ಆಂಧ್ರ ಪ್ರದೇಶದ ಕಾಲೇಜಿನಲ್ಲೂ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ "No Entry"
ವಿಜಯವಾಡ, ಫೆಬ್ರವರಿ 17: ಕರ್ನಾಟಕದಲ್ಲಿ ಹುಟ್ಟಿಕೊಂಡ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಲವು ರಾಜ್ಯಗಳಿಗೆ ಹರಡಿಕೊಳ್ಳುತ್ತಿದೆ. ಆಂಧ್ರ ಪ್ರದೇಶದ ಲೊಯೋಲಾ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ.
ಪ್ರಥಮ ವರ್ಷದಿಂದಲೂ ಕಾಲೇಜಿಗೆ ಬುರ್ಖಾ ಅಥವಾ ಹಿಜಾಬ್ ಧರಿಸಿಕೊಂಡು ಬರುತ್ತಿರುವುದಾಗಿ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ. ಕಾಲೇಜು ಸಮವಸ್ತ್ರದ ಜೊತೆಗೆ ಬುರ್ಖಾ ಮತ್ತು ಹಿಜಾಬ್ ಧರಿಸಿರುವ ಕಾಲೇಜು ಐಡಿಯನ್ನು ಹೊಂದಿರುವ ಫೋಟೋವನ್ನು ವಿದ್ಯಾರ್ಥಿನಿಯರು ತೋರಿಸುತ್ತಿದ್ದಾರೆ. ಪದವಿ ಕಾಲೇಜಿನ ಪ್ರಿನ್ಸಿಪಾಲ್ ಫಾದರ್ ಕಿಶೋರ್, ಹಿಜಾಬ್ ಧರಿಸಿಕೊಂಡು ಕಾಲೇಜಿನಲ್ಲಿ ಪ್ರವೇಶವಿಲ್ಲ ಎಂದು ಅಡ್ಡಪಡಿಸಿದ ಹಿನ್ನೆಲೆ ಆಂಧ್ರ ಪ್ರದೇಶದಲ್ಲೂ ಹಿಜಾಬ್ ವಿವಾದ ಹುಟ್ಟಿಕೊಂಡಿದೆ.
ಹಿಜಾಬ್ ಅರ್ಜಿ ವಿಚಾರಣೆ ಫೆ.18ಕ್ಕೆ ಮುಂದೂಡಿದ ಹೈಕೋರ್ಟ್
ವಿದ್ಯಾರ್ಥಿನಿಯರಿಗೆ ಅವಕಾಶ ನೀಡಿದ ಆಡಳಿತ ಮಂಡಳಿ:
ಆಂಧ್ರ ಪ್ರದೇಶದ ಲೊಯೋಲಾ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ ಎಂಬುದು ದೊಡ್ಡ ಸುದ್ದಿಯಾಯಿತು. ಮುಸ್ಲಿಂ ಮುಖಂಡರು ಕಾಲೇಜು ಆಡಳಿತ ಮಂಡಳಿ ಜೊತೆಗೆ ಸಂಧಾನ ಸಭೆ ನಡೆಸಿದರು. ತದನಂತರ ವಿದ್ಯಾರ್ಥಿನಿಯರನ್ನು ತರಗತಿಯಲ್ಲಿ ಬಿಟ್ಟುಕೊಳ್ಳುವುದಕ್ಕೆ ಆಡಳಿತ ಮಂಡಳಿಯು ಅನುಮತಿ ನೀಡಿತು.
ಕರ್ನಾಟಕದಲ್ಲಿ ತಣ್ಣಗಾಗದ ಹಿಜಾಬ್ ವಿವಾದ:
ಕಳೆದ ತಿಂಗಳು ಕರ್ನಾಟಕದ ಉಡುಪಿಯಲ್ಲಿ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಹಿಜಾಬ್ ಗಲಾಟೆ ಪ್ರಾರಂಭವಾಯಿತು. ಹಿಜಾಬ್ ವಿರೋಧಿಸಿ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಬಂದರು. ರಾಜ್ಯದಲ್ಲಿ ವೇಗವಾಗಿ ಹಿಜಾಬ್ ಸಂಘರ್ಷ ಹರಡಿಕೊಂಡಿತು. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಶಾಲೆಯಿಂದ ಹೊರಗೆ ಕಳುಹಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಯಿತು. ರಾಜ್ಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಇದೇ ವಿಚಾರದಲ್ಲಿ ಶಾಂತಿ ಕಾಪಾಡುವಂತೆ ಹೈಕೋರ್ಟ್ ಸೂಚನೆ ನೀಡಿತು. ಕರ್ನಾಟಕ ಹೈಕೋರ್ಟ್ನಲ್ಲಿ ಹಿಜಾಬ್ ವಿವಾದದ ಕುರಿತು ವಿಚಾರಣೆ ನಡೆಯುತ್ತಿದೆ.
Recommended Video