ಶೋಕತಪ್ತ ರಮ್ಯಾ ಸ್ಪರ್ಧೆ ಆ 12ರ ನಂತರ ನಿರ್ಧಾರ
ಮಂಡ್ಯ, ಆಗಸ್ಟ್ 6: ಕಳೆದ ವಾರ ಹಠಾತ್ತನೇ ಸಾಕುತಂದೆ ನಾರಾಯಣರನ್ನು ಕಳೆದುಕೊಂಡ ನಟಿ ರಮ್ಯಾ ಇನ್ನೂ ದುಃಖದ ಮಡುವಿನಲ್ಲಿ ಇದ್ದಾರೆ. ಸದ್ಯಕ್ಕೆ ರಾಜಕೀಯವೂ ಬೇಡ ಯಾವುದೂ ಬೇಡ ಎಂಬ ಪರಿಸ್ಥಿತಿ ಅವರದ್ದಾಗಿದೆ.
ಆದರೆ ಕಾಂಗ್ರೆಸ್ ಪಕ್ಷ ನಿಜಕ್ಕೂ ಧರ್ಮಸಂಕಟದಲ್ಲಿ ಸಿಲುಕಿಹಾಕಿಕೊಂಡಿದೆ. ಈಗಾಗಲೇ ಕಣದಲ್ಲಿರುವ ರಮ್ಯಾ ಮುಂದೇನು ಮಾಡುತ್ತಾರೋ, ಚುನಾವಣಾ ಕಣದಿಂದ ಹಿಂದೆಸರಿದರೆ ಏನು ಗತಿ? ಎಂದು ಆತಂಕಗೊಂಡಿದ್ದಾರೆ. ಹಾಗೆಂದೇ ಕೆಲ ಹಿರಿಯ ನಾಯಕರು ಉಪಾಯವಾಗಿ ರಮ್ಯಾ ಬಳಿ ಸಾಗಿ 'ಆಯ್ತು ಕಣದಲ್ಲಿ ಮುಂದುವರಿಯುತ್ತೇನೆ' ಎಂಬ ವಾಗ್ದಾನವನ್ನು ಪಡೆದುಕೊಂಡು ಬರುತ್ತಿದ್ದಾರೆ.

ಆದರೆ ಅವರು ಇತ್ತ ಮನೆಯಿಂದ ಹೊರಬೀಳುತ್ತಿದ್ದಂತೆ ರಮ್ಯಾ ಮತ್ತದೇ ವೈರಾಗ್ಯಕ್ಕೆ ಸಿಲುಕುತ್ತಿದ್ದಾರೆ. ಏನೇ ಆಗಲಿ ಆಗಸ್ಟ್ 12ರವರೆಗೂ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿರಲು ದೃಢಚಿತ್ತದಲ್ಲಿ ನಿರ್ಧರಿಸಿದ್ದಾರೆ ಎನ್ನುತ್ತಾರೆ ರಮ್ಯಾ ಕುಟುಂಬದ ಆಪ್ತರು.
ಈ ಒಂದು ವಾರದಲ್ಲಿ ರಮ್ಯಾ ಸಹಜತೆಗೆ ಮರಳಿ, ರಾಜಕೀಯದತ್ತ ಹೊರಳುತ್ತಾರಾ? ಎಂದು ಕಾಂಗ್ರೆಸ್ ಮಂದಿ ಕೈಕಟ್ಟಿ ಕುಳಿತಿದ್ದಾರೆ.
ಈ ಮಧ್ಯೆ, ಮಂಡ್ಯ ಉಪಚುನಾವಣೆ ಪ್ರಚಾರವೂ ಇನ್ನೂ ಗರಿಗೆದರಿಲ್ಲ ಎಂಬುದು ಗಮನಾರ್ಹ. ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರೂ ಕ್ಷೇತ್ರದಲ್ಲಿ ಇನ್ನೂ ಸಕ್ರಿವಾಗಿರುವುದು ಇನ್ನೂ ಕಂಡುಬಂದಿಲ್ಲ. ನಾಳೆ (ಆಗಸ್ಟ್ 7) ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು ಆ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಕಂಡುಬರಲಿದೆ.
ಸ್ಪರ್ಧಾಚಿತ್ರ ಸ್ಪಷ್ಟವಾಗುತ್ತಿದ್ದಂತೆ ರಮ್ಯಾ ಮೇಡಂ ಪರ ತಾವಾಗಿಯೇ ಪ್ರಚಾರ ಕಾರ್ಯದಲ್ಲಿ ಚಾಲ್ತಿಯಲ್ಲಿರಲು ಮಂಡ್ಯ ಜಿಲ್ಲಾ ಕಾಂಗ್ರೆಸ್ ನಿರ್ಧರಿಸಿದೆ. ಮೇಡಂ ತಾವಾಗಿಯೇ ಬರುವವರೆಗೂ ಅವರ ಪರ ಪ್ರಚಾರ ನಡೆಸುವುದು ಇವರ ಇರಾದೆಯಾಗಿದೆ.
ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ದಿನವೇ ಅಂದರೆ ಕಳೆದ ಶನಿವಾರ ನಟಿ ರಮ್ಯಾ ಅವರ ತಂದೆ ಆರ್ ಟಿ ನಾರಾಯಣ್ ಅವರು ಹೃದಯಾಘಾತದಿಂದ ಮೃತಪಟ್ಟರು.












Click it and Unblock the Notifications