ಗೋಧ್ರಾ ಹತ್ಯಾಕಾಂಡ: 19 ವರ್ಷದ ಬಳಿಕ ಪ್ರಮುಖ ಆರೋಪಿ ಬಂಧನ
ಅಹಮದಾಬಾದ್, ಫೆಬ್ರವರಿ 16: ಗುಜರಾತ್ನ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷಗಳ ನಂತರ ಪ್ರಮುಖ ಆರೋಪಿ ರಫೀಕ್ ಹುಸೇನ್ ಭಾತುಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗೋಧ್ರಾ ನಗರದವನಾದ ರಫೀಕ್, ರೈಲಿಗೆ ಬೆಂಕಿ ಹಚ್ಚುವ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಪಂಚಮಹಲ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣ ಬಳಿಯ ಸಿಗ್ನಲ್ ಫಾಲಿಯಾ ಪ್ರದೇಶದಲ್ಲಿನ ಮನೆಯೊಂದರಲ್ಲಿ ರಫೀಕ್ ಇರುವುದರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಭಾಮುವಾರ ರಾತ್ರಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದರು. ರೈಲು ಬೋಗಿಗಳಿಗೆ ಬೆಂಕಿ ಹಚ್ಚಲು ಪೆಟ್ರೋಲ್ ಪೂರೈಕೆ ಮಾಡಿದ್ದ ರಫೀಕ್, ಗಲಭೆಗೂ ಪ್ರಚೋದನೆ ನೀಡಿದ್ದ. ತನಿಖೆ ವೇಳೆ ಈತನ ಪಾತ್ರ ಬಹಿರಂಗವಾಗಿತ್ತು. ಇದನ್ನು ಅರಿತ ಕೂಡಲೇ ಆತ ದೆಹಲಿಗೆ ಪರಾರಿಯಾಗಿದ್ದ. ರಫೀಕ್ ವಿರುದ್ಧ ಕೊಲೆ ಮತ್ತು ಗಲಭೆ ಸೃಷ್ಟಿಸಿದ ಆರೋಪಗಳಿವೆ.

ಗೋಧ್ರಾ ರೈಲು ನಿಲ್ದಾಣದಲ್ಲಿ ಆತ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಬೋಗಿಗಳ ಮೇಲೆ ಕಲ್ಲು ಎಸೆದು ಪೆಟ್ರೋಲ್ ಸುರಿದಿದ್ದ. ಬಳಿಕ ಇತರೆ ಅರೋಪಿಗಳು ಬೆಂಕಿ ಹಚ್ಚಿದ್ದರು. ಗೋಧ್ರಾದಿಂದ ಪರಾರಿಯಾಗಿ ತಲೆಮರೆಸಿಕೊಂಡ ಬಳಿಕ ಆತ ದೆಹಲಿಯ ರೈಲು ನಿಲ್ದಾಣ ಮತ್ತು ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಈ ಹತ್ಯಾಕಾಂ ಪ್ರಕರಣದಲ್ಲಿ ಭಾಗಿಯಾದ ಆರೋಪವಿರುವ ಸಲೀಂ ಇಬ್ರಾಹಿಂ ಬಾದಾಮ್ ಅಲಿಯಾಸ್ ಸಲೀಂ ಪನ್ವಾಲಾ, ಶೌಕತ್ ಚರ್ಕಾ ಮತ್ತು ಅಬ್ದುಲ್ ಮಜೀದ್ ಯೂಸುಫ್ ಇದುವರೆಗೂ ಪತ್ತೆಯಾಗಿಲ್ಲ. ಈ ಮೂವರೂ ಆರೋಪಿಗಳು ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
2002ರ ಫೆಬ್ರವರಿ 27ರಂದು ರೈಲಿಗೆ ಬೆಂಕಿ ಹಚ್ಚಿದ್ದರಿಂದ 59 ಮಂದಿ ಕರ ಸೇವಕರು ಸಜೀವದಹನಗೊಂಡಿದ್ದರು. ಇದರ ಬಳಿಕ ಗುಜರಾತ್ನಲ್ಲಿ ವ್ಯಾಪಕ ಕೋಮುಗಲಭೆ ನಡೆದಿದ್ದವು.












Click it and Unblock the Notifications