ಉಪ ಚುನಾವಣೆ : ಜೆಡಿಎಸ್ ಸೋಲಿಗೆ 6 ಕಾರಣಗಳು
ಬೆಂಗಳೂರು, ಆ.26 : ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆಗಳಲ್ಲಿ ಜೆಡಿಎಸ್ ತನ್ನ ಭದ್ರಕೋಟೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಒಪ್ಪಿಸಿ ನಿರಾಸೆ ಅನುಭವಿಸಿದೆ. ಕಾಂಗ್ರೆಸ್ ವಿರೋಧಿ ಮೈತ್ರಿಕೂಟ ಸ್ಥಾಪಿಸಿಕೊಂಡರು, ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಉಪ ಚುನಾವಣೆಯನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಿ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರಗಳಲ್ಲಿ ತಿರುಗಿ ಪ್ರಚಾರ ನಡೆಸಿದರೂ ಫಲ ದೊರೆತಿಲ್ಲ. ಭಾರೀ ಅಂತರದಿಂದ ಜೆಡಿಎಸ್ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ.
ನಮ್ಮ ಭದ್ರಕೋಟೆ ಮುರಿಯಲು ಸಾಧ್ಯವಿಲ್ಲ ಎಂಬ ಜೆಡಿಎಸ್ ನಾಯಕರ ಅತಿಯಾದ ಆತ್ಮವಿಶ್ವಾಸವೇ ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಒಕ್ಕಲಿಗರು ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಉಭಯ ಕ್ಷೇತ್ರಗಳ ಲೆಕ್ಕಚಾರ ಕೈಕೊಟ್ಟಿದೆ.
ಸಂಸದರಾಗಿ ಕುಮಾರಸ್ವಾಮಿ ಮಾಡಿದ ಕೆಲಸ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಪ್ರಭಾವ, ಒಕ್ಕಲಿಗರನ್ನು ಅತಿಯಾಗಿ ನಂಬಿಕೊಂಡ ಜೆಡಿಎಸ್ ಎರಡೂ ಸ್ಥಾನಗಳನ್ನು ಕಳೆದುಕೊಂಡಿದೆ. ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸೋಲಿಗೆ ಪ್ರಮುಖ ಕಾರಣಗಳನ್ನು ತಿಳಿಯೋಣ.(ಮಂಡ್ಯದಲ್ಲಿ ರಮ್ಯಾ ಗೆಲುವಿಗೆ 10 ಕಾರಣಗಳು)

ಮತದಾರರ ಆಕ್ರೋಶ
2009ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಎಚ್.ಡಿ.ಕುಮಾರಸ್ವಾಮಿ, ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರಗಳಿಗೆ ಮಾತ್ರ ಸೀಮಿತರಾದರು ಎಂಬ ಆರೋಪವಿದೆ. ಆನೇಕಲ್, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ಕ್ಷೇತ್ರಗಳ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ ಎಂಬ ಮತದಾರರ ಆಕ್ರೋಶವೂ ಸೋಲಿಗೆ ಕಾರಣವಾಗಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಮತಗಳು ಬಂದಿವೆ.

ಅಲ್ಪ ಸಂಖ್ಯಾತರು ಮತ ನೀಡಲಿಲ್ಲ
ಲೋಕಸಭೆ ಉಪ ಚುನಾವಣೆಗೆ ಬಿಜೆಪಿ ಮತ್ತು ಕೆಜೆಪಿ ಬೆಂಬಲ ಪಡೆದ ಜೆಡಿಎಸ್ ಪಕ್ಷದ ನಿಲುವು ಅಲ್ಪಸಂಖ್ಯಾತ ನಾಯಕರ ಅಸಮಾಧಾನಕ್ಕೆ ಕಾರಣವಾಯಿತು. ಅಲ್ಪಸಂಖ್ಯಾತರ ಘಟದ ಅಧ್ಯಕ್ಷ ಹಫೀಜ್ ಖಾನ್ ಪಕ್ಷ ತೊರೆದರೆ, ಪಕ್ಷದಲ್ಲೇ ಇದ್ದ ಮಾಜಿ ಸಚಿವ ಜಮೀರ್ ಅಹಮದ್ ಪ್ರಚಾರದತ್ತ ತಲೆ ಹಾಕಲಿಲ್ಲ. ಆದ್ದರಿಂದ, ಅಲ್ಪಸಂಖ್ಯಾತರ ಬೆಂಬಲ ವಿಲ್ಲದೆ ಜೆಡಿಎಸ್ ನೆಲ ಕಚ್ಚಿದೆ. ಜೆಡಿಎಸ್ನಿಂದ ದೂರವಾದರು.

ಸಿದ್ದರಾಮಯ್ಯ ವಿರುದ್ಧದ ಟೀಕೆಗಳು
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಪ್ರತಿಪಕ್ಷ ನಾಯಕ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಲು ಪ್ರಾರಂಭಿಸಿದರು. ಇದರಿಂದ ಎಲ್ಲಾ ಕಾಂಗ್ರೆಸ್ ನಾಯಕರು ಭಿನ್ನಾಭಿಪ್ರಾಯ ಮರೆತು, ಜೆಡಿಎಸ್ ಸೋಲಿಸಲು ಮುಂದಾದರು. ಇದು ಒಂದು ರೀತಿಯಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿನ ಅಂಚಿಗೆ ಕರೆದೊಯ್ಯಿತು.

ನಾಯಕರ ವಲಸೆ
ಜೆಡಿಎಸ್ ಪಕ್ಷದಲ್ಲಿದ್ದ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಇತ್ತೀಚೆಗೆ ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾದರು. ಇದು ಮಂಡ್ಯ ಭಾಗದಲ್ಲಿ ಪಕ್ಷಕ್ಕೆ ಭಾರೀ ಪೆಟ್ಟು ನೀಡಿತು. ಪರಿಣಾಮ ಮತಗಳು ಕಡಿಮೆ ಆದವು.

ಎಂ. ಶ್ರೀನಿವಾಸ್ ಯಡವಟ್ಟು
ಜೆಡಿಎಸ್ ಮಾಜಿ ಶಾಸಕ ಎಂ. ಶ್ರೀನಿವಾಸ್ ಮಂಡ್ಯದಲ್ಲಿ ಪ್ರಚಾರದ ವೇಳೆ, ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರ ತಂದೆ ಮೂಲದ ಬಗ್ಗೆ ಅನಗತ್ಯವಾಗಿ ಪ್ರಸ್ತಾಪಿಸಿದ್ದು ಪಕ್ಷಕ್ಕೆ ನಷ್ಟವುಂಟು ಮಾಡಿದೆ. ಈ ವಿವಾದ ರಮ್ಯಾ ಅವರ ಬಗ್ಗೆ ಮತದಾರರಲ್ಲಿ ಅದರಲ್ಲೂ ಮಹಿಳೆಯರಲ್ಲಿ ಹೆಚ್ಚು ಅನುಕಂಪ ಮೂಡಲು ಕಾರಣವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಒಗ್ಗಟ್ಟಿನ ಕೊರತೆ
ಮಂಡ್ಯ ಕ್ಷೇತ್ರದಲ್ಲಿ ಪಕ್ಷದೊಳಗಿನ ಆಂತರಿಕ ಕಿತ್ತಾಟ ಜೆಡಿಎಸ್ ಪಕ್ಷಕ್ಕೆ ಹೆಚ್ಚು ನಷ್ಟ ಉಂಟು ಮಾಡಿತು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ದೇವೇಗೌಡರ ಕುಟುಂಬದ ಸದಸ್ಯರನ್ನೇ ಸ್ಪರ್ಧೆಗಿಳಿಸಿದ್ದು, ಅತಿಯಾದ ಆತ್ಮವಿಶ್ವಾಸ ಹಾಗೂ ಬಿಜೆಪಿ ಬೆಂಬಲದ ಕಣ್ಣಾಮುಚ್ಚಾಲೆಯಿಂದಾಗಿ ಸೋಲುಂಟಾಗಿದೆ ಎಂದು ಕ್ಷೇತ್ರದ ಮತದಾರರೇ ಅಭಿಪ್ರಾಯಪಡುತ್ತಿದ್ದಾರೆ.












Click it and Unblock the Notifications