ಪತ್ರಿಕಾಗೋಷ್ಠಿಯಲ್ಲಿ ಸತತ 45ನಿಮಿಷ ಮೋದಿ ವಿರುದ್ದ ಕೆಂಡಕಾರಿದ ಚಂದ್ರಬಾಬು ನಾಯ್ಡು
Recommended Video

ವಿಶಾಖಪಟ್ಟಣ ವಿಮಾನನಿಲ್ದಾಣದಲ್ಲಿ ವೈ ಎಸ್ ಆರ್ ಕಾಂಗ್ರೆಸ್ಸಿನ ಜಗನ್ಮೋಹನ್ ರೆಡ್ಡಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೂ, ಪ್ರಧಾನಿಗೂ ಎಲ್ಲಿಂದ ಸಂಬಂಧ? ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಕಾರ, ದೇಶದ ಯಾವುದೇ ವಿಮಾನನಿಲ್ದಾಣದಲ್ಲಿನ ಭದ್ರತಾ ವೈಫಲ್ಯಕ್ಕೂ ರಾಜ್ಯಕ್ಕೂ ಸಂಬಂಧವಿಲ್ಲ, ಅದು ಏನಿದ್ದರೂ ಮೋದಿಯವರ ಸುಪರ್ದಿಯಲ್ಲಿ ಬರುವಂತದ್ದು.
ಜಗನ್ ಮೇಲಿನ ಹಲ್ಲೆಗೂ, ತೆಲುಗುದೇಶಂ ಪಕ್ಷಕ್ಕೂ ಒಂದಕ್ಕೊಂದು ಸಂಬಂಧವಿದೆ ಎನ್ನುವ ಆರೋಪ ಕೇಳಿಬರುತ್ತಿರುವ ಹಿನ್ನಲೆಯಲ್ಲಿ, ಪತ್ರಿಕಾಗೋಷ್ಠಿ ಕರೆದಿದ್ದ ಸಿಎಂ ನಾಯ್ಡು, ಸುಮಾರು 45ನಿಮಿಷಗಳ ಕಾಲ ಅಕ್ಷರಸಃ ಪ್ರಧಾನಿ ಮೋದಿ ವಿರುದ್ದ ಕೆಂಡಕಾರಿದ್ದಾರೆ.
ನೀವೆಲ್ಲಾ ಹಿರಿಯ ಪತ್ರಕರ್ತರಿದ್ದೀರಿ, ಸತ್ಯವನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡಬೇಕಾಗಿರುವ ನೀವು, ಜಗನ್ ಮೇಲಿನ ಹೆಲ್ಲೆಗೆ ನನ್ನನ್ನು ಯಾಕೆ ಪ್ರಶ್ನಿಸುತ್ತಿದ್ದೀರಿ, ಹೋಗಿ ಪ್ರಧಾನಿ ಮೋದಿಯವನ್ನು ಕೇಳಿ ಎಂದು ಮಾಧ್ಯಮದವರ ವಿರುದ್ದವೇ ನಾಯ್ಡು ಗರಂ ಆಗಿದ್ದಾರೆ.
ಮೋದಿಜೀ.. ನಿಮಗಿಂತ ಮೊದಲು ಮುಖ್ಯಮಂತ್ರಿಯಾಗಿದ್ದವನು ನಾನು, ನಿಮಗಿಂತ ಮೊದಲು ರಾಜಕೀಯಕ್ಕೆ ಬಂದವನು ನಾನು, ನಮ್ಮ ಮುಖಂಡರ ಮೇಲೆ ಆದಾಯ ತೆರಿಗೆ ದಾಳಿ ನಡೆಸುತ್ತೀರಾ. ಧೈರ್ಯವಿದ್ದರೆ ನನ್ನ ಮೇಲೆ ದಾಳಿ ನಡೆಸಿ ಎಂದು ಮೋದಿಗೆ ನಾಯ್ಡು ಚಾಲೆಂಜ್ ಮಾಡಿದ್ದಾರೆ.
ಜಗನ್ ಮೇಲೆ ನಡೆದಿರುವ ಹಲ್ಲೆ, ಮೋದಿಯವರ ಕೃಪಾಪೋಷಿತದಿಂದ ನಡೆದ ಘಟನೆ ಎಂದು ದೂರಿರುವ ಚಂದ್ರಬಾಬು ನಾಯ್ಡು, ಹಲ್ಲೆಯ ಸುತ್ತಮುತ್ತ ತನಗಿರುವ ಅನುಮಾನವನ್ನು ಎಳೆಎಳೆಯಾಗಿ ಹೊರಹಾಕಿದ್ದಾರೆ. ನಾಯ್ಡು, ಪತ್ರಿಕಾಗೋಷ್ಠಿಯಲ್ಲಿನ ಪ್ರಮುಖಾಂಶಗಳು..

ಜಗನ್ ಮೇಲೆ ನಡೆದಿರುವ ಹಲ್ಲೆಯನ್ನು ನಾನು ಖಂಡಿಸುತ್ತೇನೆ
ಜಗನ್ ಮೇಲೆ ನಡೆದಿರುವ ಹಲ್ಲೆಯನ್ನು ನಾನು ಖಂಡಿಸುತ್ತೇನೆ. ವಿಶಾಖಪಟ್ಟಣದಲ್ಲಿ ಘಟನೆ ನಡೆದಿದ್ದರೂ, ಅಲ್ಲಿನ ಆಸ್ಪತ್ರೆಗೆ ದಾಖಲಾಗದೇ 600 ಕಿಲೋಮೀಟರ್ ದೂರವಿರುವ ಹೈದರಾಬಾದ್ ನಲ್ಲಿನ ಆಸ್ಪತ್ರೆಯಲ್ಲಿ ಯಾಕೆ ದಾಖಲಾಗಬೇಕಿತ್ತು. ಯಾಕೆ ವೈಜಾಗ್ ನಲ್ಲಿ ಆಸ್ಪತೆಗಳಿಲ್ಲವೇ? ಹೈದರಾಬಾದ್ ವಿಮಾನನಿಲ್ದಾಣದಿಂದ ನೇರ ಆಸ್ಪತ್ರೆಗೆ ಬರದೇ ಮನೆಗೆ ಹೋಗಿ, ಆಸ್ಪತ್ರೆಗೆ ದಾಖಲಾಗಿರುವ ಹಿಂದಿನ ನಾಟಕವೇನು?

ಆಸ್ಪತ್ರೆಗೆ ದಾಖಲಾಗುವ ಮುನ್ನ ದೆಹಲಿಗೆ ಫೋನ್ ಮಾಡಿ ಮಾತನಾಡಿರುವ ವಿಚಾರ
ಆಸ್ಪತ್ರೆಗೆ ದಾಖಲಾಗುವ ಮುನ್ನ ದೆಹಲಿಗೆ ಫೋನ್ ಮಾಡಿ ಮಾತನಾಡಿರುವ ವಿಚಾರ ನಮಗೆ ತಿಳಿದಿದೆ. ಆಪರೇಶನ್ ಬ್ಲೂ ಹೆಸರಿನಲ್ಲಿ, ಹಲ್ಲೆ ನಡೆಸಿ, ಗೊಂದಲ ಎಬ್ಬಿಸಿ, ಕಾನೂನು ಸುವ್ಯವಸ್ಥೆ ಹದೆಗೆಡುವಂತೆ ಮಾಡಿ, ರಾಷ್ಟ್ರಪತಿ ಆಡಳಿತ ಜಾರಿಗೆ ತರುವ ಹುನ್ನಾರವೇ ಇದು ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ. ಈ ಎಲ್ಲಾ ನಾಟಕಗಳನ್ನು ನಾನು ಮೆಟ್ಟಿನಿಲ್ಲುತ್ತೇನೆ - ಚಂದ್ರಬಾಬು ನಾಯ್ಡು.

ರಾಜ್ಯಪಾಲ ಇ ಎಸ್ ಎಲ್ ನರಸಿಂಹನ್
ಜಗನ್ ಮೇಲೆ ಹಲ್ಲೆ ನಡೆದ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ರಾಜ್ಯಪಾಲ ಇ ಎಸ್ ಎಲ್ ನರಸಿಂಹನ್, ರಾಜ್ಯದ ಡಿಜಿಪಿಗೆ ನೇರವಾಗಿ ಫೋನ್ ಮಾಡುತ್ತಾರೆ. ಸರಕಾರ ಅಸ್ತಿತ್ವದಲ್ಲಿರುವಾಗ ನೇರವಾಗಿ ಡಿಜಿಪಿಯಿಂದ ಮಾಹಿತಿ ಪಡೆದುಕೊಳ್ಳುವ ಕ್ರಮವಿದೆಯಾ ಎಂದು ಪ್ರಶ್ನಿಸಿರುವ ನಾಯ್ಡು, ಕೇಂದ್ರದ ಅಣತಿಯಂತೆ ನಡೆಯುತ್ತಿರುವ ಈ ರಾಜಕೀಯದಲ್ಲಿ ರಾಜ್ಯಪಾಲರೂ ಶಾಮೀಲಾಗಿದ್ದಾರಾ ಎನ್ನುವ ಸಂಶಯ ಕಾಡದೇ ಇರದು ಎಂದು ಆರೋಪಿಸಿದ್ದಾರೆ.

ಮೋದಿ ಮುಖ್ಯಮಂತ್ರಿಯಾಗುವ ಮುನ್ನವೇ ನಾನು ಆಂಧ್ರದ ಸಿಎಂ ಆಗಿದ್ದವನು
ಮೋದಿ ಗುಜರಾತಿನ ಮುಖ್ಯಮಂತ್ರಿಯಾಗುವ ಮುನ್ನವೇ ನಾನು ಅಖಂಡ ಆಂಧ್ರದ ಸಿಎಂ ಆಗಿದ್ದವನು, ನನಗೆ ಮೋದಿ ರಾಜಕೀಯ ಕಲಿಸಿಕೊಡುವುದು ಬೇಕಾಗಿಲ್ಲ. ತೆಲುಗುದೇಶಂ ಪಕ್ಷದ ಕಾರ್ಯಕರ್ತರು, ಮುಖಂಡರು, ಬೆಂಬಲಿಗರ ಮೇಲೆ, ಐಟಿ ದಾಳಿ ನಡೆಸಲಾಗುತ್ತಿದೆ. ಕೇಂದ್ರ ಸರಕಾರಕ್ಕೆ ಧೈರ್ಯವಿದ್ದರೆ, ನನ್ನ ಮೇಲೆ ದಾಳಿ ನಡೆಸಲಿ. ಮೋದಿ, ಅಮಿತ್ ಶಾ, ಕೆಸಿಆರ್, ಜಗನ್ ಎಲ್ಲಾ ಸೇರಿ ಏನು ರಾಜಕೀಯ ನಾಟಕ ಮಾಡಲು ಹೊರಟಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ನನ್ನಲ್ಲಿದೆ - ಚಂದ್ರಬಾಬು ನಾಯ್ಡು.

ಎಲ್ಲಾ ನಾಟಕೀಯ ಘಟನೆಗಳ ಹಿಂದೆ ಮೋದಿ ಸರಕಾರದ ಕೈವಾಡವಿರುವುದು ಸ್ಪಷ್ಟ
ಜಗನ್ ಮೇಲೆ ನಡೆದ ದಾಳಿ ನಡೆಸಿದವವನು, ಟಿಡಿಪಿ ಮುಖಂಡನ ಒಡೆತನದ ಹೋಟೆಲ್ ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದವನಲ್ಲವೇ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ನಾಯ್ಡು, ಇದೇ ರೀತಿ ಪ್ರಧಾನಿ ಮೋದಿಯವರಲ್ಲೂ ಪ್ರಶ್ನೆ ಕೇಳುವ ಧೈರ್ಯ ನಿಮಗಿದೆಯೇ ಎಂದು ಮರು ಪ್ರಶ್ನಿಸಿದ್ದಾರೆ. ಈ ಎಲ್ಲಾ ನಾಟಕೀಯ ಘಟನೆಗಳ ಹಿಂದೆ ಮೋದಿ ಸರಕಾರದ ಕೈವಾಡವಿರುವುದು ಸ್ಪಷ್ಟ. ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳಲಿದೆ - ಚಂದ್ರಬಾಬು ನಾಯ್ಡು.












Click it and Unblock the Notifications