ದೇವರ ದುಡ್ಡನ್ನೂ ಕೊಳ್ಳೆಹೊಡೆಯುವ ಕಳ್ಳರ ಕರ್ನಾಟಕ
ದೇವಾಲಯದಲ್ಲಿ ಕಳ್ಳತನ ಎಂದರೆ ಸಾರ್ವಜನಿಕರು ಬೆಚ್ಚಿ ಬೀಳುವ ಕಾಲವಿತ್ತು. ಆದರೆ ಈಗ ಕಳ್ಳರು ದೇವರ ದುಡ್ಡನ್ನೇ ಬಿಡೋಲ್ಲಾ, ಏನು ಕಾಲ ಬಂತಪ್ಪಾ ಎಂದು ನಿಟ್ಟುಸಿರು ಬಿಡುವಷ್ಟು ಮಾಮೂಲಿ ವಿಚಾರವಾಗಿ ಹೋಗಿದೆ.
ಕಳ್ಳಕಾಕರು, ದರೋಡೆ ಕೋರರಿಗೆ 'ಕಳ್ಳತನ'ಮಾಡಲು ಅದೆಷ್ಟೇ ಇತಿಹಾಸ ಪ್ರಸಿದ್ದ ದೇವಾಲಯಗಳಿರಲಿ, ಕಾರಣಿಕ ದೇವಾಲಯವೆಂದು ಭಕ್ತಾದಿಗಳಿಂದ ಪೂಜಿಸಲ್ಪಡುವ ದೇವಾಲಯಗಳಿರಲಿ ಅಲ್ಲಿನ ದೇವರ ಮೂರ್ತಿಗಳನ್ನು, ಕಾಣಿಕೆ ಡಬ್ಬಗಳನ್ನು ಲಪಟಾಯಿಸುವುದು ಅವರಿಗೆ ಕಸುಬಾಗಿ ಹೋಗಿದೆ.
ಚಿನ್ನ, ನಗ, ನಾಣ್ಯ, ಉತ್ಸವ ಮೂರ್ತಿಗಳು, ಪಂಚಲೋಹದ ವಿಗ್ರಹಗಳು ಕಳ್ಳರ ಪಾಲಾಗುತ್ತಿದೆ. ಕೆಲವೊಂದು ವಿಗ್ರಹಗಳಿಗೆ ಶತ ಶತಮಾನದ ಇತಿಹಾಸವಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುತ್ತದೆ.
ಸಿಸಿಟಿವಿ, ಇತರ ಭದ್ರತೆಗಳನ್ನೂ ಲೆಕ್ಕಿಸದೇ ದರೋಡೆ ಕೋರರು ತಮ್ಮ ಕೈಚಳಕ ಮೆರೆಯುತ್ತಿದ್ದಾರೆ. ಕೆಲವೊಂದು ದರೋಡೆ ಪ್ರಕರಣಗಳಲ್ಲಿ ದೇವಾಲಯದ ಅರ್ಚಕ ವರ್ಗ, ಆಡಳಿತ ಮಂಡಳಿ ಶಾಮೀಲಾಗಿರುವ ಉದಾಹರಣೆಗಳೂ ಇವೆ.
ರಾಜ್ಯದ ಎಲ್ಲಾ ಜಿಲ್ಲೆಗಳ ದೇವಾಲಯಗಳಲ್ಲಿ ಕಳ್ಳತನ ನಡೆಯುತ್ತಲೇ ಇರುತ್ತದೆ. ಅದರಲ್ಲಿ ಕೆಲವೊಂದು ಮಾತ್ರ ವರದಿಯಾಗುತ್ತದೆ. ಈ ಕಳ್ಳರಿಗೆ ಅಂತಿಮವಾಗಿ ಶಿಕ್ಷೆಯನ್ನು ನಮ್ಮ ಕಾನೂನು ನೀಡುತ್ತೋ ಅಥವಾ ದೇವರೇ ನೀಡುತ್ತಾನೋ ಎಂದು ಕಾದು ನೋಡಬೇಕಿದೆ..
ಹಿಂದೂ ಸಮುದಾಯ ತಲೆ ತಗ್ಗಿಸುವ ಇತ್ತೀಚಿನ ಕೆಲವು ರಾಜ್ಯದ ದೇವಾಲಯದ ಕಳ್ಳತನ ಪ್ರಕರಣಗಳು ಸ್ಲೈಡಿನಲ್ಲಿ....
ಮರವಂತೆ, ಉಡುಪಿ ಜಿಲ್ಲೆ
ಕುಂದಾಪುರ ತಾಲೂಕಿನ ಪುರಾಣ ಪ್ರಸಿದ್ದ ಶ್ರೀ ಮಹಾರಾಜ ವರಹಸ್ವಾಮೀ ದೇವಾಲಯದ ಗರ್ಭಗುಡಿಗೆ ಹಾಕಿದ್ದ ಬೆಳ್ಳಿ ಹೊದಿಕೆ, ಬೆಳ್ಳಿ ಉದ್ದರಣೆ ಪಾತ್ರೆ, ಐದು ಸಾವಿರ ನಗದು ಕಳ್ಳರ ಪಾಲಾಗಿತ್ತು. ಈ ಘಟನೆ ನಡೆದಿದ್ದು ಜೂನ್ 9, 2013ರಂದು.
ಸಂಕ್ಲೀಪುರ, ಶಿವಮೊಗ್ಗ ಜಿಲ್ಲೆ
ಗ್ರಾಮದ ಮಾರಿಯಮ್ಮ ದೇವಾಲಯದೊಳಗೆ ನುಗ್ಗಿದ ಕಳ್ಳರು ದೇವಿಯ ಚಿನ್ನದ ಆಭರಣಗಳನ್ನು ಲಪಟಾಯಿಸಿದ್ದರು. ಈ ಘಟನೆ ನಡೆದಿದ್ದು ಮಾರ್ಚ್ 8, 2013ರಂದು.
ಗೋಕರ್ಣ, ಉತ್ತರಕನ್ನಡ ಜಿಲ್ಲೆ
ಐತಿಹಾಸಿಕ ಗೋಕರ್ಣದ ಮಹಾಬಲೇಶ್ವರ ದೇವಾಲಯದ ನಂದಿ ಮಂಟಪದಲ್ಲಿರುವ ಕಾಣಿಕೆ ಡಬ್ಬಿ, ಬಲಿ, ತಾಮ್ರದ ಹುಂಡಿ ಕಳ್ಳರ ಪಾಲಾಗಿತ್ತು. ಈ ಘಟನೆ ವರದಿಯಾಗಿದ್ದು ಆಗಸ್ಟ್ 25, 2012ರಂದು.
ತಿಮ್ಮಸಂದ್ರ, ಕೋಲಾರ ಜಿಲ್ಲೆ
ಚಿಂತಾಮಣಿ ತಾಲೂಕು ತಿಮ್ಮಸಂದ್ರದ ಸತ್ಯಮ್ಮ ಅಮ್ಮನವರ ದೇವಾಲಯದ ಚಿನ್ನದ ಬಳೆಗಳು, ಮೂಗುತಿ, ಓಲೆಗಳು, ಬೆಳ್ಳಿ ಚೊಂಬು, ಕಣ್ಣುಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳು ಮಾರ್ಚ್ 28, 2012ರಂದು ನಡೆದಿತ್ತು.
ಉದ್ಯಾವರ, ಕಾಪು ಉಡುಪಿ ಜಿಲ್ಲೆ
ಉದ್ಯಾವರದ ಇತಿಹಾಸ ಪ್ರಸಿದ್ದ ಮಹಾಗಣಪತಿ ದೇವಾಲಯದ ಬಲಿಪೀಠಕ್ಕೆ ಬಳಸುವ ಬೆಳ್ಳಿ ವಸ್ತುಗಳು, ಹಣವನ್ನು ಕಳ್ಳರು ದೋಚಿದ್ದರು. ಕಾಪುವಿನ ದೇವಾಲಯವೊಂದರ ಆಭರಣಗಳೂ ಒಂದೇ ದಿನ ಅಂದರೆ ಆಗಸ್ಟ್ 27, 2013ರಂದು ವರದಿಯಾಗಿತ್ತು.
ಮೂಡಬಿದರೆ, ದಕ್ಷಿಣಕನ್ನಡ ಜಿಲ್ಲೆ
ಶತಮಾನಗಳ ಇತಿಹಾಸವಿರುವ ಮೂಡಬಿದರೆಯ ಜೈನ ಬಸದಿಯಲ್ಲಿ ಜುಲೈ 5, 2013ರಲ್ಲಿ ಭಾರೀ ಕಳ್ಳತನವಾಗಿತ್ತು. ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದೇವಾಲಯದ ಕಳ್ಳತನ ಇದಾಗಿದೆ. ಹದಿನೈದನೇ ಶತಮಾನಕ್ಕೆ ಸೇರಿದ ವಿಗ್ರಹಗಳು ಕಳ್ಳತನವಾಗಿದ್ದವು. ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಸಾವಿರ ಕೋಟಿ ಮೇಲೆ ಮೌಲ್ಯದ ವಿಗ್ರಹಗಳು ಇವು ಎನ್ನಲಾಗಿದೆ.
ಶಿರ್ಡಿ ನಗರ, ಹುಬ್ಬಳ್ಳಿ
ಶಿರಡಿ ಸಾಯಿಬಾಬ ದೇವರ ಚಿನ್ನದ ಮತ್ತು ಬೆಳ್ಳಿಯ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಳ್ಳಕಾಕರ ಪಾಲಾಗಿತ್ತು. ಜನವರಿ 3,2010ರಲ್ಲಿ ಈ ಘಟನೆ ವರದಿಯಾಗಿತ್ತು.
ದೇವರಾಯನದುರ್ಗ, ತುಮಕೂರು
ಇತಿಹಾಸ ಪ್ರಸಿದ್ದ ದೇವರಾಯನದುರ್ಗ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳರು ಫೆಬ್ರವರಿ 10, 2013ರಲ್ಲಿ ದೋಚಿದ್ದರು. ಇದು ಈ ದೇವಾಲಯದಲ್ಲಿ ನಡೆದ ಒಂಬತ್ತನೇ ಕಳ್ಳತನದ ಪ್ರಕರಣವಾಗಿದೆ.
ಮೇಲುಕೋಟೆ, ಮಂಡ್ಯ
ಐತಿಹಾಸಿಕ ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ದೇವಾಲಯದಲ್ಲಿ ಬೆಲೆ ಕಟ್ಟಲಾಗದ ದೇವರ ಒಡವೆಗಳು ನಾಪತ್ತೆಯಾಗಿವೆ.
ಬಂಗಾರ ತಿರುಪತಿ, ಕೋಲಾರ
ಈ ವರ್ಷದ ಕೊನೆಯ ಶ್ರಾವಣ ಶನಿವಾರದ ಮರುದಿನ (ಸೆ 1) ದೇವಾಲಯದಲ್ಲಿ ಹುಂಡಿಯಲ್ಲಿದ್ದ ಹಣ, ಒಡವೆಗಳು ನಾಪತ್ತೆಯಾಗಿದ್ದವು.