ನವ್ಜೋತ್ಸಿಂಗ್ ಸಿಧು ಹುಡುಕಿಕೊಟ್ಟವರಿಗೆ 50,000 ರೂಪಾಯಿ ಬಹುಮಾನ!
ಅಮೃತಸರ, ಜೂನ್ 2: ಕಾಂಗ್ರೆಸ್ ನಾಯಕ ನವ್ಜೋತ್ಸಿಂಗ್ ಸಿಧು ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ಗಳು ಸ್ವತಃ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಕಾಣಿಸಿಕೊಂಡಿದೆ. ಪೂರ್ವ ಅಮೃತಸರದ ಶಾಸಕರಾಗಿರುವ ನವ್ಜೋತ್ ಸಿಂಗ್ ಕಾಣೆಯಾಗಿದ್ದಾರೆ, ಅವರನ್ನು ಹುಡುಕಲು ಸಹಾಯ ಮಾಡಿದವರಿಗೆ 50,000 ರೂಪಾಯಿ ಬಹುಮಾನ ನೀಡಲಾಗುತ್ತದೆ" ಎಂದು ಈ ಪೋಸ್ಟರ್ನಲ್ಲಿ ವ್ಯಂಗ್ಯವಾಡಲಾಗಿದೆ.
ಮಾಜಿ ಕ್ರಿಕೆಟಿಗನೂ ಆಗಿರುವ ನವ್ಜೋತ್ಸಿಂಗ್ ಸಿಧು ಹಲವು ವರ್ಷಗಳಿಂದ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. "2017 ವಿಧಾನಸಭಾ ಚುನಾವನೆಯಲ್ಲಿ ಗೆದ್ದ ನಂತರ ಜನರಿಗೆ ನೀಡಿದ ಭರವಸೆಯನ್ನು ಮರೆತಿದ್ದಾರೆ" ಎಂದು ಕೂಡ ಈ ಪೋಸ್ಟರ್ಗಳಲ್ಲಿ ಬರೆಯಲಾಗಿದೆ.
ನವ್ಜೋತ್ಸಿಂಗ್ ಸಿಧು ಬಗ್ಗೆ ಈ ರೀತಿಯ ಪೋಸ್ಟರ್ಗಳು ಅವರ ಕ್ಷೇತ್ರದಲ್ಲಿ ಪತ್ತೆಯಾಗುವುದು ಇದೇನು ಹೊಸತಲ್ಲ. 2019ರಲ್ಲಿ ಇದೇ ರೀತಿಯ ಪೋಸ್ಟರ್ಅನ್ನು ಶಿರೋಮಣಿ ಅಕಾಲಿದಳದ ಸ್ಥಳೀಯ ನಾಯಕರೊಬ್ಬರು ಅಂಟಿಸಿದ್ದರು. ನವಜೋತ್ಸಿಂಗ್ ಸಿಧುವನ್ನು ಪತ್ತೆ ಮಾಡಿದವರಿಗೆ 2100 ರೂಪಾಯಿ ಬಹುಮಾನ ಹಾಗೂ ಪಾಕಿಸ್ತಾನಕ್ಕೆ ಪ್ರವಾಸ ಮಾಡಿಸುವುದಾಗಿ ಆ ಪೋಸ್ಟರ್ನಲ್ಲಿ ಬರೆಯಲಾಗಿತ್ತು.

ಇನ್ನು ಇದಕ್ಕೂ ಮುನ್ನ ಇಂದು ಬೆಳಗ್ಗೆ ಸಿಧು ಪಂಜಾಬ್ ಕಾಂಗ್ರೆಸ್ನಲ್ಲಿ ಉಂಟಾಗಿರುವ ಅಸಮಾಧಾನಗಳನ್ನು ಪರಿಹರಿಸಲು ಪಕ್ಷವು ರಚಿಸಿದ ಮೂರು ಸದಸ್ಯರ ಸಮಿತಿಯ ಮುಂದೆ ಹಾಜರಾಗಿದ್ದರು. ಕೊಟ್ಕಾಪುರ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ರಚಿಸಲಾಗಿರುವ ಎಸ್ಐಟಿ ನೀಡಿರುವ ವರದಿಯ ವಿಚಾರವಾಗಿ ಮುಖ್ಯಮಂತ್ರಿಗಳ ವಿರುದ್ಧ ನೇರವಾಗಿ ಹರಿಹಾಯ್ದಿದ್ದರು. 2019ರಲ್ಲಿ ಅಮರಿಂದರ್ ಸಂಗ್ ಅವರ ಸರ್ಕಾರದ ಕ್ಯಾಬಿನೆಟ್ನಿಂದ ಹೊರ ಬಂದ ನಂತರ ಸಿಧು ರಾಜಕೀಯ ಚಟುವಟಿಕೆಗಳಿಂದ ದೂರವುಳಿದಿದ್ದರು.
2017ರ ಚುನಾವಣೆಯಲ್ಲಿ ನವಜೋತ್ಸಿಂಗ್ ಸಿಧು ಅಮೃತಸರ ಪೂರ್ವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಎದುರಾಳಿ ಬಿಜೆಪಿ ಪಕ್ಷದ ರಾಜೇಶ್ ಕುಮಾರ್ ಹನಿ ವಿರುದ್ಧ 42,000 ಮತಗಳ ಅಂತರದಿಂದ ಸಿಧು ಗೆಲುವು ಸಾಧಿಸಿದ್ದರು. ಈ ಕ್ಷೇತ್ರವನ್ನು 2012ರಿಂದ ಸಿಧು ಪತ್ನಿ ನವ್ಜೋತ್ ಕೌರ್ ಸಿಧು ಬಿಜೆಪಿ ಪಕ್ಷದಿಂದ ಗೆದ್ದು ಪ್ರತಿನಿಧಿಸುತ್ತಿದ್ದರು.












Click it and Unblock the Notifications