ಸ್ಟಾರ್ ನಟನ ಪೋಸ್ಟರ್ ಹಾಕಲು ಹೋಗಿ ಸಾವು ಕಂಡ 3 ಯುವಕರು
ಚಿತ್ತೂರು, ಸೆ. 2: ಪವರ್ ಸ್ಟಾರ್ ಎನಿಸಿಕೊಂಡಿರುವ ತೆಲುಗು ಚಿತ್ರರಂಗದ ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರ ಹುಟ್ಟುಹಬ್ಬ(ಸೆ.2)ದ ಅಂಗವಾಗಿ ಪೋಸ್ಟರ್ ಹಾಕಲು ಯತ್ನಿಸಿದ್ದ ಮೂವರು ಯುವಕರು ವಿದ್ಯುತ್ ತಗುಲಿ ದುರ್ಮರಣ ಹೊಂದಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
Recommended Video
ಕೊರೊನಾವೈರಸ್ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಣೆ ಸರಳವಾಗಿರಲಿ ಎಂದು ಎಲ್ಲಾ ಸ್ಟಾರ್ ನಟ, ನಟಿಯರು ಮನವಿ ಮಾಡಿಕೊಂಡಿದ್ದಾರೆ. ದೊಡ್ಡ ಕಟೌಟ್, ಪೋಸ್ಟರ್ ಹಾಕುವುದಕ್ಕೆ ನಿರ್ಬಂಧ ಹೇರಲಾಗಿದೆ.
ಚಿತ್ತೂರು ಜಿಲ್ಲೆಯ ಶಾಂತಿಪುರಂ ತಾಲೂಕಿನ ಕನಮಲದೊಡ್ಡಿ ಗ್ರಾಮದಲ್ಲಿ ಪವನ್ ಕಲ್ಯಾಣ್ ಅವರ 40 ಅಡಿ ಎತ್ತರದ ಪೋಸ್ಟರ್ ಹಾಕಲು ಒಟ್ಟು ಏಳು ಮಂದಿ ಯತ್ನಿಸಿದ್ದರು. ಇನ್ನೇನು ಪೋಸ್ಟರ್ ಹಾಕಿ ಮುಗಿಸುತ್ತಿದ್ದಂತೆ, ಮೃತರ ಪೈಕಿ ಒಬ್ಬಾತ ಪಕ್ಕದಲ್ಲಿದ್ದ 6.5 ಕೆವಿ ಎಲೆಕ್ಟ್ರಿಕ್ ತಂತಿಯನ್ನು ಮುಟ್ಟಿದ್ದಾನೆ, ನಂತರ ಹತ್ತಿರದಲ್ಲಿದ್ದ ಆತನ ಸೋದರ ಹಾಗೂ ಒಬ್ಬ ಸ್ನೇಹಿತನಿಗೂ ವಿದ್ಯುತ್ ಹರಿದಿದೆ. ಮೂವರು ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಗಾಯಗೊಂಡಿದ್ದಾರೆ ಎಂದು ಕುಪ್ಪಂ ಸರ್ಕಲ್ ಇನ್ಸ್ ಪೆಕ್ಟರ್ ಯತೀಂದ್ರ ಹೇಳಿದ್ದಾರೆ.

ಮೃತರನ್ನು ಸೋಮಶೇಖರ್ (30), ರಾಜಶೇಖರ್ (32) ಮತ್ತು ಅರುಣಾಚಲಂ (28) ಎಂದು ಗುರುತಿಸಲಾಗಿದೆ. ಕುಪ್ಪಂನ ಕೃಷ್ಣಗಿರಿ-ಪಾಲಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಟೌಟ್ ದೊಡ್ಡದಾಗಿ ಕಾಣಿಸಿಕೊಳ್ಳಬೇಕು ಎಂಬುದು ಅವರ ಉದ್ದೇಶವಾಗಿತ್ತು.

ಗಾಯಗೊಂಡವರನ್ನು ಕುಪ್ಪಂನ PES ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಹರಿಕೃಷ್ಣ, ಪವನ್ ಮತ್ತು ಸುಬ್ರಹ್ಮಣ್ಯಂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಯತೀಂದ್ರ ತಿಳಿಸಿದರು.
ಪವನ್ ಕಲ್ಯಾಣ್ ಪ್ರತಿಕ್ರಿಯೆ:
ಈ ಘಟನೆ ಬಗ್ಗೆ ನಟ ಮತ್ತು ಜನ ಸೇನಾ ಪಾರ್ಟಿ(ಜೆಎಸ್ ಪಿ) ಮುಖ್ಯಸ್ಥ ಪವನ್ ಕಲ್ಯಾಣ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಜನ ಸೇನಾ ಪಕ್ಷದಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪ್ರಕಟಿಸಿದ್ದಾರೆ.

ಈ ದುರ್ಘಟನೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಸಂಗೀತಗಾರ ತಮನ್, ನಿರ್ಮಾಪಕ ಬೋನಿ ಕಪೂರ್, ವಕೀಲ್ ಸಾಬ್ ಚಿತ್ರ ತಂಡ ತೀವ್ರ ವಿಷಾದ ವ್ಯಕ್ತಪಡಿಸಿದೆ.












Click it and Unblock the Notifications