ನನಗೊಂದು ಅವಕಾಶ ನೀಡಿ, ಗುಜರಾತ್ ಶಾಲೆಗಳನ್ನು ಬದಲಾಯಿಸುತ್ತೇನೆ: ಸಿಎಂ ಕೇಜ್ರಿವಾಲ್
ಭರೂಚ್, ಮೇ 1: 'ಗುಜರಾತ್ ಜನತೆ ನನಗೊಂದು ಅವಕಾಶ ಕೊಡಿ, ಗುಜರಾತ್ನಲ್ಲಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಗೊಳಿಸುತ್ತೇನೆ, ಒಂದು ವೇಳೇ ಅಭಿವೃದ್ದಿ ಮಾಡದಿದ್ದರೆ ನನ್ನನ್ನ ಹೊರಗೆ ಹಾಕಿ' ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಮತ್ತು ಇತ್ತೀಚಿಗೆ ಪಂಜಾಬ್ನಲ್ಲಿ ಭಾರೀ ಯಶಸ್ವಿಯಾದ ಆಡಳಿತ ನೀಡುತ್ತಿರುವ ಆಪ್ ಈಗ ಗುಜರಾತ್ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಸದ್ಯಕ್ಕೆ ಗುಜರಾತ್ನಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಈಗಿನಿಂದಲೇ ಆಪ್ ಸರ್ಕಾರ ಜನರ ಮತ ಸೆಳೆಯಲು ಮುಂದಾಗಿದೆ.
ಇಂದು ಗುಜರಾತ್ನ ಭರೂಚ್ನಲ್ಲಿ ಅಬ್ಬರದ ಪ್ರಚಾರ ನಡೆಸಿದ ಸಿಎಂ ಕೇಜ್ರಿವಾಲ್ "ಗುಜರಾತ್ನ ಶಾಲೆಗಳ ಸ್ಥಿತಿ ನಿಜವಾಗಿಯೂ ಕೆಟ್ಟದಾಗಿದೆ. ಈಗಾಗಲೇ ರಾಜ್ಯದಲ್ಲಿರುವ ಸುಮಾರು 6000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇನ್ನು ಕೆಲವು ಶಿಥಿಲಾವಸ್ಥೆಯಲ್ಲಿವೆ. ಲಕ್ಷ ಲಕ್ಷ ಮಕ್ಕಳ ಭವಿಷ್ಯ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ಇಲ್ಲಿನ ಶಾಲೆಗಳು ಹಾಗೂ ಮಕ್ಕಳ ಮುಂದಿನ ಭವಿಷ್ಯವನ್ನು ನಾವು ಬದಲಾಯಿಸಬಹುದು. ಈಗಾಗಲ ನಾವು ದೆಹಲಿಯಲ್ಲಿ ಶಾಲೆಗಳನ್ನು ಬದಲಾಯಿಸಿದ್ದೇವೆ. ಇಲ್ಲೂ ಅದೇ ರೀತಿ ಎಲ್ಲರಿಗೂ ಉತ್ತಮ ಶಿಕ್ಷಣ ನೀಡುವಂತೆ ಮಾಡುತ್ತೇವೆ," ಎಂದು ಗುಜರಾತ್ ಜನರಿಗೆ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಆಡಳಿತರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಕೇಜ್ರಿವಾಲ್, "ಗುಜರಾತ್ನಲ್ಲಿ ಪರೀಕ್ಷೆ ವೇಳೆ ಪೇಪರ್ ಸೋರಿಕೆಯಲ್ಲಿ ಬಿಜೆಪಿ ವಿಶ್ವ ದಾಖಲೆ ಮಾಡುತ್ತಿದೆ. ಪೇಪರ್ ಸೋರಿಕೆಯಾಗದಂತೆ ಒಂದೇ ಒಂದು ಪರೀಕ್ಷೆ ನಡೆಸುವಂತೆ ನಾನು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರಿಗೆ ಸವಾಲು ಹಾಕುತ್ತೇನೆ ಎಂದರು. ಬಳಿಕ ನಮಗೆ ಒಮದದು ಅವಕಾಶ ನೀಡಿ, ನಾನು ಈ ಅವಕಾಶದಲ್ಲಿ ಶಾಲೆಗಳನ್ನು ಸುಧಾರಿಸದಿದ್ದರೆ ನೀವು ನನ್ನನ್ನು ಹೊರಹಾಕಬಹುದು," ಎಂದಿದ್ದಾರೆ.
ಅಲ್ಲದೆ ದೆಹಲಿಯಲ್ಲಿ 4 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ದೆಹಲಿಯಲ್ಲಿ ಶ್ರೀಮಂತರು ಮತ್ತು ಬಡವರ ಮಕ್ಕಳು ಒಟ್ಟಿಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಈ ಬಾರಿ 99.7% ರಷ್ಟು ಫಲಿತಾಂಶ ಬಂದಿದೆ ಎಂದರು.

ಈ ಬಾರಿ ಚುನಾವಣೆಯಲ್ಲಿ ಆಪ್ ಪಕ್ಷ ಗೆದ್ದರೆ ಬಡತನ ನಿರ್ಮೂಲನೆ ಮಾಡುತ್ತೇವೆ ಹಾಗೂ ಎಲ್ಲರಿಗೂ ಉಚಿತ ಶಿಕ್ಷಣ ನೀಡುತ್ತೇವೆ. ಉಚಿತ ಆರೋಗ್ಯ ಸೇವೆ ಒದಗಿಸಿಕೊಡುತ್ತೇವೆ ಎಂದು ಸಿಎಂ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆ ಡಿಸೆಂಬರ್ನಲ್ಲಿ ನಡೆಯಲಿದೆ. ಹೀಗಾಗಿ ಈಗಿನಿಂದಲೇ ರಾಜಕೀಯ ಪಕ್ಷಗಳು ಚುನಾವಣಾ ಅಖಾಡಕ್ಕೆ ಧುಮುಕಿವೆ. ಮೊನ್ನೆಯಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕೂಡ ಗುಜರಾತ್ನಲ್ಲಿ ಬೃಹತ್ ರ್ಯಾಲಿ ಮಾಡಿ ಮತಬೇಟೆ ನಡೆಸಿದ್ದರು. ಈಗ ಆಪ್ ಪಕ್ಷದ ನಾಯಕ ಕೇಜ್ರಿವಾಲ್ ಕೂಡ ಪ್ರಚಾರದ ಭರಾಟೆ ಶುರು ಮಾಡಿದ್ದು, ಪಂಜಾಬ್ನಂತೆ ಗುಜರಾತ್ನಲ್ಲೂ ಬಹುಮತಗಳಿಂದ ಗೆಲ್ಲಲು ಎಲ್ಲಾ ರೀತಿಯ ಕಸರತ್ತು ಆರಂಭಿಸಿದೆ.












Click it and Unblock the Notifications