ವಿಜಯವಾಡ ವಿಮಾನ ನಿಲ್ದಾಣದಲ್ಲಿ ಚಂದ್ರಬಾಬು ನಾಯ್ಡು ಜೊತೆ ನಡೆದಿದ್ದೇನು?
ಅಮರಾವತಿ, ಜೂನ್ 15: ತೆಲುಗುದೇಶಂ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶುಕ್ರವಾರ (ಜೂ 14) ತಡರಾತ್ರಿ ವಿಜಯವಾಡದ ಗನ್ನಾವರಂ ವಿಮಾನ ನಿಲ್ದಾಣದಲ್ಲಿ ತೀವ್ರ ಮುಜುಗರ ಎದುರಿಸಬೇಕಾಗಿ ಬಂದಿದೆ.
ವಿಐಪಿ ಸೌಲಭ್ಯ ನಿರಾಕರಿಸಿದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆಗೆ ಒಳಪಡಿಸಿದ ಘಟನೆ ನಡೆದಿದೆ.
ಜೊತೆಗೆ, ಬೆಂಗಾವಲು ವಾಹನದ ಜೊತೆ ಆಗಮಿಸಲೂ ನಾಯ್ಡುಗೆ ಅನುಮತಿ ಸಿಗದ ಹಿನ್ನಲೆಯಲ್ಲಿ ಸಾರ್ವಜನಿಕರ ಜೊತೆ ಬಸ್ ನಲ್ಲಿ ವಿಮಾನ ನಿಲ್ದಾಣಕ್ಕೆ ಬರಬೇಕಾಯಿತು.

ಘಟನೆಯ ಬಗ್ಗೆ ಕಿಡಿಕಾರಿರುವ ತೆಲುಗುದೇಶಂ, ಇದು ವೈಎಸ್ಆರ್ ಕಾಂಗ್ರೆಸ್ - ಬಿಜೆಪಿ ಪ್ರಾಯೋಜಿತ ಘಟನೆಯಾಗಿದ್ದು, ಆಂಧ್ರಪ್ರದೇಶದ ಇತಿಹಾಸದಲ್ಲೇ ಇಂತಹ ಕೀಳು ಮಟ್ಟದ ರಾಜಕೀಯ ನಡೆದಿರಲಿಲ್ಲ ಎಂದು ಕಿಡಿಕಾರಿದೆ.
ಭದ್ರತಾ ಸಿಬ್ಬಂದಿಗಳ ವರ್ತನೆ ತೀವ್ರ ಬೇಸರ ತರುವಂತದ್ದು, ಜೊತೆಗೆ ನಮ್ಮ ನಾಯಕನಿಗೆ (ಚಂದ್ರಬಾಬು ನಾಯ್ಡು) ಇರುವ 'Z ಪ್ಲಸ್' ಭದ್ರತೆಯ ವಿಚಾರದಲ್ಲೂ ಸರಕಾರ ರಾಜಿ ಮಾಡಿಕೊಂಡಿದೆ ಎಂದು ರಾಜ್ಯದ ಮಾಜಿ ಗೃಹಸಚಿವ ಚಿನ್ನ ರಾಜಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ಚಂದ್ರಬಾಬು ನಾಯ್ಡು ವಿರೋಧ ಪಕ್ಢದ ನಾಯಕರಾಗಿದ್ದರೂ ಇಂತಹ ಪರಿಸ್ಥಿತಿ ಎದುರಿಸಿರಲಿಲ್ಲ, ಕೇಂದ್ರ ಸರಕಾರ ಇವರ ಭದ್ರತೆಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ತೆಲುಗುದೇಶಂ ಆಗ್ರಹಿಸಿದೆ.












Click it and Unblock the Notifications