ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಇದುವರೆಗೂ ಸಂಗ್ರಹವಾದ ದೇಣಿಗೆ ಎಷ್ಟು?
ಸೂರತ್, ಫೆಬ್ರುವರಿ 13: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ತಿಂಗಳಿನಿಂದ ದೇಣಿಗೆ ಸಂಗ್ರಹ ಕಾರ್ಯ ನಡೆಯುತ್ತಿದೆ. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಶಾದ್ಯಂತ ದೇಣಿಗೆ ಸಂಗ್ರಹ ನಡೆಸುತ್ತಿದ್ದು, ಇದುವರೆಗೂ 1,511 ಕೋಟಿ ರೂಪಾಯಿ ಸಂಗ್ರಹವಾಗಿರುವುದಾಗಿ ತಿಳಿದುಬಂದಿದೆ.
ದೇಗುಲ ನಿರ್ಮಾಣಕ್ಕೆ ಜನವರಿ 15ರಂದು ದೇಣಿಗೆ ಸಂಗ್ರಹ ಕಾರ್ಯ ಆರಂಭಗೊಂಡಿದ್ದು, ಫೆಬ್ರುವರಿ 27ರವರೆಗೂ ಮುಂದುವರೆಯಲಿದೆ. ಫೆ.11ರ ಗುರುವಾರ ಸಂಜೆಯವರೆಗೂ 1,511ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಟ್ರಸ್ಟ್ ಘೋಷಿಸಿದೆ.
60 ವರ್ಷಗಳಿಂದ ಗುಹೆಯಲ್ಲೇ ವಾಸವಿರುವ ಸ್ವಾಮೀಜಿಯಿಂದ 1 ಕೋಟಿ ದೇಣಿಗೆ
"ರಾಮ ಮಂದಿರ ನಿರ್ಮಾಣಕ್ಕೆ ಇಡೀ ದೇಶವೇ ದೇಣಿಗೆ ನೀಡುತ್ತಿದೆ. ದೇಣಿಗೆ ಕಾರ್ಯಕ್ಕೆ ದೇಶಾದ್ಯಂತ ನಾವು ನಾಲ್ಕು ಲಕ್ಷ ಗ್ರಾಮಗಳನ್ನು ಹಾಗೂ ಹನ್ನೊಂದು ಕೋಟಿ ಕುಟುಂಬಗಳನ್ನು ತಲುಪುವ ಗುರಿ ಇಟ್ಟುಕೊಂಡಿದ್ದೇವೆ" ಎಂದು ಟ್ರಸ್ಟ್ನ ಸ್ವಾಮಿ ಗೋವಿಂದ್ ದೇವ ಗಿರಿ ಅವರು ತಿಳಿಸಿದ್ದಾರೆ. 492 ವರ್ಷಗಳ ನಂತರ ಜನರಿಗೆ ಧರ್ಮಕ್ಕಾಗಿ ದೇಣಿಗೆ ನೀಡುವ ಇಂಥ ಅಪರೂಪದ ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.
2020ರ ಫೆಬ್ರುವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಮಮಂದಿರ ನಿರ್ಮಾಣದ ನಿರ್ವಹಣೆಗೆ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಘೋಷಣೆ ಮಾಡಿದರು. ಆಗಸ್ಟ್ 5ರಂದು ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಿದರು.