ಇದೇ ರೀತಿ ಮುಂದುವರಿದರೆ, ಭಾರತದ ಈ ನಗರ ಚೀನಾದ ವುಹಾನ್ ಆಗಲಿದೆ
ಲಕ್ನೋ, ಏಪ್ರಿಲ್ 27: ಉತ್ತರಪ್ರದೇಶದ ಪ್ರವಾಸಿ ಕೇಂದ್ರವಾಗಿರುವ ಆಗ್ರಾದ ಮೇಯರ್, ರಾಜ್ಯದ ಉಪ ಮುಖ್ಯಮಂತ್ರಿ ದಿನೇಶ್ ವರ್ಮಾ ಅವರಿಗೆ ಖಾರವಾದ ಪತ್ರವೊಂದನ್ನು ಬರೆದಿದ್ದಾರೆ.
ಸ್ವಪಕ್ಷೀಯದವರೇ ಆಗಿರುವ ಮೇಯರ್ ನವೀನ್ ಜೈನ್, ಏಪ್ರಿಲ್ 21ಕ್ಕೆ ಪತ್ರವೊಂದನ್ನು ಬರೆದಿದ್ದು, "ನನ್ನ ನಗರವನ್ನು ರಕ್ಷಿಸಿ, ಇಲ್ಲದಿದ್ದರೆ, ಆಗ್ರಾ ನಗರ ಭಾರತದ ವುಹಾನ್ ಆಗಲಿದೆ" ಎಂದು ಎಚ್ಚರಿಸಿದ್ದಾರೆ.
ಹಿಂದಿಯಲ್ಲಿ ಬರೆಯಲಾದ ಪತ್ರದಲ್ಲಿ, "ಕೊರೊನಾ ವೈರಸ್ ಹರಡದಂತೆ ನಿಭಾಯಿಸುವಲ್ಲಿ ಸರಕಾರ ಎಡವುತ್ತಿದೆ. ಸ್ಥಳೀಯ ಜಿಲ್ಲಾಡಳಿತ ಏನೂ ಕೆಲಸಕ್ಕೆ ಬಾರದ್ದು"ಎಂದು ಮೇಯರ್ ಜೈನ್, ಸರಕಾರಕ್ಕೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

"ಜಿಲ್ಲಾಡಳಿತ ನಿರ್ವಹಿಸುತ್ತಿರುವ ಕ್ವಾರಂಟೈನ್ ಸೆಂಟರ್ ಗಳಲ್ಲಿ ಯಾವುದೇ ಪರೀಕ್ಷೆಗಳು ನಡೆಯುತ್ತಿಲ್ಲ. ಸೋಂಕಿತರಿಗೆ ಊಟದ ಅಥವಾ ನೀರಿನ ವ್ಯವಸ್ಥೆಯ ಬಗ್ಗೆ ಇಲ್ಲಿನ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ" ಎಂದು ಮೇಯರ್, ಪತ್ರದಲ್ಲಿ ಜಿಲ್ಲಾಡಳಿತದ ವಿರುದ್ದ ಕಿಡಿಕಾರಿದ್ದಾರೆ.
"ಜಿಲ್ಲಾಸ್ಪತ್ರೆಯಲ್ಲಿ ಯಾವುದೇ ಕಾಯಿಲೆಗಳಿಗೆ ಚಿಕಿತ್ಸೆ ನೀಡದೇ, ರೋಗಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಹೆಚ್ಚು ಜನರು ಈ ಭಾಗದಲ್ಲಿ ಸಾವನ್ನಪ್ಪುತ್ತಿರುವುದು ಸೂಕ್ತ ಚಿಕಿತ್ಸೆ ಸಿಗದೇ ಇರುವುದರಿಂದ".
"ಇನ್ನು ಖಾಸಗಿ ಆಸ್ಪತ್ರೆಗಳಲ್ಲೂ ಇದೇ ಪರಿಸ್ಥಿತಿ. ಹೀಗಾಗಿ, ಪರಿಸ್ಥಿತಿ ಕೈಮೀರುವ ಮುನ್ನ, ಸರಕಾರ, ಜಿಲ್ಲಾಡಳಿತಕ್ಕೆ ಸೂಕ್ತ ಆದೇಶವನ್ನು ನೀಡಬೇಕು, ನನ್ನ ನಗರವನ್ನು ರಕ್ಷಿಸಿ" ಎಂದು ಆಗ್ರಾದ ಮೇಯರ್ ನವೀನ್ ಜೈನ್, ಸರಕಾರಕ್ಕೆ ಬರದ ಪತ್ರದಲ್ಲಿ ಹೇಳಿದ್ದಾರೆ.












Click it and Unblock the Notifications