ರಣಕಣ ಕಾವೇರಿರುವಾಗ ಸಿಧು ಸದ್ದಿಲ್ಲ! ಕಾಂಗ್ರೆಸ್ ಗೂ ಗುಡ್ ಬೈ?
ಚಂಡೀಗಢ, ಏಪ್ರಿಲ್ 03: ಮೇಲಿಂದಮೇಲೆ ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಸುದ್ದಿಯಾಗಿದ್ದ ಕಾಂಗ್ರೆಸ್ ನಾಯಕ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಈಗ ಎಲ್ಲಿದ್ದಾರೆ?
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಲೋಕಸಭೆ ಚುನಾವಣೆಯ ರಣಕಣ ಕಾವೇರಿರುವ ಹೊತ್ತಲ್ಲಿ ಅವರು ಮೌನವಾಗಿರುವುದು ಮತ್ತು ಎಲ್ಲಿಯೂ ಕಾಣಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
'ದೇಶದ್ರೋಹಿ' ಸಿಧುವನ್ನು ಕಾಂಗ್ರೆಸ್ಸಿನಿಂದ ಅಮಾನತು ಮಾಡಿ : ಶಿರೋಮಣಿ ಅಕಾಲಿ ದಳ
ಕಳೆದ 20 ದಿನಗಳಿಂದ ನವಜೋತ್ ಸಿಧು ಅವರು ಯಾರಿಗೂ ಕಾಣಿಸಿಕೊಂಡಿಲ್ಲ. ಪಂಜಾಬ್ ಸರ್ಕಾರದಲ್ಲಿ ಸಚಿವರಾಗಿರುವ ಅವರು ತಮ್ಮ ಪಕ್ಷದ ಕೆಲಸ-ಕಾರ್ಯಗಳಲ್ಲಿ ಭಾಗಿಯಾಗಿಲ್ಲ. ತಮ್ಮ ಪತ್ನಿ ನವಜೋತ್ ಕೌರ್ ಅವರಿಗೆ ಆಕೆ ಬೇಡಿಕೆ ಇಟ್ಟಿದ್ದ ಕ್ಷೇತ್ರದಲ್ಲಿ ಟಿಕೆಟ್ ನೀಡದಿರುವುದೇ ಸಿಧು ಮುನಿಸಿಗೆ ಕಾರಣವಾ? ಅಷ್ಟೇ ಅಲ್ಲ, ಸಿಧು ಅವರನ್ನು ಇತ್ತೀಚೆಗೆ ಕಾಂಗ್ರೆಸ್ ನಲ್ಲಿ ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದ್ದು, ಅವರು ಪಕ್ಷದ ಚಟುವಟಿಕೆಯಿಂದ ದೂರವುಳಿದಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಸಿಧು ಅವರ ಈ ನಡೆಗೆ ಕಾರಣವೇನು?
ಮೂಲೆಗುಂಪಾದ ಸಿಧು!
ಸಿಧು ಅವರನ್ನು ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲೂ ಸೇರಿಸಿಕೊಳ್ಳದಿರುವುದು ಸಿಧು ಅವರಿಗೆ ಭಾರೀ ಬೇಸರವನ್ನುಂಟು ಮಾಡಿದೆ. ಮಾತ್ರವಲ್ಲ, ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಿಧು ಅವರಿಗೆ ಮಾತನಾಡುವುದಕ್ಕೆ ಅವಕಾಶವನ್ನೇ ನೀಡದಿರುವುದೂ ಅವರಿಗೆ ತೀವ್ರ ಮುಖಭಂಗವನ್ನುಂಟು ಮಾಡಿತ್ತು. ಈ ಎಲ್ಲ ಘಟನೆಗಳ ನಂತರ ಅವರು ಇಪ್ಪತ್ತು ದಿನಗಳಿಂದ ವಿಧಾನಸಭೆಗೇ ಬರದೆ, ಪಕ್ಷದ ಚಟುವಟಿಕೆಯಿಂದ ದೂರವಿದ್ದಾರೆ.
ವಿವಾದಾತ್ಮಕ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ
ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಮತ್ತು ಪುಲ್ವಾಮಾ ದ ಆಳಿಯ ಸಂದರ್ಭದಲ್ಲಿ ಅವರು ನೀಡಿದ ವಿವಾದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್ ಗೆ ಸಾಕಷ್ಟು ಇರಿಸುಮುರಿಸುಂಟಾಗಿತ್ತು. ಪುಲ್ವಾಮಾ ಘಟನೆಗೆ ಇಡೀ ಪಾಕಿಸ್ತಾನವನ್ನು ದೂರುವುದು ಸರಿಯಲ್ಲ ಎಂದು ಸಿಧು ಪಾಕಿಸ್ತಾನದ ಪರ ವಕಾಲತ್ತು ವಹಿಸಿದ್ದು, ಚುನಾವಣೆಯ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಅರಿತೇ ಕಾಂಗ್ರೆಸ್ ಅವರನ್ನು ಲೋಕಸಭಾ ಚುನಾವಣೆಯ ಮುಖ್ಯ ಭೂಮಿಕೆಯಿಂದ ದೂರವೇ ಉಳಿವಂತೆ ನೋಡಿಕೊಂಡಿತು.
ಪುಲ್ವಾಮಾ ದಾಳಿ: ಮತ್ತೆ ಮೋದಿ ಸರ್ಕಾರವನ್ನು ಹಳಿದ ಸಿಧು
ಪತ್ನಿಗೆ ಟಿಕೆಟ್ ನೀಡದಿದ್ದಿದ್ದೂ ಕಾರಣ
ನವಜೋತ್ ಸಿಂಗ್ ಸಿಧು ಅವರ ಪತ್ನಿ ನವಜೋತ್ ಕೌರ್ ಅವರಿಗೆ ಅಮೃತಸರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ದಂಪತಿ ಒತ್ತಾಯಿಸಿದ್ದರು. ಆದರೆ ಕಾಂಗ್ರೆಸ್ ಆ ಕ್ಷೇತ್ರದಿಂದ ಹಾಲಿ ಶಾಸಕ ಗುರ್ಜಿತ್ ಸಿಂಗ್ ಔಜ್ಲಾ ಅವರನ್ನು ಕಣಕ್ಕಿಳಿಸಿತು. ಇದರಿಂದ ದಂಪತಿ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಮೃತಸರ ಕ್ಷೇತ್ರದಿಂದ 2014 ರಲ್ಲಿ ಹಾಲಿ ಏಂದ್ರ ಸಚಿವ ಅರುಣ್ ಜೇಟ್ಲಿ ಅವರನ್ನು ಕಾಂಗ್ರೆಸ್ ನಾಯಕ, ಪಂಜಾಬಿನ ಹಾಲಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಸೋಲಿಸಿದ್ದರು.
ಇದೇ ಕಾರಣಕ್ಕೆ ಬಿಜೆಪಿ ತೊರೆದಿದ್ದ ಸಿಧು!
2014 ರ ಚುನಾವಣೆಯಲ್ಲಿ ಅರುಣ್ ಜೇಟ್ಲಿ ಅವರಿಗೆ ಅಮೃತಸರದ ಟಿಕೆಟ್ ನೀಡಿದ್ದರಿಂದ ಮುನಿಸಿಕೊಂಡಿದ್ದ ಸಿಧು ನಂತರ ಪಕ್ಷ ತೊರೆದಿದ್ದರು. ಕಾಂಗ್ರೆಸ್ ಸೇರಿದ್ದರು. ಆದರೆ ಇದೀಗ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದಲೂ ದೂರ ಉಳಿದಿದ್ದು, ಅವರು ಮುಂದಿನ ನಡೆ ಏನು ಎಂಬುದು ಕುತೂಹಲದ ವಿಷಯವಾಗಿದೆ.