ಜಿದ್ದಾಜಿದ್ದಿನ ಹೋರಾಟಕ್ಕೆ ಉಪ ಚುನಾವಣೆ ವೇದಿಕೆ ಸಿದ್ಧ
ಬೆಂಗಳೂರು, ಆ.3 : ಎರಡು ಕ್ಷೇತ್ರಗಳ ಲೋಕಸಭೆ ಉಪಚುನಾವಣೆಯ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ತಯಾರಾಗಿದೆ. ಶನಿವಾರ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಉಪ ಚುನಾವಣಾ ಅಖಾಡ ಸಿದ್ಧವಾಗಿದೆ.
ಮಂಡ್ಯ ಕ್ಷೇತ್ರದಿಂದ ಶನಿವಾರ ನಟಿ ರಮ್ಯಾ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣಾ ಅಖಾಡಕ್ಕೆ ಧುಮುಕಿ, ಉಪ ಚುನಾವಣೆ ರಂಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ವಕೀಲ ದೊರೆಸ್ವಾಮಿ ಕೊನೆಯ ಹಂತದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ, ಮಾವ ದೇವೇಗೌಡ ಮತ್ತು ಪತಿ ಕುಮಾರಸ್ವಾಮಿಯೊಂದಿಗೆ ಬಂದು ಶನಿವಾರ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಸಹ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಬಂದು ನಾಮಪತ್ರ ಸಲ್ಲಿಸಿದ್ದಾರೆ.
ಎರಡು ಕ್ಷೇತ್ರಗಳ ಚುನಾವಣಾ ಅಖಾಡ ಬಹುತೇಕ ಅಂತಿಮಗೊಂಡಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಮತ್ತು ಡಿ.ಕೆ.ಸುರೇಶ್ ನಡುವೆ ಮುಖಾಮುಖಿ ಸ್ಪರ್ಧೆ ಏರ್ಪಟ್ಟಿದ್ದರೆ, ಮಂಡ್ಯದಲ್ಲಿ ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಮತ್ತು ನಟಿ ರಮ್ಯಾ ನಡುವೆ ಗೆಲುವಿಗಾಗಿ ಪೈಪೋಟಿ ನಡೆಯಲಿದೆ. ಶನಿವಾರ ನಾಯಕರ ಆರೋಪ ಪ್ರತ್ಯಾರೋಪಗಳು ಹೀಗಿವೆ.

ಹಣ ಮತ್ತು ತೋಳ್ಬಲವೇ ಆಸರೆ
ಎರಡು ಕ್ಷೇತ್ರಗಳ ಉಪ ಚುನಾಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಹಣ ಬಲ ಮತ್ತು ತೋಳ್ಬಲವನ್ನು ಉಪಯೋಗಿಸುತ್ತದೆ ಎಂದು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಜನಬಲವೇ ಶಕ್ತಿಯಾಗಿದ್ದು, ಎರಡು ಕ್ಷೇತ್ರದಲ್ಲಿ ಜಯಗಳಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೌಡರ ಕುಟುಂಬದ ಕೊಡುಗೆ ಶೂನ್ಯ
ದೇವೇಗೌಡರ ಕುಟುಂಬಕ್ಕೆ ರಾಜಕೀಯ ಮರುಹುಟ್ಟು ಕೊಟ್ಟ ರಾಮನಗರ ಕ್ಷೇತ್ರಕ್ಕೆ ಅವರು ಯಾವ ಕೊಡುಗೆಯನ್ನು ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ದೂರಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾತನಾಡಿದ ಅವರು, ಸಂಸತ್ ಸದಸ್ಯರಾಗಿ ಕುಮಾರಸ್ವಾಮಿ ಯಾವುದೇ ಅನುದಾನ ತಂದು ರಾಮನಗರದಲ್ಲಿ ಕೆಲಸಗಳನ್ನು ಮಾಡಿಸಿಲ್ಲ. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಉಪ ಚುನಾವಣೆ ನಡೆಯುವಂತೆ ಮಾಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಿ ಎಂದು ಸಿದ್ದರಾಮಯ್ಯ ಜನರಿಗೆ ಮನವಿ ಮಾಡಿದ್ದಾರೆ.

ಕಾರ್ಯಕರ್ತರ ಆಯ್ಕೆ
ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅನಿತಾ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡುವಂತೆ ಪಕ್ಷದ ಕಾರ್ಯಕರ್ತರು ಒತ್ತಡ ಹಾಕಿದರು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಹತ್ತು ಜನರು ಅಭ್ಯರ್ಥಿಗಳಾಗಲು ಬಯಸಿದ್ದರು. ಆದರೆ, ಕಾರ್ಯಕರ್ತರ ಒತ್ತಾಯದಿಂದ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಲಾಗಿದೆ ಎಂದರು.

ಅಂಕಲ್ ಕೇಳಿ, ನಂಗೊತ್ತಿಲ್ಲ
"ನಾನು ಮಂಡ್ಯ ಜಿಲ್ಲೆಯವಳು ನನ್ನನ್ನು ಗೆಲ್ಲಿಸಿ ಎಂದು ನಟಿ ರಮ್ಯಾ ಜನರಿಗೆ ಮನವಿ ಮಾಡಿದ್ದಾರೆ". ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಮ್ಯಾ, ನನ್ನ ತಾತ ಮಂಡ್ಯ ಜಿಲ್ಲೆಯವರು ಆದ್ದರಿಂದ ನಾನು ಈ ಜಿಲ್ಲೆಯವಳು ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು. ಪ್ರಚಾರ ಹೇಗೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಅಂಕಲ್ (ಅಂಬರೀಶ್) ಕೇಳಿ ನನಗೆ ಗೊತ್ತಿಲ್ಲ ಎಂದರು.

ಮಾವ ಶಕ್ತಿ ತುಂಬಿದರು
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನಗೆ ಇಷ್ಟವಿರಲಿಲ್ಲ. ಮಾವ ನನಗೆ ಶಕ್ತಿ ತುಂಬಿದರು ಪಕ್ಷದ ಹಿತದೃಷ್ಠಿಯಿಂದ ನಾನು ಚುನಾವಣೆ ಸ್ಪರ್ಧಿಸಲು ಒಪ್ಪಿಕೊಂಡೆ ಎಂದು ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಎಚ್ಡಿಕೆ ಸ್ವಾರ್ಥದಿಂದಾಗಿ ಚುನಾವಣೆ
ಎಚ್.ಡಿ.ಕುಮಾರಸ್ವಾಮಿ ಅವರ ಸ್ವಾರ್ಥ ರಾಜಕಾರಣದಿಂದಾಗಿ ಎರಡು ಕ್ಷೇತ್ರಗಳ ಉಪ ಚುನಾವಣೆ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಎಚ್ಡಿಕೆ ಸಾಧನೆ ಏನು ಇಲ್ಲ. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಜನರ ತೆರಿಗೆ ಹಣದಿಂದ ಮರು ಚುನಾವಣೆ ನಡೆಸಲು ಕಾರಣವಾಗಿದ್ದಾರೆ ಎಂದು ದೂರಿದರು.

ಕಣದಲ್ಲಿರುವ ಅಭ್ಯರ್ಥಿಗಳು
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು
ಜೆಡಿಎಸ್ - ಅನಿತಾ ಕುಮಾರಸ್ವಾಮಿ
ಕಾಂಗ್ರೆಸ್- ಡಿ.ಕೆ.ಸುರೇಶ್
ಬಿಜೆಪಿ- ಬಿ.ನಾಗರಾಜು
ಬಿಜೆಪಿ - ಎಂ.ಕೃಷ್ಣಪ್ಪ ( ಬಿಜೆಪಿಯಿಂದ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಒಬ್ಬರು ಹಿಂಪಡೆಯಲಿದ್ದಾರೆ)

ಮಂಡ್ಯ ಕಣದಲ್ಲಿರುವ ಅಭ್ಯರ್ಥಿಗಳು
ಮಂಡ್ಯ ಜಿಲ್ಲೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳು
ಕಾಂಗ್ರೆಸ್ - ರಮ್ಯಾ
ಜೆಡಿಎಸ್ - ಸಿ.ಎಸ್.ಪುಟ್ಟರಾಜು
ಬಿಜೆಪಿ - ದೊರೆಸ್ವಾಮಿ

ಚುನಾವಣೆ ವೇಳಾಪಟ್ಟಿ
ಜುಲೈ 27 - ಅಧಿಸೂಚನೆ ಪ್ರಕಟಣೆ
ಆಗಸ್ಟ್ 3 - ನಾಮಪತ್ರ ಸಲ್ಲಿಸಲು ಕೊನೆಯ ದಿನ
ಆಗಸ್ಟ್ 5 - ನಾಮಪತ್ರಗಳ ಪರಿಶೀಲನೆ
ಆಗಸ್ಟ್ 7 - ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ
ಆಗಸ್ಟ್ 21- ಮತದಾನ
ಆಗಸ್ಟ್ 24 - ಮತ ಎಣಿಕೆ












Click it and Unblock the Notifications