ಅಜ್ಜಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟ ಪೊಲೀಸರು: ಮಾನವೀಯ ಘಟನೆ
ಗುಂಟೂರು, ಸೆಪ್ಟೆಂಬರ್ 12: ಪೊಲೀಸರೆಂದರೆ ಕಠೋರ ಹೃದಯಿಗಳು, ಮಾನವೀಯತೆ ಇಲ್ಲದವರು ಎಂಬ ಅಭಿಪ್ರಾಯವಿದೆ. ಅದಕ್ಕೆ ಅಪವಾದವೆಂಬಂತಹ ಘಟನೆಗಳೂ ಇವೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಅಂತಹ ಮಾನವೀಯ ಘಟನೆಯೊಂದು ವರದಿಯಾಗಿದೆ.
ಪೊಲೀಸ್ ಠಾಣೆಯನ್ನೇ ತನ್ನ ಮನೆಯಾಗಿರಿಸಿಕೊಂಡು ಬದುಕಿದ್ದ ನಿರ್ಗತಿಕ ವೃದ್ಧೆಗೆ ಪೊಲೀಸರು ಗೌರವಪೂರ್ವಕ ಅಂತಿಮ ವಿದಾಯ ಹೇಳುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಮಾನವೀಯ ನಡೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಗುಂಟೂರು ಜಿಲ್ಲೆಯ ತಡೇಪಳ್ಳಿ ಪೊಲೀಸ್ ಠಾಣೆಯೇ ಈ ನಿರ್ಗತಿಕ ಅಜ್ಜಿಯ ಮನೆಯಾಗಿತ್ತು. ಆಕೆ ಅಲ್ಲಿ ಸುಮ್ಮನೆ ಆಶ್ರಯ ಪಡೆದಿರಲಿಲ್ಲ. ಆ ಠಾಣೆಗೆ ತನ್ನ ಸೇವೆಯನ್ನೂ ಸಲ್ಲಿಸಿದ್ದಳು. ಅದು ಒಂದೆರಡು ವರ್ಷವಲ್ಲ, ಸುಮಾರು ನಾಲ್ಕು ದಶಕ. ಪೊಲೀಸ್ ಕಾನ್ಸ್ಟೆಬಲ್ನಿಂದ ಹಿಡಿದು ಉನ್ನತ ಅಧಿಕಾರಿಗಳವರೆಗಿನ ಪ್ರತಿಯೊಬ್ಬರೂ ಹಣ ಸಂಗ್ರಹಿಸಿದರು. ಆಕೆಯ ಅಂತ್ಯಸಂಸ್ಕಾರ ನಡೆಸಿದರು.
ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅಜ್ಜಿ ಮಂಗಳವಾರ ನಿಧನರಾದರು. ಆ ಪೊಲೀಸ್ ಠಾಣೆಯಿಂದ ತಮ್ಮ ವೃತ್ತಿ ಬದುಕು ಆರಂಭಿಸಿದವರು, ಅಲ್ಲಿ ವರ್ಗಾವಣೆಯಾಗಿ ಕರ್ತವ್ಯ ನಿರ್ವಹಿಸಿದವರು, ಅಲ್ಲಿ ಕೆಲಸ ಮಾಡಿ ಬಳಿಕ ಡಿಎಸ್ಪಿಯಂತಹ ದೊಡ್ಡ ಹುದ್ದೆ ಪಡೆದವರು, ಹೀಗೆ ರಾಜ್ಯದ ಯಾವುದೇ ಮೂಲೆಗೆ ವರ್ಗಾವಣೆಯಾಗಿದ್ದ ಬಹುತೇಕರು ಸುದ್ದಿ ತಿಳಿಯುತ್ತಿದ್ದಂತೆಯೇ ತಡೇಪಳ್ಳಿ ಪೊಲೀಸ್ ಠಾಣೆಗೆ ದೌಡಾಯಿಸಿದ್ದರು. ತಮ್ಮ ಪ್ರೀತಿ ಪಾತ್ರರಾಗಿದ್ದ ಅಜ್ಜಿಗೆ ಅಂತಿಮ ನಮನದ ಗೌರವ ಸಲ್ಲಿಸಿದರು ಎಂದು 'ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ಅಂದಹಾಗೆ, ಸುಮಾರು 40 ವರ್ಷ ಪೊಲೀಸ್ ಠಾಣೆಯಲ್ಲಿದ್ದರೂ ಆಕೆಯ ನಿಜವಾದ ಹೆಸರು ಯಾರಿಗೂ ಗೊತ್ತಿಲ್ಲ. ಮೂಗಿಯಾಗಿದ್ದ ಆಕೆಯನ್ನು ಪೊಲೀಸರು ಪ್ರೀತಿಯಿಂದ ಭಾನವತ್ ಮೂಗಮ್ಮ ಎಂದು ಕರೆಯುತ್ತಿದ್ದರು. ಇಡೀ ಪೊಲೀಸ್ ಇಲಾಖೆ ಅವರನ್ನು ಗೌರವದಿಂದ ಕಾಣುತ್ತಿತ್ತು.

ಕೆಲಸ ಕೊಟ್ಟ ಎಸ್ಐ
ಸುಮಾರು 32 ವರ್ಷಗಳ ಹಿಂದೆ ಮೂಗಮ್ಮರ ಪತಿ ತೀರಿಹೋದರು. ಅದರಿಂದ ದಿಕ್ಕುಕಾಣದ ಆಕೆ ಅಂದಿನಿಂದ ಅವರು ಪೊಲೀಸ್ ಠಾಣೆಯ ಸುತ್ತಮುತ್ತಲಿನ ಆವರಣಗಳಲ್ಲಿ ಇರತೊಡಗಿದ್ದರು. 1988ರಲ್ಲಿ ತಡೇಪಳ್ಳಿ ಠಾಣೆಯಲ್ಲಿ ಎಸ್ಐ ಆಗಿದ್ದ ಸಾಂಬಶಿವ ರಾವ್ ಎಂಬುವವರು ದಿಕ್ಕಿಲ್ಲದೆ ಅಡ್ಡಾಡುತ್ತಿದ್ದ ಮಹಿಳೆಯನ್ನು ಕಂಡು ತಮ್ಮ ಮನೆಯಲ್ಲಿ ಕೆಲಸ ಮಾಡುವಂತೆ ಕೇಳಿದ್ದರು ಎಂಬುದನ್ನು ನಿವೃತ್ತ ಎಎಸ್ಐ ಎ. ರಾಜು ಎಂಬುವವರು ನೆನಪಿಸಿಕೊಳ್ಳುತ್ತಾರೆ.
ಎಸ್ಐ ಮನೆಯಲ್ಲಿ ಕೆಲಸ ಮಾಡಲು ಆರಂಭಿಸಿದ ಆಕೆ, ರಾತ್ರಿ ವೇಳೆ ಸಮೀಪದ ಪೊಲೀಸ್ ಕ್ವಾಟ್ರರ್ಸ್ಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ಹಗಲಿನ ವೇಳೆ ಸಮಯ ಸಿಕ್ಕಾಗ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದರು. ಪೊಲೀಸ್ ಠಾಣೆಯ ಯಾವುದೇ ಕೆಲಸಕ್ಕೂ ಆಕೆ ಸದಾ ಸಿದ್ಧರಿರುತ್ತಿದ್ದರು. ಎಸ್ಐ ವರ್ಗಾವಣೆಯಾದ ನಂತರವೂ ಅವರು ಮಂಗಳವಾರ ಕೊನೆಯುಸಿರು ಎಳೆಯುವವರೆಗೂ ಅದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು.

ಕುಟುಂಬದವರನ್ನು ಕಳೆದುಕೊಂಡ ಅಜ್ಜಿ
ಮೂಗಮ್ಮ ಮತ್ತು ಅವರ ಕುಟುಂಬದವರು ಮೂಲತಃ ನಾಲ್ಗೊಂಡ ಜಿಲ್ಲೆಯ ಸೂರ್ಯಪೇಟೆಯವರು. ತಡೇಪಳ್ಳಿಯಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುವ ಸಲುವಾಗಿ ಸ್ಥಳಾಂತರ ಹೊಂದಿದ್ದರು. ಖಾಸಗಿ ಕಂಪೆನಿ ಮುಚ್ಚಿಹೋದ ಬಳಿಕವೂ ಅಲ್ಲಿಯೇ ನೆಲೆಸಿದ್ದರು. ಅವರ ಕುಟುಂಬದ ಸದಸ್ಯರು ಒಬ್ಬರ ನಂತರ ಒಬ್ಬರಂತೆ ಎಲ್ಲರೂ ಸತ್ತುಹೋದರು. ಆಕೆ ಮಾತ್ರ ಅಲ್ಲಿಯೇ ಉಳಿದುಕೊಂಡಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಮೂಗಮ್ಮ ಪೊಲೀಸ್ ಠಾಣೆಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾತ್ರ ಮಾಡುತ್ತಿರಲಿಲ್ಲ, ಹಲವು ಬಾರಿ 'ಪೊಲೀಸ್' ಆಗಿಯೂ ಕೆಲಸ ಮಾಡಿದ್ದಾರೆ. ಠಾಣೆಯಲ್ಲಿ ಮಹಿಳಾ ಪೊಲೀಸರು ರಜೆಯಲ್ಲಿದ್ದಾಗ ಜೈಲಿನಲ್ಲಿದ್ದ ಮಹಿಳಾ ಕೈದಿಗಳನ್ನು ನೋಡಿಕೊಳ್ಳುವುದು ಮೂಗಮ್ಮನ ಕೆಲಸವಾಗಿತ್ತು. ಇಡೀ ಠಾಣೆಗೆ ಆಕೆ ತಾಯಿಯಂತಿದ್ದಳು ಎಂದು ಅವರು ಹೇಳುತ್ತಾರೆ.

ಎಲ್ಲ ಸಿಬ್ಬಂದಿ ಬಗ್ಗೆ ಕಾಳಜಿ ಹೊಂದಿದ್ದ ಅಜ್ಜಿ
ನಾವು ನಮ್ಮ ಕಚೇರಿ ಕೆಲಸಗಳಲ್ಲಿ ಬಿಜಿಯಾಗಿದ್ದಾಗ ಊಟದ ಸಮಯವಾಯಿತು, ಊಟ ಮಾಡಿ ಎಂದು ಆಕೆಯೇ ನಮಗೆ ನೆನಪಿಸುತ್ತಿದ್ದಳು. ಠಾಣೆಯ ಪ್ರತಿಯೊಬ್ಬ ಸಿಬ್ಬಂದಿಯ ಮೇಲೆಯೂ ಆಕೆ ಕಾಳಜಿ ಹೊಂದಿದ್ದಳು. ಕಾಯಿಲೆಯಿಂದ ಬಳಲುತ್ತಿದ್ದ ಆಕೆಯನ್ನು ನಾಲ್ಕೈದು ಬಾರಿ ಸಮೀಪದ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಆಕೆಯ ಆರೈಕೆಯನ್ನೂ ಪೊಲೀಸರು ಮಾಡಿದ್ದರು. ತಾವು ಸೋಮವಾರ ಸಂಜೆ ಠಾಣೆಯಿಂದ ಹೊರಡುವಾಗ ಅಜ್ಜಿ ಸಂಜ್ಞೆ ಮೂಲಕ ತನ್ನೊಂದಿಗೆ ಮಾತನಾಡಿದ್ದರು ಎಂದು ಅಧಿಕಾರಿಯೊಬ್ಬರು ನೆನಪಿಸಿಕೊಂಡರು.

ಗೌರವದ ವಿದಾಯ
ಅಜ್ಜಿಗೆ ಬೆಳಗಿನ ತಿಂಡಿ ನೀಡಲು ಹೋಗಿದ್ದ ಹೋಮ್ಗಾರ್ಡ್ ಆಕೆ ಮೃತಪಟ್ಟಿದ್ದನ್ನು ಕಂಡು ಠಾಣೆಯ ಎಲ್ಲ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆಕೆಯೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದ ಪೊಲೀಸ್ ಅಧಿಕಾರಿಗಳಲ್ಲಿ ಹೆಚ್ಚಿನವರು ಆಕೆಗೆ ಗೌರವಪೂರ್ಣ ವಿದಾಯ ಹೇಳಲು ಬಂದಿದ್ದರು. ಪೊಲೀಸರ ಕುಟುಂಬದವರೂ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ಅಜ್ಜಿಯ ಮೃತದೇಹವನ್ನು ಹೂವಿನಿಂದ ಅಲಂಕರಿಸಿದ ವಾಹನದಲ್ಲಿ ಇರಿಸಿ ತಮಟೆ ಸದ್ದುಗಳೊಂದಿಗೆ ಸ್ಮಶಾನಕ್ಕೆ ಕೊಂಡೊಯ್ದರು. ಆಕೆಯ ದೇಹ ಸಾಗಿಸುವ ವೇಳೆ ಪೊಲೀಸರೇ ಹೆಗಲುಕೊಟ್ಟರು. ವಿಧಿಬದ್ಧವಾಗಿ ಆಕೆಯ ಅಂತ್ಯಸಂಸ್ಕಾರ ನಡೆಸಿದರು.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications