JDSಗೆ ಇಂದು ನೂತನ ಸಾರಥಿ ಆಯ್ಕೆ:ಕಣದಲ್ಲಿ ಯಾರ್ಯಾರು?
ಬೆಂಗಳೂರು, ಸೆ 11: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಸಮ್ಮುಖದಲ್ಲಿ ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಕೋರ್ ಕಮಿಟಿ ಮತ್ತು ಜಿಲ್ಲಾಧ್ಯಕ್ಷರ ಆಯ್ಕೆಯೂ ಇಂದು ನಡೆಯಲಿದೆ.
ಪ್ರತಿಪಕ್ಷ ಮತ್ತು ರಾಜ್ಯಾಧ್ಯಕ್ಷ ಸ್ಥಾನ ಎರಡನ್ನೂ ಹೊಂದಿರುವ ಕುಮಾರಸ್ವಾಮಿ ಲೋಕಸಭೆ ಉಪಚುನಾವಣೆಯ ಸೋಲಿನ ನಂತರ ರಾಜೀನಾಮೆ ಸಲ್ಲಿಸಿದ್ದರು. ನಂತರ ಪಕ್ಷದ ಶಾಸಕಾಂಗ ಸಭೆಯ ಒತ್ತಾಯದ ಮೇರೆಗೆ ಪ್ರತಿಪಕ್ಷದ ನಾಯಕರಾಗಿ ಮುಂದುವರಿಯಲು ನಿರ್ಧರಿಸಿದ್ದರು.
ಹದಿನೈದು ಮಂದಿಯ ಕೋರ್ ಕಮಿಟಿ ರಚಿಸಲು ವರಿಷ್ಠರು ನಿರ್ಧರಿಸಿದ್ದಾರೆಂದು ವರದಿಯಾಗಿದೆ ಹಾಗೂ ಪಕ್ಷದ ಪ್ರಮುಖ ನಾಯಕರನ್ನು ಇಂದಿನ ಸಭೆಗೆ ಆಹ್ವಾನಿಸಲಾಗಿದೆ.
ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರಭಾವಿ ನಾಯಕರನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
ಕೋರ್ ಕಮಿಟಿಗೆ ಆಯ್ಕೆಯಾಗುವ ಸದಸ್ಯರಿಗೆ ತಲಾ ಒಂದು ಲೋಕಸಭಾ ಕ್ಷೇತ್ರದ ಜವಾಬ್ದಾರಿಯನ್ನು ನೀಡುವ ಬಗ್ಗೆ ಈ ಸಭೆಯಲ್ಲಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿದುಬಂದಿದೆ.
ಪಕ್ಷದ ಹಿರಿಯ ಮುಖಂಡ ಬಸವರಾಜ್ ಹೊರಟ್ಟಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಇನ್ನು, ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಯಾರ್ಯಾರ ನಡುವೆ ಪೈಪೋಟಿ ಇದೆ? ಸ್ಲಡಿನಲ್ಲಿ ನೋಡಿ..

ಪಿ ಜಿ ಆರ್ ಸಿಂಧ್ಯಾ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ಸಿಂಧ್ಯಾ, ದೇವೇಗೌಡರ ಕಟ್ಟಾ ಅನುಯಾಯಿ. ಆದಾಗ್ಯೂ 2004ರಲ್ಲಿ ದೇವೇಗೌಡರ ಮೇಲಿನ ಮನಸ್ತಾಪದಿಂದಾಗಿ ಪಕ್ಷ ತೊರೆದು ಮತ್ತೆ ಜೆಡಿಎಸ್ ಸೇರ್ಪಡೆಯಾಗಿದ್ದರು.

ಬಂಡೆಪ್ಪ ಕಾಶೆಂಪೂರ್
ಕುರುಬ ಸಮಾಜಕ್ಕೆ ಸೇರಿದ್ದ ಬಂಡೆಪ್ಪ ಕಾಶೆಂಪೂರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಶೋಕ್ ಖೇಣಿ ವಿರುದ್ದ ಪರಾಭಗೊಂಡಿದ್ದರು. ರಾಜ್ಯಾಧ್ಯಕ್ಷ ಸ್ಥಾನದ ಪ್ರಭಲ ಆಕಾಂಕ್ಷಿಗಳಲ್ಲಿ ಇವರೂ ಒಬ್ಬರು.

ಎ. ಕೃಷ್ಣಪ್ಪ
ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನೂ ಆಕಾಂಕ್ಷಿ ಎಂದು ಈಗಾಗಲೇ ಕೃಷ್ಣಪ್ಪ ಹೇಳಿದ್ದಾರೆ. ಯಾದವ ಸಮುದಾಯಕ್ಕೆ ಸೇರಿದ ಕೃಷ್ಣಪ್ಪ ಮೇಲೆ ದೇವೇಗೌಡರ ಶ್ರೀರಕ್ಷೆ ಇದೆ ಎನ್ನಲಾಗುತ್ತಿದೆ.

ಬಸವನಗೌಡ ಪಾಟೀಲ್ ಯತ್ನಾಳ್
ಜಾತಿ ಲೆಕ್ಕಾಚಾರದ ಮೇಲೆ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ನಿಂತರೆ ಲಿಂಗಾಯಿತ ಸಮುದಾಯಕ್ಕೆ ಸೇರಿದ ಯತ್ನಾಳ್ ಪ್ರಭಲ ಆಕಾಂಕ್ಷಿ.

ಇಕ್ಬಾಲ್ ಅನ್ಸಾರಿ
ಅಲ್ಪ ಸಂಖ್ಯಾತ ಸಮುದಾಯಕ್ಕೆ ಪ್ರಾಮುಖ್ಯತೆ ನೀಡಲು ನಿರ್ಧರಿಸಿದರೆ ಇಕ್ಬಾಲ್ ಅನ್ಸಾರಿ ಪ್ರಮುಖ ಆಕಾಂಕ್ಷಿ ಆಗುವುದು ಖಂಡಿತ.

ಎಂ ಸಿ ನಾಣಯ್ಯ
ಹಿರಿಯರೂ ಮತ್ತು ಸಮರ್ಥರೂ ಆದ ನಾಣಯ್ಯ ಹೆಸರೂ ಕೇಳಿ ಬರುತ್ತಿದೆ. ಒಂದು ವೇಳೆ ವರಿಷ್ಠರು ಬಯಸಿದರೆ ನಾಣಯ್ಯ ಹುದ್ದೆಯನ್ನು ಒಪ್ಪಿಕೊಳ್ಳುವರೇ ಎನ್ನುವುದು ಖಚಿತವಾಗಿಲ್ಲ.












Click it and Unblock the Notifications