ಮತ್ತೆ ಕಾವೇರಿ ಕ್ಯಾತೆ ತೆಗೆದ ಜಯಲಲಿತಾ
ಮಂಗಳವಾರ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಕಾವೇರಿ ಜಲಾನಯದ ಪ್ರದೇಶದಲ್ಲಿ ಜಲ ವಿದ್ಯುತ್ ಯೋಜನೆ ಆರಂಭಿಸುವ ಮೂಲಕ ಕರ್ನಾಟಕ ನ್ಯಾಯಮಂಡಳಿ ತೀರ್ಪು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಉದ್ದೇಶಪೂರ್ವಕವಾಗಿ ಕರ್ನಾಟಕ ಕಾವೇರಿ ಜಲಾನಯನ ಪ್ರದೇಶದಲ್ಲಿ ವಿದ್ಯುತ್ ಯೋಜನೆ ಆರಂಭಿಸುತ್ತಿದೆ. ಇದಕ್ಕೆ ಅವಕಾಶ ನೀಡಬಾರದು, ಜಲವಿದ್ಯುತ್ ಯೋಜನೆ ಆರಂಭಿಸದಂತೆ ಕರ್ನಾಟಕ್ಕೆ ಸೂಚನೆ ನೀಡಬೇಕೆಂದು ಪ್ರಧಾನಿಗೆ ಮನವಿ ಮಾಡಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ಎರಡೂ ರಾಜ್ಯಗಳ ಅನುಮತಿ ಪಡೆಯಬೇಕು. ಆದರೆ, ಕರ್ನಾಟಕ ತಮಿಳುನಾಡಿಗೆ ಯಾವುದೇ ಮಾಹಿತಿ ನೀಡದೆ ಜಲ ವಿದ್ಯುತ್ ಯೋಜನೆ ಪ್ರಾರಂಭಿಸುತ್ತಿದೆ ಎಂದು ಪತ್ರದಲ್ಲಿ ಜಯಲಲಿತಾ ದೂರಿದ್ದಾರೆ.
ಕಾರಣವೇನು : ಜಯಲಲಿತಾ ಮತ್ತೊಮ್ಮೆ ಕಾವೇರಿ ಕ್ಯಾತೆ ತೆಗೆಯಲು ಕಾರಣವಾಗಿದ್ದು ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ.ಜಯಚಂದ್ರ ಅವರ ಹೇಳಿಕೆ. ಇತ್ತೀಚೆಗೆ ಸಚಿವರು ಮೇಕೆದಾಟು ಬಳಿ 500 ರಿಂದ 600 ಕೋಟಿ ರೂ. ವೆಚ್ಚದಲ್ಲಿ ಜಲವಿದ್ಯುತ್ ಯೋಜನೆ ಪ್ರಾರಂಭಿಸಿ, ರಾಜ್ಯದ ವಿದ್ಯುತ್ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿಕೆ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದರು.
ಈ ಯೋಜನೆ ಜಾರಿಯಾದರೆ, ತಮಿಳುನಾಡಿಗೆ ನ್ಯಾಯಯುತವಾಗಿ ಬರಬೇಕಾದ ನೀರಿನ ಪಾಲು ಕಡಿಮೆಯಾಗುತ್ತದೆ ಮತ್ತು ರಾಜ್ಯದ ರೈತರಿಗೆ ಬೆಳೆ ಬೆಳೆಯಲು ನೀರು ದೊರೆಯುವುದಿಲ್ಲ. ಆದ್ದರಿಂದ ಯೋಜನೆ ಪ್ರಾರಂಭಿಸದಂತೆ ನಿರ್ದೇಶನ ನೀಡಬೇಕೆಂದು ಜಯಲಲಿತಾ ಪತ್ರದಲ್ಲಿ ವಿವರಿಸಿದ್ದಾರೆ.
ಕರ್ನಾಟಕ ಕಾವೇರಿ ತೀರದಲ್ಲಿ ಕೈಗೊಳ್ಳುವ ಯಾವುದೇ ಜಲವಿದ್ಯುತ್ ಕಾಮಗಾರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಬಾರದು ಎಂದು ಒತ್ತಾಯಿಸಿರುವ ಜಯಲಲಿತಾ, ಪರಿಸರ ಮತ್ತು ಅರಣ್ಯ ಇಲಾಖೆಗಳು ಅನುಮತಿ ನೀಡಬಾರದು ಎಂದು ಮನವಿ ಮಾಡಿದ್ದಾರೆ.