ಈ ಕೂಡಲೇ ಮನೆ ಖಾಲಿ ಮಾಡಿ: ನಾಯ್ಡುಗೆ ಜಗನ್ ರೆಡ್ಡಿ ನೊಟೀಸ್
ಅಮರಾವತಿ, ಜೂನ್ 28: ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ತಮ್ಮ ರಾಜಕೀಯ ವಿರೋಧಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಒಂದಿಲ್ಲೊಂದು ಆಘಾತ ನೀಡುತ್ತಿರುವ ಜಗನ್ ಮೋಹನ್ ರೆಡ್ಡಿ, ಇದೀಗ ಅವರ ಖಾಸಗಿ ನಿವಾಸದ ಮೇಲೂ ಕಣ್ಣು ಹಾಕಿದ್ದಾರೆ.
ನಾಯ್ಡು ಅವರ ನಿವಾಸಕ್ಕೆ ಆತುಕೊಂಡಿದ್ದ ಪ್ರಜಾವೇದಿಕೆ ಕಟ್ಟಡವನ್ನು ಈಗಾಗಲೇ ನೆಲಸಮ ಮಾಡಲಾಗಿದ್ದು, ನಾಯ್ಡು ಅವರ ನಿವಾಸವೂ ಅಕ್ರಮ ಜಾಗದಲ್ಲಿದ್ದು, ಅದನ್ನೂ ಈ ಕೂಡಲೇ ಖಾಲಿ ಮಾಡುವಂತೆ ಜಗನ್ ಆದೇಶಿಸಿದ್ದಾರೆ.
ಕೃಷ್ಣ ನದಿ ತಟದ ನೂರು ಮೀ. ವ್ಯಾಪ್ತಿಯೊಳಗೆ ಕಟ್ಟಲಾದ 28 ಕಟ್ಟಡಗಳಿಗೆ ನೊಟೀಸ್ ಕಳಿಸಲಾಗಿದ್ದು, ಇದರಲ್ಲಿ ನಾಯ್ಡು ನಿವಾಸವೂ ಸೇರಿದೆ ಎನ್ನಲಾಗಿದೆ. ನದಿ ಸಂರಕ್ಷಣೆ ಕಾಯ್ದೆ-1884 ರ ಪ್ರಕಾರ ನದಿಯ 500 ಮೀ ವ್ಯಾಪ್ತಿಯೊಳಗೆ ಯಾವುದೇ ಕಟ್ಟಡ ಕಟ್ಟುವಂತಿಲ್ಲ.

ಉಂಡವಳ್ಳಿ ಎಂಬಲ್ಲಿ ನದಿತಟದಲ್ಲಿರುವ ಸುಸಜ್ಜಿತ ಬಂಗಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚಂದ್ರಬಾಬು ನಾಯ್ಡು ವಾಸವಿದ್ದಾರೆ. ಹೈದರಾಬಾದಿನಿಂದ ವಿಜಯವಾಡಕ್ಕೆ ರಾಜ್ಯ ಆಡಳಿತ ಕೇಂದ್ರ ಬದಲಾದ ಲಾಗಾಯ್ತೂ ಅವರು ಅಲ್ಲಿಯೇ ವಾಸವಿದ್ದಾರೆ. ಈ ಮನೆ ಓರ್ವ ಖಾಸಗಿ ವ್ಯಕ್ತಿಯದ್ದಾಗಿದ್ದು, ಹಿಂದಿನ ಸರ್ಕಾರ ಇದನ್ನು ಲೀಸಿಗೆ ತೆಗೆದುಕೊಂಡಿತ್ತು. ಇದನ್ನೇ ಚಂದ್ರಬಾಬು ನಾಯ್ಡು ಅವರ ಗೃಹಕಚೇರಿಯನ್ನಾಗಿ ಮಾಡಲಾಗಿತ್ತು. 'ಪ್ರಜಾ ವೇದಿಕಾ' ಎಂಬ ಮೀಟೀಂಗ್ ಹಾಲ್ ಅನ್ನೂ ಚಂದ್ರಬಾಬು ನಾಯ್ಡು ಇಲ್ಲಿ ಕಟ್ಟಿಕೊಂಡಿದ್ದರು. ಅದನ್ನು ಈಗಾಗಲೇ ಕೆಡವಲಾಗಿದ್ದು, ಚಂದ್ರಬಾಬು ನಾಯ್ಡು ಅವರು ವಾಸವಿದ್ದರು ಎಂಬ ಕಾರಣಕ್ಕೆ ಈ ಕಟ್ಟಡ ನೆಲಕ್ಕುರುಳುತ್ತಿದೆ!
ಇತ್ತೀಚೆಗಷ್ಟೇ ಚಂದ್ರಬಾಬು ನಾಯ್ಡು ಅವರ ಕುಟುಂಬಸ್ಥರಿಗೆ ನೀಡಿದ್ದ ಭದ್ರತೆಯನ್ನೂ ಜಗನ್ ವಾಪಸ್ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications