ 16ರಂದು ಮುಧೋಳ ಪಟ್ಟಣ ಬಂದ್ ಮಾಡಿ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಲಾಗಿತ್ತು.
ಮುಧೋಳ ತಾಲೂಕಿನ ಅನೇಕ ಭಾಗಗಳಲ್ಲಿ ರೈತರು ನವೆಂಬರ್ 16ರಂದು ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಮುಧೋಳ ತಾಲೂಕಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿ ಅಸಮಾಧಾನ ಹೊರಹಾಕಿದ್ದರು. ಇನ್ನು ಮುಧೋಳದ ಬೆಳಗಲಿ, ಮಂಟೂರ ಶಿರೋಳ, ಬುದ್ನಿ ಪಿಎಮ್ ಗ್ರಾಮಗಳ ರೈತರು, ಹೆದ್ದಾರಿ ಬಂದ್ ಮಾಡಿ ರಸ್ತೆಯ ಮಧ್ಯೆ ಟೈರ್ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು.