ಆಂಧ್ರಪ್ರದೇಶದಲ್ಲಿ ಪ್ರವಾಹ: 100 ರೈಲುಗಳ ಸಂಚಾರ ರದ್ದು
ಅಮರಾವತಿ ನವೆಂಬರ್ 22: ಆಂಧ್ರಪ್ರದೇಶದಲ್ಲಿ ಬೆಂಬಿಡದೆ ಸುರಿಯುತ್ತಿರುವ ಮಳೆಗೆ ಜನ ಹೈರಾಣಾಗಿದ್ದಾರೆ. ಭಾರೀ ಮಳೆಯಿಂದಾಗಿ ನೂರಾರು ವಾಹನಗಳು ನೀರಿನಲ್ಲಿ ಮುಳುಗಿ ಹೋಗಿವೆ. ಮನೆಗಳಿಗೆ ಮಳೆ ನೀರು ನುಗ್ಗಿದೆ. ದ್ವೀಪದಂತಾದ ಪ್ರದೇಶಗಳಲ್ಲಿ ಜನರು ಸಿಲುಕಿಕೊಂಡಿದ್ದಾರೆ. ಮೂವತ್ತು ಗ್ರಾಮಗಳು ಜಲಾವೃತಗೊಂಡಿವೆ. ಹೀಗಾಗಿ ಹೆದ್ದಾರಿಗಳಲ್ಲಿ ಸಂಚಾರ ಕೂಡ ಬಂದ್ ಮಾಡಲಾಗಿದೆ. ಮಾತ್ರವಲ್ಲದೆ ಹಳಿಗಳ ಮೇಲೆ ಅಪಾರ ಪ್ರಮಾಣದ ಮಳೆ ನೀರು ನಿಂತಿದ್ದು 100 ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಭಾನುವಾರದಿಂದಲೇ ದಕ್ಷಿಣ ಮತ್ತು ದೇಶದ ಇತರ ಭಾಗಗಳ ನಡುವೆ ರೈಲು ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ.
ಕೆಲ ದಿನಗಳಿಂದ ನಿರಂತರ ಮಳೆಗೆ ಆಂಧ್ರಪ್ರದೇಶ ಅಕ್ಷರಶ: ನಲುಗಿ ಹೋಗಿದೆ. ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವಿನ್ನಪ್ಪಿದವರ ಸಂಖ್ಯೆ 33 ಕ್ಕೆ ತಲುಪಿದೆ. ಪ್ರವಾಹಕ್ಕೆ ಒಳಗಾದ ಹೊಳೆಗಳಿಂದ ಹೆಚ್ಚಿನ ದೇಹಗಳು ಪತ್ತೆಯಾಗಿವೆ. ಇನ್ನೂ ಈವರೆಗೆ 12 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಚಿತ್ತೂರು, ಕಡಪ, ನೆಲ್ಲೂರು ಮತ್ತು ಅನಂತಪುರ ಜಿಲ್ಲೆಗಳಲ್ಲಿ 20,000 ಕ್ಕೂ ಹೆಚ್ಚು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಗೊಳಗಾಗಿದೆ.
ಭೀಕರ ಮಳೆಗೆ ಹೆದ್ದಾರಿ ರಸ್ತೆ ಸಂಚಾರ ಬಂದ್ ಮಾಡಲಾಗಿದ್ದು ರೈಲು ಸಂಚಾರ ಕೂಡ ರದ್ದುಗೊಳಿಸಲಾಗಿದೆ. ಚೆನ್ನೈ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿ-16 ಆಂಧ್ರಪ್ರದೇಶದ ನೆಲ್ಲೂರು ಮತ್ತು ವಿಜಯವಾಡ ನಡುವಿನ ಸಂಚಾರ ಕಡಿತಗೊಂಡಿದೆ. ಹೀಗಾಗಿ ದೇಶದ ದಕ್ಷಿಣ ಮತ್ತು ಪೂರ್ವ ಮತ್ತು ಉತ್ತರ ಭಾಗಗಳ ನಡುವಿನ ಎಲ್ಲಾ ಪ್ರಮುಖ ಸಂಪರ್ಕವನ್ನು ರದ್ದುಗೊಳಿಸಲಾಗಿದೆ. ಪೆನ್ನಾ ಪ್ರವಾಹವು ರೈಲು ಹಳಿಗಳ ಮೇಲೆ ಉಕ್ಕಿ ಹರಿಯುತ್ತಿರುವುದರಿಂದ ನೆಲ್ಲೂರು ಮತ್ತು ಪಡುಗುಪಾಡು ನಿಲ್ದಾಣಗಳ ನಡುವಿನ ಹಳಿಗೆ ಹಾನಿಯಾಗಿದೆ. ವಿಜಯವಾಡ ವಿಭಾಗದಲ್ಲಿ ಮತ್ತು ಗುಂತಕಲ್ ವಿಭಾಗದ ರಾಜಂಪೇಟೆ-ನಂದಲೂರು ವಿಭಾಗದಲ್ಲಿ ಹಳಿಗಳಿಗೆ ಹಾನಿಯಾದ ಕಾರಣ ದಕ್ಷಿಣ ಮಧ್ಯ ರೈಲ್ವೆಯು ದಕ್ಷಿಣದಿಂದ ಪಶ್ಚಿಮ ಭಾರತಕ್ಕೆ ಸಂಪರ್ಕ ಕಲ್ಪಿಸುವ ಹಲವಾರು ಎಕ್ಸ್ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ.

ದಕ್ಷಿಣ ಮಧ್ಯ ರೈಲ್ವೆಯ ಅಪ್ಡೇಟ್ಗಳ ಪ್ರಕಾರ, ನೆಲ್ಲೂರು ಬಳಿ ರೈಲ್ವೆ ಹಳಿಗಳಿಗೆ ಹಾನಿಯಾದ ಕಾರಣ 100 ಕ್ಕೂ ಹೆಚ್ಚು ಎಕ್ಸ್ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ. 29 ರೈಲನ್ನು ಬೇರೆಡೆಗೆ ತಿರುಗಿಸಲಾಗಿದೆ. ನಂದಲೂರು ಬಳಿ ಹಳಿಗಳು ಕೊಚ್ಚಿಹೋಗಿದ್ದರಿಂದ ಕಡಪ ಜಿಲ್ಲೆಯ ಮೂಲಕ ಹಾದು ಹೋಗುವ ಚೆನ್ನೈ-ಮುಂಬೈ ರೈಲು ಮಾರ್ಗವೂ ಸ್ಥಗಿತಗೊಂಡಿದೆ. ನಾಲ್ಕು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ 2,007 ಕ್ಕೂ ಹೆಚ್ಚು ಮನೆಗಳು, ಚಿತ್ತೂರಿನಲ್ಲಿ 911 ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಇದರಿಂದ 5.18 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಪರಿಹಾರ ಕಾರ್ಯಾಚರಣೆಯ ಭಾಗವಾಗಿ, ರಾಜ್ಯ ಸರ್ಕಾರವು ಪ್ರವಾಹ ಪೀಡಿತ ಕುಟುಂಬಗಳಿಗೆ 25 ಕೆಜಿ ಅಕ್ಕಿ, ಒಂದು ಕೆಜಿ ಬೇಳೆ, ಒಂದು ಲೀಟರ್ ಖಾದ್ಯ ಎಣ್ಣೆ, ತಲಾ ಒಂದು ಕೆಜಿ ಆಲೂಗಡ್ಡೆ ಮತ್ತು ಈರುಳ್ಳಿಯನ್ನು ಉಚಿತವಾಗಿ ವಿತರಿಸಲು ಆದೇಶಿಸಿದೆ.

ಜೊತೆಗೆ ರಾಯಲಚೆರುವು ಕೆರೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ದೇವಸ್ಥಾನ-ಪಟ್ಟಣ ತಿರುಪತಿ ಮತ್ತು ಸುತ್ತಮುತ್ತಲಿನ ಗ್ರಾಮಗಳು ಹೊಸ ಪ್ರವಾಹದ ಭೀತಿಯನ್ನು ಎದುರಿಸುತ್ತಿವೆ. ಚಿತ್ತೂರು ಜಿಲ್ಲೆಯ ಅಧಿಕಾರಿಗಳು 20 ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.

Recommended Video
ವೆಲಿಗಲ್ಲು ಜಲಾಶಯದಿಂದ ಪ್ರವಾಹದ ನೀರು ಹರಿದು ಬಂದಿದ್ದು, ಪಾಪಾಗ್ನಿ ನದಿಯ ಸೇತುವೆ ಕುಸಿದು ಕಡಪ ಮತ್ತು ಅನಂತಪುರಮು ಜಿಲ್ಲೆಗಳ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಎಸ್ಪಿಎಸ್ ನೆಲ್ಲೂರು ಜಿಲ್ಲೆಯ ಸೋಮಶಿಲಾ ಜಲಾಶಯದಿಂದ ಎರಡು ಲಕ್ಷ ಕ್ಯೂಸೆಕ್ಗೂ ಹೆಚ್ಚು ಪ್ರವಾಹದ ನೀರು ಹೊರಕ್ಕೆ ಹರಿದು ಬರುತ್ತಿದ್ದು ಪ್ರವಾಹಕ್ಕೆ ಕಾರಣವಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.












Click it and Unblock the Notifications