ಆಂಧ್ರಪ್ರದೇಶ ಹೊಸ ಸಚಿವ ಸಂಪುಟ ರಚನೆಗೆ ಸ್ವರೂಪಾನಂದೇಂದ್ರ ಸರಸ್ವತಿ ಸಲಹೆ ಪಡೆದ ಜಗನ್
ಅಮರಾವತಿ (ಆಂಧ್ರಪ್ರದೇಶ), ಜೂನ್ 4: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಮಂಗಳವಾರ ವಿಶೇಷ ವಿಮಾನದಲ್ಲಿ ವಿಶಾಖಪಟ್ಟಣಕ್ಕೆ ತೆರಳಿದ್ದು, ಆಧ್ಯಾತ್ಮಿಕ ಗುರು ಸ್ವಾಮಿ ಸ್ವರೂಪಾನಂದೇಂದ್ರ ಸರಸ್ವತಿ ಅವರ ಆಶೀರ್ವಾದ ಪಡೆದಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸಲು ಯಾವುದೇ ಸಮಸ್ಯೆ ಆಗದಿರಲಿ ಎಂದು ಪ್ರಾರ್ಥಿಸಿದ್ದಾರೆ ಎಂದು ವೈಎಸ್ ಆರ್ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಕ್ರಿಶ್ಚಿಯನ್ ಧರ್ಮದ ಅನುಯಾಯಿಯಾದ ಜಗನ್ ಮೋಹನ್ ರೆಡ್ಡಿ ಆಶ್ರಮಕ್ಕೆ ತೆರಳುವ ಮೊದಲು ಸಾಂಪ್ರದಾಯಿಕವಾದ ಪಂಚೆ, ಕುರ್ತಾ ಧರಿಸಿದ್ದರು. ಸ್ವಾಮಿಗಳಿಗೆ ಹಣ್ಣು ಮತ್ತಿತರ ಉಡುಗೊರೆಗಳನ್ನು ನೀಡಿದರು. ಅವರ ಕಾಲ ಬಳಿ ಕೂತಿದ್ದ ಜಗನ್ ಮೋಹನ್ ರೆಡ್ಡಿ ಹೊಸ ಸಂಪುಟ ರಚನೆ ಬಗ್ಗೆ ಸ್ವಾಮೀಜಿಯ ಸಲಹೆ ಪಡೆದರು.
ಜೂನ್ ಎಂಟನೇ ತಾರೀಕು ಹೊಸ ಸಂಪುಟದ ಸಚಿವರು ಅಮರಾವತಿಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜಗನ್ ಭೇಟಿ ಬಗ್ಗೆ ಯಾವುದೇ ಮಾಹಿತಿ ನೀಡಲು ಆಶ್ರಮದ ಆಡಳಿತ ಮಂಡಳಿ ನಿರಾಕರಿಸಿದೆ. ಮೇ ಇಪ್ಪತ್ಮೂರನೇ ತಾರೀಕಿನಂದು ಪ್ರಕಟವಾದ ಫಲಿತಾಂಶದಲ್ಲಿ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಆಂಧ್ರಪ್ರದೇಶದಲ್ಲಿ ಅಭೂತಪೂರ್ವ ಜಯ ಸಾಧಿಸಿದೆ.
ಮೂಲಗಳ ಪ್ರಕಾರ, ಮೂರು ವರ್ಷಗಳ ಹಿಂದೆ ಸ್ವರೂಪಾನಂದೇಂದ್ರ ಅವರಿಗೆ ಜಗನ್ ಹತ್ತಿರವಾದರು. ಅವರು ಆಗ ಉತ್ತರಾಖಂಡದ ಋಷಿಕೇಶದಲ್ಲಿ ಚಾತುರ್ಮಾಸ್ಯದಲ್ಲಿ ಇದ್ದರು. ಆ ವೇಳೆ, ವಿಜಯವಾಡದಲ್ಲಿ ರಸ್ತೆ ವಿಸ್ತರಣೆಗಾಗಿ ಚಂದ್ರಬಾಬು ನಾಯ್ಡು ಸರಕಾರ ದೇವಾಲಯಗಳ ಕೆಲ ಭಾಗವನ್ನು ಒಡೆಯಲು ಆದೇಶ ನೀಡಿತ್ತು. ಅದನ್ನು ಸ್ವಾಮೀಜಿ ಬಲವಾಗಿ ವಿರೋಧಿಸಿ, ಸುದ್ದಿಯಲ್ಲಿ ಇದ್ದರು.
ಋಷಿಕೇಶದಲ್ಲಿ ಜಗನ್ ರಿಂದ ಸ್ವರೂಪಾನಂದೇಂದ್ರ ಸರಸ್ವತಿ ಕೆಲವು ಪೂಜೆ ಮಾಡಿಸಿದ್ದರು. ಜತೆಗೆ ರಾಜಶೇಖರ್ ರೆಡ್ಡಿ ಅವರ ಪಿಂಡ ಪ್ರದಾನ ಮಾಡಿಸಿದ್ದರು. ಆಗಿನಿಂದ ಜಗನ್ ಮೋಹನ್ ರೆಡ್ಡಿ ಅವರು ಸ್ವಾಮೀಜಿ ಜತೆ ನಿರಂತರ ಸಂಪರ್ಕದಲ್ಲಿ ಇದ್ದರು. ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ಹಾಗೂ ಅಂಧ್ರಪ್ರದೇಶದಲ್ಲಿ ಜಗನ್ ಗೆಲುವಿನ ಮೂಲಕ ಸ್ವರೂಪಾನಂದೇಂದ್ರ ಸರಸ್ವತಿ ಅವರ ಜನಪ್ರಿಯತೆ ಉತ್ತುಂಗದಲ್ಲಿ ಇದೆ. ಕೆಸಿಆರ್ ಅವರಿಗೆ ಸಲಹೆ ನೀಡುವ ಅವರು, ಇದೀಗ ಜಗನ್ ಗೂ ಸಲಹೆ ನೀಡುತ್ತಿದ್ದಾರೆ.
ಜಗನ್ ರೆಡ್ಡಿ ಕ್ರೈಸ್ತ ಮತದಿಂದ ಹಿಂದುವಾಗಿ ಮತಾಂತರವಾಗಿದ್ದು ನಿಜಾನಾ?
ಯಾವಾಗ ಟಿಆರ್ ಎಸ್ ಗೆಲುವಿಗಾಗಿ ರಾಜ ಶ್ಯಾಮಲ ಯಾಗಂ ಅನ್ನು ಸ್ವಾಮೀಜಿ ಮಾಡಿಸಿದರೋ ಆಗಿನಿಂದ ಸ್ವಾಮೀಜಿ ಹೆಸರು ಮತ್ತಷ್ಟು ಪ್ರಚಲಿತಕ್ಕೆ ಬಂತು. ತೆಲಂಗಾಣದ ಅಧಿಕಾರಕ್ಕೆ ಬಂದ ಹತ್ತು ದಿನದೊಳಗೆ ಕೆಸಿಆರ್ ವಿಶಾಖ ಪಟ್ಟಣಕ್ಕೆ ತೆರಳಿ ಸ್ವಾಮೀಜಿ ಆಶೀರ್ವಾದ ಪಡೆದಿದ್ದರು. ಇನ್ನೊಂದು ವಿಚಾರ ಏನೆಂದರೆ, ಕೆಸಿಆರ್ ರಿಂದ ಸ್ಫೂರ್ತಿಗೊಂಡ ವೈಎಸ್ ಆರ್ ಕಾಂಗ್ರೆಸ್ ನಾಯಕರು ಕೂಡ ಮೂರು ದಿನಗಳ ಕಾಲ ರಾಜ ಶ್ಯಾಮಲ ಯಾಗ ಕೈಗೊಂಡಿದ್ದರು.