ಚೀನಾದಲ್ಲಿ ಸಿಲುಕಿದ ಆಂಧ್ರದ ಟೆಕ್ಕಿ, ಈ ತಿಂಗಳು ಮದ್ವೆ ಇದೆ ಪ್ಲೀಸ್!
ಕರ್ನೂಲ್, ಫೆಬ್ರವರಿ 03: ಚೀನಾದಲ್ಲಿ ಕೊರೊನಾ ವೈರಾಣು ದಾಳಿಗೆ ತುತ್ತಾಗಿರುವ ಪ್ರದೇಶಗಳ ಪೈಕಿ ವುಹಾನ್ ಪ್ರಾಂತ್ಯ ಹೆಚ್ಚು ತೊಂದರೆಗೊಳಗಾಗಿದೆ. ವುಹಾನ್ ನಲ್ಲಿರುವ ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಕೊನೆಗೂ ಕಲ್ಪಿಸಲಾಗಿದೆ. ಆದರೆ, ಆಂಧ್ರ ಮೂಲದ ಟಿಸಿಎಸ್ ಟೆಕ್ಕಿಯೊಬ್ಬರು ಫ್ಲೈಟ್ ಟಿಕೆಟ್ ಸಿಗದೆ ಸಾಮಾಜಿಕ ಜಾಲ ತಾಣದ ಮೂಲಕ ನೆರವಿಗಾಗಿ ಮನವಿ ಮಾಡಿಕೊಂಡಿದ್ದಾರೆ.
ಚೀನಾದಲ್ಲಿರುವ ಭಾರತೀಯರನ್ನು ಎರಡು ವಿಶೇಷ ವಿಮಾನಗಳ ಮೂಲಕ ನವದೆಹಲಿಗೆ ಕರೆತರಲಾಗಿದೆ. ಆದರೆ, ಆಂಧ್ರಪ್ರದೇಶದ ಕರ್ನೂಲ್ ಮೂಲದ ಅನ್ನೆಂ ಜ್ಯೋತಿ ಎಂಬ ಯುವ ಸಾಫ್ಟ್ ವೇರ್ ಇಂಜಿನಿಯರ್ ಗೆ ಭಾರತಕ್ಕೆ ಮರಳುವ ಅವಕಾಶ ಕೈ ತಪ್ಪಿದೆ.
48 ಗಂಟೆಗಳಲ್ಲೇ ಕೊರೊನಾ ವೈರಸ್ ಮಂಗಮಾಯ, ಸಿಕ್ಕಿತು ಹೊಸ ಮದ್ದು!
ಚೀನಾದ ವುಹಾನ್ ನಲ್ಲಿ ಟಿಸಿಎಸ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 22 ವರ್ಷದ ಜ್ಯೋತಿ ಮೊದಲ ಹಂತದಲ್ಲಿ ತೆರಳಿದ ಏರ್ ಇಂಡಿಯಾ ವಿಮಾನವೇರಬೇಕಾಗಿತ್ತು. ಆದರೆ, ಸೋಂಕು ತಗುಲಿದ ಶಂಕೆ ವ್ಯಕ್ತವಾಗಿದ್ದರಿಂದ ವಾಪಸ್ ಕರೆ ತರಲಿಲ್ಲ. ಆದರೆ, ನನಗೆ ಜ್ವರ ಮಾತ್ರ ಬಂದಿದ್ದು, ವೈರಾಣು ಪತ್ತೆಯಾಗಿಲ್ಲ ಎಂದು ಜ್ಯೋತಿ ಪ್ರತಿಕ್ರಿಯಿಸಿದ್ದಾರೆ.
ಫೆಬ್ರವರಿ 18ರಂದು ಆಂಧ್ರದಲ್ಲಿ ಮದುವೆ ನಿಗದಿಯಾಗಿದ್ದು, ಸ್ವದೇಶಕ್ಕೆ ಮರಳಲು ನನಗೆ ನೆರವಾಗಿ ಎಂದು ಭಾರತ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.
ಹಲೋ.. 104.. ಕರ್ನಾಟಕದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತಾ ಹೆಂಗೆ?
ಜ್ವರದ ತಾಪ ತಗ್ಗಿದ್ದರಿಂದ ಎರಡನೆಯ ವಿಮಾನದಲ್ಲಿ ತೆರಳಲು ಆಕೆಗೆ ಅನುಮತಿ ನೀಡುವುದಾಗಿ ಅಧಿಕಾರಿಗಳು ಹೇಳಿದ್ದರು. ಆದರೆ ಭಾನುವಾರ ವುಹಾನ್ ನಿಂದ ಭಾರತಕ್ಕೆ ಬಂದ ವಿಮಾನದಲ್ಲೂ ಆಕೆಗೆ ಪ್ರಯಾಣಿಸಲು ಅವಕಾಶ ನೀಡಿಲ್ಲ.
Sir only two engineers are not brought back to India 1)ms. annem jyothi 2)mr stya Sai. Please consider them and bring back baack from Wuhan to India https://t.co/apwpqX7Kv0
— k. Amarnath Reddy (@kAmarnathReddy1) February 1, 2020
"ನಾನು ಮತ್ತು ನನ್ನ 57 ಸಹೋದ್ಯೋಗಿಗಳು ವಿಶೇಷ ವಿಮಾನದಲ್ಲಿ ಭಾರತಕ್ಕೆ ತೆರಳಲು ಅರ್ಜಿ ಸಲ್ಲಿಸಿದ್ದೆವು. ಜ್ವರದಿಂದಾಗಿ ಎರಡು ಬಾರಿ ವಿಮಾನವೇರಲು ಸಾಧ್ಯವಾಗಿಲ್ಲ. ಮಾನಸಿಕವಾಗಿ ಒತ್ತಡ ದೇಹದ ಉಷ್ಣಾಂಶದಲ್ಲಿ ಏರಿಕೆ ಕಂಡುಬಂದಿದೆ. ನಾನು ಎಲ್ಲಾ ರೀತಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಲು ಸಿದ್ಧವಾಗಿದ್ದೇನೆ. ಚೀನಾದ ವೈದ್ಯಕೀಯ ಇಲಾಖೆಯವರು ನನ್ನಲ್ಲಿ ಕೊರೊನಾ ವೈರಸ್ ಇರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ದಯಮಾಡಿ ನನ್ನನ್ನು ಭಾರತಕ್ಕೆ ಕರೆದುಕೊಂಡು ಹೋಗಿ" ಎಂದು ಮನವಿ ಮಾಡಿಕೊಂಡಿದ್ದಾರೆ.
ಚೀನಾ ಹಾಗೂ ಮಾಲ್ಡೀವ್ಸ್ ನಲ್ಲಿದ್ದ 323 ಮಂದಿ ಭಾರತೀಯರನ್ನು ಸ್ವದೇಶಕ್ಕೆ ಮರಳಿ ಕರೆತರಲಾಗಿದೆ.