ಸಿಎಂ Vs ಪವರ್ ಸ್ಟಾರ್ ರಾಜಕೀಯ ವೈಷಮ್ಯಕ್ಕೆ ಭೀಮ್ಲಾ ನಾಯಕ್ ವೇದಿಕೆ
ಆಂಧ್ರ ಪ್ರದೇಶದ ರಾಜಕೀಯ ಬೇರೆ ರಾಜ್ಯದಂತಲ್ಲ ಕಾರಣ ಸಿನಿಮಾ ರಂಗದವರೂ ಬಹಳಷ್ಟು ಮಂದಿ ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಂಡವರು. ಹಾಗಾಗಿ, ಇಲ್ಲಿ ಪೊಲಿಟಿಕ್ಸ್ ಮತ್ತು ಸಿನಿಮಾ ರಂಗದ ನಡುವೆ ವೈಷಮ್ಯದ ವಿದ್ಯಮಾನಗಳು ನಡೆಯುತ್ತಲೇ ಇವೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಯಾವುದೇ ರಂಗವನ್ನು ನೆಮ್ಮದಿಯಿಂದ ಇರಲು ಸಿಎಂ ಜಗನ್ ಮೋಹನ್ ರೆಡ್ಡಿ ಬಿಡುತ್ತಿಲ್ಲ ಎನ್ನುವ ಆರೋಪವನ್ನು ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮಾಡಿದ್ದಾರೆ. ಸಿಎಂ ಜಗನ್ ಒಬ್ಬ ಉಗ್ರವಾದಿ ಎಂದು ನಾಯ್ಡು ಟ್ವೀಟ್ ಮೂಲಕ ಆರೋಪಿಸಿದ್ದಾರೆ.
GHMC polls: ಬಿಜೆಪಿಗೆ ಬೇಷರತ್ ಬೆಂಬಲ ಘೋಷಿಸಿದ ಪವರ್ ಸ್ಟಾರ್
ಮಾರ್ಚ್ 2014ರಲ್ಲಿ ತೆಲುಗು ಚಿತ್ರೋದ್ಯಮದ ಪವರ್ ಸ್ಟಾರ್ ಎಂದು ಕರೆಯಲ್ಪಡುವ ಪವನ್ ಕಲ್ಯಾಣ್ ಜನಸೇನಾ ಪಕ್ಷವನ್ನು ಹುಟ್ಟು ಹಾಕಿದ್ದರು. ಆಂಧ್ರ ಪ್ರದೇಶದ ರಾಜಕೀಯದಲ್ಲಿ ಈ ಪಕ್ಷ ಭಾರೀ ಸದ್ದನ್ನು ಮಾಡಲಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಆದರೆ, ಜಗನ್ ಆರ್ಭಟದ ನಡುವೆ ಪವನ್ ಕಲ್ಯಾಣ್ ಪಕ್ಷ ಬಾಲಮುದುಡಿ ಕೂರುವಂತಾಗಿತ್ತು.
ಇದಾದ ನಂತರವೂ ಜಗನ್ ಮತ್ತು ಪವನ್ ಕಲ್ಯಾಣ್ ನಡುವೆ ರಾಜಕೀಯ ದ್ವೇಷ ಮುಂದುವರಿಯುತ್ತಲೇ ಬರುತ್ತಿದೆ. ಈಗ, ಪವನ್ ಕಲ್ಯಾಣ್ ಅವರ ಹೊಸ ಸಿನಿಮಾ ಭೀಮ್ಲಾ ನಾಯಕ್ ಸಿನಿಮಾದ ಮೇಲೆ ಜಗನ್ ಪ್ರಹಾರ ನಡೆಸುತ್ತಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ.
ಆಂಧ್ರದಲ್ಲಿ ಜಗನ್ ಸೆಂಟಿಮೆಂಟ್ ರಾಜಕೀಯಕ್ಕೆ ಸುಸ್ತಾದ ಚಂದ್ರಬಾಬು ನಾಯ್ಡು
ಪವನ್ ಕಲ್ಯಾಣ್, ರಾಣಾ ದಗ್ಗುಬಾಡಿ ಪ್ರಮುಖ ಭೂಮಿಕೆಯಲ್ಲಿರುವ ಭೀಮ್ಲಾ ನಾಯಕ್
ಪವನ್ ಕಲ್ಯಾಣ್, ರಾಣಾ ದಗ್ಗುಬಾಡಿ ಪ್ರಮುಖ ಭೂಮಿಕೆಯಲ್ಲಿರುವ ಭೀಮ್ಲಾ ನಾಯಕ್ ಸಿನಿಮಾ ಕಳೆದ ಫೆಬ್ರವರಿ 25ರಂದು ತೆರೆ ಕಂಡಿತ್ತು. ಸಿನಿಮಾಗೆ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಆಂಧ್ರ ಮತ್ತು ತೆಲಂಗಾಣ ಮಾರುಕಟ್ಟೆಯಲ್ಲೂ ಚಿತ್ರ ಕೋಟಿ ಕೋಟಿ ಬಾಚಿತ್ತು. ಈಗ ಈ ಸಿನಿಮಾದ ಮೇಲೆ ಜಗನ್ ಕಣ್ಣುಬಿದ್ದಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಅನಧಿಕೃತ ಮೂಲಗಳ ಪ್ರಕಾರ ಸಿನಿಮಾ ಮೇಲೆ ಮೇಲೇಳಬಾರದೆಂದು ಸಿಎಂ ಜಗನ್ ಪ್ರತೀದಿನ ಮೂರು ಕೋಟಿ ಖರ್ಚು ಮಾಡುತ್ತಿದ್ದಾರೆ ಎನ್ನುವ ಅಂತೆಕಂತೆ ಸುದ್ದಿಗಳು ಬರುತ್ತಿವೆ.
ಜಗನ್ , ಪವನ್ ನಡುವಿನ ವೈಷಮ್ಯಕ್ಕೆ ವೇದಿಕೆ
ಜಗನ್ ಅಧಿಕಾರಕ್ಕೆ ಬಂದ ನಂತರ ಚಿತ್ರಮಂದಿರದ ಟಿಕೆಟ್ ದರದ ಮೇಲೆ ಅಂಕುಶ ಹಾಕಿದ್ದರು. ಈ ಹೊಸ ನಿಯಮ ಮಲ್ಟಿಪ್ಲೆಕ್ಸ್ ಗಳಿಗೂ ಅನ್ವಯಿಸಿತ್ತು. ಪ್ರದೇಶಕ್ಕೆ ಅನುಗುಣವಾಗಿ ಮತ್ತು ಎಸಿ ಮತ್ತು ಎಸಿಯೇತರ ಚಿತ್ರಮಂದಿರಗಳಿಗೆ ದರದ ಪಟ್ಟಿಯನ್ನು ಜಗನ್ ಸರಕಾರ ಜಾರಿಗೆ ತಂದಿತ್ತು. ಇದರಿಂದ, ಹಲವು ಚಿತ್ರಮಂದಿರಗಳು ಪರ್ಮನೆಂಟಾಗಿ ಬಂದ್ ಮಾಡಿದ್ದವು. ಇದು, ಚಿತ್ರೋದ್ಯಮ ಮತ್ತು ಸಿಎಂ ಜಗನ್ ನಡುವಿನ ವೈಷಮ್ಯಕ್ಕೆ ವೇದಿಕೆ ನಿರ್ಮಿಸಿತ್ತು. ಇದರ ಮುಂದುವರಿದ ಭಾಗವೇ, ಈಗ ಆಂಧ್ರದಲ್ಲಿ ಸದ್ದು ಮಾಡುತ್ತಿರುವ ಭೀಮ್ಲಾ ನಾಯಕ್ ಸಿನಿಮಾದ ಮೇಲೆ ಪ್ರಹಾರ ಮಾಡಲು ಹೊರಟಿದ್ದು ಎಂದು ಹೇಳಲಾಗುತ್ತಿದೆ.
ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸಾಲುಸಾಲು ಟ್ವೀಟ್
ಆಂಧ್ರದಲ್ಲಿ ಮತ್ತೆ ರಾಜಕೀಯ ಉತ್ತುಂಗಕ್ಕೇರಲು ಹಲವಾರು ಪ್ರಯತ್ನಗಳನ್ನು ವಿಫಲವಾಗುತ್ತಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಈಗ ಸಿನಿಮಾ ರಂಗ ವರ್ಸಸ್ ಸಿಎಂ ಜಗನ್ ವಿಚಾರದಲ್ಲಿ ಮಾತಿಗೆ ಇಳಿದಿದ್ದಾರೆ. ಈ ಬಗ್ಗೆ ಸಾಲುಸಾಲು ಟ್ವೀಟ್ ಮಾಡಿರುವ ನಾಯ್ಡು, "ಸಿಎಂ ಜಗನ್ ಅವರು ರಾಜ್ಯದಲ್ಲಿ ಯಾವ ರಂಗವನ್ನೂ ಉಳಿಯಲು ಬಿಡುವಂತೆ ಕಾಣುತ್ತಿಲ್ಲ . ಸಿನಿಮಾ ರಂಗವನ್ನು ತೀವ್ರವಾಗಿ ಇವರು ಬಾಧಿಸುತ್ತಿದ್ದಾರೆ. 'ಭೀಮ್ಲಾ ನಾಯಕ್' ಸಿನಿಮಾ ವಿಷಯಕ್ಕೆ ಸಂಬಂಧಿಸಿದಂತೆ ಜಗನ್ ನಡೆದುಕೊಳ್ಳುತ್ತಿರುವ ರೀತಿ ಉಗ್ರವಾದಿತನವನ್ನು ತೋರುತ್ತದೆ'' ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.
ಪವನ್ ಕಲ್ಯಾಣ್ ಅವರ ವಕೀಲ್ ಸಾಬ್ ಸಿನಿಮಾಗೂ ತೊಂದರೆ
ಎಲ್ಲಾ ಸಿನಿಮಾಗಳಿಗೂ ಸಿಎಂ ಜಗನ್ ಅವರಿಂದ ತೊಂದರೆ ಎಂದು ಹೇಳಲು ಸಾಧ್ಯವಿಲ್ಲ. ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದ್ದ ಪುಷ್ಪ ಸಿನಿಮಾ ಈ ಸಮಸ್ಯೆಗಳನ್ನು ಎದುರಿಸಿಲ್ಲ. ಪವನ್ ಕಲ್ಯಾಣ್ ಅವರ ವಕೀಲ್ ಸಾಬ್ ಸಿನಿಮಾಗೂ ತೊಂದರೆಯಾಗಿತ್ತು. ಸರಕಾರೀ ಅಧಿಕಾರಿಗಳನ್ನು ಚಿತ್ರಮಂದಿರದ ಬಳಿ ಸಿಎಂ ಜಗನ್ ಕಾವಲು ಕಾಯಲು ಬಿಟ್ಟಿದ್ದಾರೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ. ಒಟ್ಟಿನಲ್ಲಿ, ಸಿಎಂ ಜಗನ್ ಅವರಿಂದ ಪವನ್ ಕಲ್ಯಾಣ್ ತೊಂದರೆಯನ್ನು ಅನುಭವಿಸುತ್ತಲೇ ಇದ್ದಾರೆ ಎನ್ನುವುದು ಚಿತ್ರರಂಗದವರ ಆರೋಪ.