ಕರ್ನಾಟಕದ ಜಿಲ್ಲಾ ಸುದ್ದಿಗಳ ಕ್ವಿಕ್ ಲುಕ್

ಬೆಂಗಳೂರು, ಆ.27 : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ವೀಕ್ಷಿಸಲು ವಿದೇಶಿ ಪ್ರವಾಸಿಗರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ದಸರಾ ಸ್ವಾಗತ ಸಮಿತಿಯ ಅಧ್ಯಕ್ಷರಾದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ದಸರಾ ಉತ್ಸವದಲ್ಲಿ ಜಂಬೂ ಸವಾರಿ ವೀಕ್ಷಿಸಲು ವಿದೇಶಿಯರಿಗೆ ತೊಂದರೆ ಉಂಟಾಗಿತ್ತು. ಆದರೆ, ಬಾರಿ ವಿದೇಶಿ ಪ್ರವಾಸಿಗರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಕರ್ನಾಟದ ನಾಡಹಬ್ಬಕ್ಕೆ ಸಾವಿರಾರು ವಿದೇಶಿಯರು ಸಾಕ್ಷಿಯಾಗುತ್ತಾರೆ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು. ಜಿಲ್ಲಾಡಳಿತದ ಜೊತೆ ಈ ಕುರಿತು ಮಾತುಕತೆ ನಡೆಸಿದ್ದು, ವಿದೇಶಿ ಪ್ರವಾಸಿಗರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.

ದಸರಾ ಮಹೋತ್ಸವಕ್ಕಾಗಿ ನಗರದಲ್ಲಿ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವ ಕೆಲಸ ಪ್ರಾರಂಭವಾಗಿದೆ. ನಗರದ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು. ದಸರಾ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ಸರ್ಕಾರ ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಹೇಳಿದರು.( ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಮಹಿಳೆ ಜೊತೆ ಅಸಭ್ಯ ವರ್ತನೆ ವೈದ್ಯನ ಹತ್ಯೆ

ಮಹಿಳೆ ಜೊತೆ ಅಸಭ್ಯ ವರ್ತನೆ ವೈದ್ಯನ ಹತ್ಯೆ

ಆಸ್ಪತ್ರೆಗೆ ತೆರಳಿದ್ದ ತಂಗಿಯ ಜೊತೆ ವೈದ್ಯ ಅಸಭ್ಯವಾಗಿ ನಡೆದುಕೊಂಡರು ಎಂದು ಆಕೆಯ ಅಣ್ಣ ವೈದ್ಯರನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಹತ್ಯೆಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಜಮಖಂಡಿ ತಾಲೂಕಿನ ನಿಂಗನೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈಕೆಯ ಜೊತೆ ವೈದ್ಯ ಮಲ್ಲಿಕಾರ್ಜುನ್ ಹಿರೇಮಠ್(55) ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆಯ ಅಣ್ಣ ಸದಾಶಿವ ಬುಧವಾರ ಬೆಳಗ್ಗೆ ವೈದ್ಯರೊಂದಿಗೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ, ವೈದ್ಯರನ್ನು ರಾಡ್ ನಿಂದ ಹೊಡೆದು ಸದಾಶಿವ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಜೀತಕ್ಕಿದ್ದ ಬಾಲಕನ ರಕ್ಷಣೆ

ಜೀತಕ್ಕಿದ್ದ ಬಾಲಕನ ರಕ್ಷಣೆ

ಕಳೆದ ಐದು ವರ್ಷಗಳಿಂದ ರಮೇಶ್ ಎಂಬುವವರ ಮನೆಯಲ್ಲಿ ಜೀತಮಾಡುತ್ತಿದ್ದ ನಾಗ (10) ಎಂಬ ಬಾಲಕನನ್ನು ಮಂಡ್ಯದಲ್ಲಿ ರಕ್ಷಿಸಲಾಗಿದೆ. ಗ್ರಾಮಸ್ಥರು ನೀಡಿದ ದೂರಿನ ಅನ್ವಯ ರಮೇಶ್ ಮನೆ ಮೇಲೆ ದಾಳಿ ನಡೆಸಿದ ಮಕ್ಕಳ ರಕ್ಷಣಾ ಸಮಿತಿಯವರು ನಾಗನನ್ನು ರಕ್ಷಿಸಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ರಮೇಶ್ ವಿರುದ್ಧ ದೂರು ದಾಖಲಾಗಿದೆ.

ಮೀನು ಮಾರುಟ್ಟೆಗೆ ಹೈಟೆಕ್ ಸ್ಪರ್ಶ

ಮೀನು ಮಾರುಟ್ಟೆಗೆ ಹೈಟೆಕ್ ಸ್ಪರ್ಶ

ದಾವಣಗೆರೆಯ 2 ಮೀನು ಮಾರುಕಟ್ಟೆಗಳನ್ನು 2.47 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಮಲ್ಲಿಕಾರ್ಜುನ್ ಹೇಳಿದ್ದಾರೆ. ಮೀನುಗಾರಿಕಾ ಇಲಾಖೆ ಕೆಟಿಜೆ ನಗರ ಮಾರುಕಟ್ಟೆ ಅಭಿವೃದ್ಧಿಗಾಗಿ, 1 ಕೋಟಿ ರೂ. ಅನುದಾನ ನೀಡಲಿದೆ. ಅರುಣಾ ಚಿತ್ರಮಂದಿರದ ಬಳಿ ಇರುವ ಮೀನು ಮಾರುಕಟ್ಟೆಯನ್ನು 1.16 ಕೋಟಿ ರೂ.ಗಳ ಅನುದಾನದಲ್ಲಿ ನವೀಕರಣ ಮಾಡಲಾಗುವುದು ಎಂದರು.

ಗಣೇಶನಿಗೆ ಸಿಸಿಟಿವಿ ಕಾವಲು

ಗಣೇಶನಿಗೆ ಸಿಸಿಟಿವಿ ಕಾವಲು

ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಪೆಂಡಾಲ್ ಗೆ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಜೌರಾದ್ಕರ್ ಆದೇಶ ನೀಡಿದ್ದಾರೆ. ಗಣೇಶ ಪ್ರತಿಷ್ಠಾಪನೆಗೆ ಆಯಾ ಪೊಲೀಸ್ ಠಾಣೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಧ್ವನಿವರ್ಧಕ ಬಳಸಬಹುದು ಎಂದು ಆಯುಕ್ತರು ಹೇಳಿದ್ದಾರೆ.

ಈಶ್ವರಪ್ಪಗೆ ಬಿಗ್ ರಿಲೀಫ್

ಈಶ್ವರಪ್ಪಗೆ ಬಿಗ್ ರಿಲೀಫ್

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿರುದ್ದ ದಾಖಲಿಸಿದ್ದ ದೂರನ್ನು ವಕೀಲ ವಿನೋದ್ ಹಿಂಪಡೆದಿದ್ದಾರೆ. ಶಿವಮೊಗ್ಗ ಲೋಕಾಯುಕ್ತ ನ್ಯಾಯಾಲಯದಲ್ಲಿ ಈಶ್ವರಪ್ಪ ವಿರುದ್ಧ ದೂರು ದಾಖಲಾಗಿತ್ತು. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯದ ಕಾರಣ ದೂರನ್ನು ವಾಪಸ್ ಪಡೆದಿದ್ದಾರೆ. ಪ್ರಾಧಿಕಾರದಿಂದ ಅನುಮತಿ ಪಡೆದು ಮತ್ತೊಮ್ಮೆ ದೂರು ಸಲ್ಲಿಸುವುದಾಗಿ ನ್ಯಾಯಾಧೀಶರ ಮುಂದೆ ವಿನೋದ್ ಹೇಳಿಕೆ ನೀಡಿದ್ದಾರೆ.

ಶಂಕರ ಸಿಕ್ಕಿಲ್ಲ ಪೋಲೀಸರ ಸ್ಪಷ್ಟನೆ

ಶಂಕರ ಸಿಕ್ಕಿಲ್ಲ ಪೋಲೀಸರ ಸ್ಪಷ್ಟನೆ

ಪರಪ್ಪನ ಅಗ್ರಹಾರ ಜೈಲಿನಿಂದ ಪರಾರಿಯಾಗಿರುವ ಸೈಕೋ ಕಿಲ್ಲರ್ ಜಯಶಂಕರ್ ಪತ್ತೆಯಾಗಿಲ್ಲ. ಆತನ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ರಾಘವೇಂದ್ರ ಔರಾದ್ಕರ್ ಹೇಳಿದ್ದಾರೆ. ಸಾರ್ವಜನಿಕರು ಶಂಕರ್ ಅಲ್ಲಿ ಕಂಡಿದ್ದ, ಇಲ್ಲಿ ಹೋಗುತ್ತಿದ್ದ ಎಂದು ಕರೆ ಮಾಡುತ್ತಿದ್ದಾರೆ. ನಿಖರ ಮಾಹಿತಿಯನ್ನು ಮಾತ್ರ ನೀಡಬೇಕೆಂದು ಆಯುಕ್ತರು ಮನವಿ ಮಾಡಿದರು. ಸಾರ್ವಜನಿಕರು ಶಂಕರ್ ಬಂಧಿಸಲು ಸಹಕಾರ ನೀಡಬೇಕೆಂದು ಅವರು ಕೋರಿದರು.

ಆಹಾರ ಧಾನ್ಯ ಮಾರುತ್ತಿದ್ದ ಶಿಕ್ಷಕಿ ಬಂಧನ

ಆಹಾರ ಧಾನ್ಯ ಮಾರುತ್ತಿದ್ದ ಶಿಕ್ಷಕಿ ಬಂಧನ

ಅಂಗನವಾಡಿ ಆಹಾರ ಧಾನ್ಯಗಳನ್ನು ಕದ್ದು, ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಶಿಕ್ಷಕಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಬಳ್ಳಾರಿ ಜಿಲ್ಲೆಯ ಬೆಳಗಲ್ ನಲ್ಲಿ ನಡೆದಿದೆ. ಕೃಷ್ಣವೇಣಿ ಎಂಬ ಅಂಗನವಾಡಿ ಶಿಕ್ಷಕಿ ಕೇಂದ್ರದಲ್ಲಿ ಮಕ್ಕಳಿಗೆ ಹಂಚಲು ಇಟ್ಟಿದ್ದ ಧಾನ್ಯಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಗ್ರಾಮಸ್ಥರು ದೂರಿದ್ದಾರೆ. ಪೊಲೀಸರು ಮತ್ತು ಆಹಾರ ಮತ್ತು ನಾಗರೀಕ ಇಲಾಖೆ ಅಧಿಕಾರಿಗಳು ಅಂಗನವಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ನಡುರಸ್ತೆಯಲ್ಲೇ ವ್ಯಕ್ತಿಗೆ ಹಿಗ್ಗಾಮುಗ್ಗಾ ಒದೆ

ನಡುರಸ್ತೆಯಲ್ಲೇ ವ್ಯಕ್ತಿಗೆ ಹಿಗ್ಗಾಮುಗ್ಗಾ ಒದೆ

ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿದ್ದ ವ್ಯಕ್ತಿಯೊಬ್ಬನಿಗೆ ರಸ್ತೆಯಲ್ಲೇ ಮಹಿಳೆಯೊಬ್ಬಳು ಥಲಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಹಿಂಡಲಗಾ ಬಳಿಯ ವಿನಾಯಕ ನಗರದ ಗೆಳೆಯನ ಮನೆಗೆ ಬಂದ ಸಿದ್ದನಗೌಡ ಪಾಟೀಲ್ ಎಂಬಾತ ಸ್ನೇಹಿತನ ಪತ್ನಿ ಮೇಲೆ ಕಣ್ಣು ಹಾಕಿದ್ದ. ಇದರಿಂದ ಸಿಟ್ಟಿಗೆದ್ದ ಆ ಮಹಿಳೆ ಸಿದ್ದನಗೌಡ ಪಾಟೀಲನಿಗೆ ನಡುಬೀದಿಯಲ್ಲೇ ಥಳಿಸಿದ್ದಾಳೆ. ಸುದ್ದಿತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಸಿದ್ದನಗೌಡನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+