ನನ್ನ ಗೆಳೆಯ ರಜನಿಯಿಂದ ಉತ್ತಮ ನಿರ್ಧಾರ: ಚಂದ್ರಬಾಬು ನಾಯ್ಡು
ಅಮರಾವತಿ, ಡಿ.3: ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿರುವ ಬಗ್ಗೆ ಗುರುವಾರ ಮಾಡಿದ ಘೋಷಣೆಯನ್ನು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹಾಗೂ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಸ್ವಾಗತಿಸಿದ್ದಾರೆ.
ಜನವರಿ 21,2021ರಂದು ಹೊಸ ರಾಜಕೀಯ ಬದುಕು ಆರಂಭ, ಡಿಸೆಂಬರ್ 31ರಂದು ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡುವುದಾಗಿ ರಜನಿಕಾಂತ್ ಘೋಷಿಸಿದ್ದಾರೆ.ರಜನಿ ಅವರ ರಾಜಕೀಯ ಪ್ರವೇಶದೊಂದಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಟಾರ್ ನಟ ಕಮಲ್ ಹಾಸನ್ ಅವರ ನಂತರ ಮತ್ತೊಬ್ಬ ಸ್ಟಾರ್ ಎಂಟ್ರಿ ಅಧಿಕೃತವಾಗಲಿದೆ.
ರಜನಿಕಾಂತ್ ಪರೋಕ್ಷವಾಗಿ ಯಾವಾಗಲೂ ರಾಜಕೀಯ ರಂಗದಲ್ಲಿದ್ದಾರೆ. ಈಗ ಸಕ್ರಿಯವಾಗಿ ರಾಜಕೀಯ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಅವರ ಅಪಾರ ಅಭಿಮಾನಿಗಳ ಬಳಗ ಅವರನ್ನು ಮುಂದಕ್ಕೆ ಕರೆದೊಯ್ಯಲಿದೆ, ಅವರಿಗೆ ರಾಜಕೀಯದಲ್ಲಿ ಉತ್ತಮ ಯಶಸ್ಸು ಸಿಗಲಿ ಎಂದು ಆಶಿಸುತ್ತೇನೆ ಎಂದು ತಿರುಪತಿಯಲ್ಲಿ ಪವನ್ ಕಲ್ಯಾಣ್ ಹೇಳಿದ್ದಾರೆ.

ಟಿಡಿಪಿ ಮುಖ್ಯಸ್ಥ ಚಂದ್ರಬಾಬು ಮಾತನಾಡಿ, ರಜನಿಕಾಂತ್ ಅವರು ನನ್ನ ಉತ್ತಮ ಸ್ನೇಹಿತರು ಮತ್ತು ಸಕ್ರಿಯ ರಾಜಕೀಯಕ್ಕೆ ಸ್ವಾಗತಿಸುತ್ತೇನೆ ಎಂದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಹೊಸ ಪಕ್ಷಗಳು ಉದಯಿಸುವುದು ಸಹಜ, ರಜನಿಕಾಂತ್ ತಮ್ಮ ಹೊಸ ಪಾತ್ರದಲ್ಲಿ ಯಶಸ್ವಿಯಾಗಲಿ ಎಂದಿದ್ದಾರೆ.
ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ಪ್ರಮುಖ ಪಕ್ಷಗಳು ಸದ್ದಿಲ್ಲದೇ ತಯಾರಿ ನಡೆಸಿವೆ. ಇದೆ ವೇಳೆ ರಜನಿ ಸಕ್ರಿಯ ರಾಜಕೀಯಕ್ಕೆ ಕಾಲಿರಿಸಲಿದ್ದು, ಹೊಸ ಪಕ್ಷ ಸ್ಥಾಪಿಸಲಿದ್ದಾರೆ.(ಪಿಟಿಐ)












Click it and Unblock the Notifications