ಬಿಜೆಪಿಗೆ ಮರಳೋಲ್ಲ: ಚಾಮುಂಡಿ ಸನ್ನಿಧಿಯಲ್ಲಿ ಘೋಷಣೆ
ಮೈಸೂರು, ಆಗಸ್ಟ್ 2: ಆಷಾಢದ ಕೊನೆಯ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರು ತಾವುಗಳು ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಗೆ ಯಾವುದೇ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಎಲ್ಲಾ ಕ್ಷೇತ್ರಗಳಿಂದಲೂ ಕೆಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಪಕ್ಷದ ಮುಖಂಡೆ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರ ಜತೆಗೂಡಿ ಶೋಭಾ ಅವರು ಬರಿಗಾಲಲ್ಲಿ ಚಾಮುಂಡಿ ಬೆಟ್ಟ ಹತ್ತಿ ದೇವಿಯ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಜೆಪಿಯನ್ನು ಸದೃಢವಾಗಿ ಕಟ್ಟುತ್ತೇವೆಯೇ ಹೊರತು ಯಾವುದೇ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.

ವಿಧಾನಪರಿಷತ್ ಚುನಾವಣೆಯಲ್ಲೂ ಕೆಜೆಪಿ ಸ್ಪರ್ಧೆ:ಇದುವರೆಗೂ ಯಾವುದೇ ಪಕ್ಷದೊಂದಿಗೆ ಮೈತ್ರಿ ಸಂಬಂಧ ಪ್ರಸ್ತಾಪ ಬಂದಿಲ್ಲ. ವಿಧಾನಪರಿಷತ್ ಚುನಾವಣೆಗೂ ಅಭ್ಯರ್ಥಿಗಳನ್ನು ನಮ್ಮ ಪಕ್ಷದಿಂದಲೇ ಸ್ವತಂತ್ರವಾಗಿ ಕಣಕ್ಕಿಳಿಸುತ್ತೇವೆ ಎಂದರು. ಹೊಂದಾಣಿಕೆ ಮಾಡಿಕೊಳ್ಳಲು ಸಮಯ ಇನ್ನೂ ಪಕ್ವವಾಗಿಲ್ಲ. ಹಾಗಾಗಿ ಸದ್ಯಕ್ಕೆ ಆ ಪ್ರಶ್ನೆ ಇಲ್ಲ ಎಂದ ಅವರು, ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ತೃತೀಯ ರಂಗ ರಚನೆ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಹೇಳಿದರು.
ಬಿಜೆಪಿಗೆ ಕರೆದರೂ ಹೋಗಲಾರೆ- ಯಡಿಯೂರಪ್ಪ: ಬಿಜೆಪಿ ವರಿಷ್ಠರಿಂದ ಆಹ್ವಾನ ಬಂದರೂ, ಬಾರದಿದ್ದರೂ ನಾನು ಬಿಜೆಪಿಗೆ ಮರಳುವ ಪ್ರಮೇಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ನುಡಿದಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ವಿಶೇಷ ಪೂಜೆ ಸಲ್ಲಿಸಲು ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡುತ್ತಾ 'ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅನ್ಯ ಪಕ್ಷಗಳೊಂದಿಗೆ ಅಗತ್ಯವಿದ್ದೆಡೆ ಹೊಂದಾಣಿಕೆ ಮಾಡಿಕೊಳ್ಳುವ ಚಿಂತನೆ ನಡೆದಿದೆ ಎಂದು ಹೇಳಿದರು. ಕೆಜೆಪಿಯನ್ನು ಇನ್ನೊಂದು ಪಕ್ಷದ ಜೊತೆ ವಿಲೀನಗೊಳಿಸುವ ಅಥವಾ ನಾನು ಮರು ಸೇರ್ಪಡೆಗೊಳ್ಳುವ ಸಂದರ್ಭ ಒದಗಿ ಬರುವುದಿಲ್ಲ. ರಾಜ್ಯದಲ್ಲಿ ಸ್ಥಳೀಯ ರಾಜಕೀಯ ಶಕ್ತಿಯನ್ನು ಪ್ರಬಲಗೊಳಿಸುವುದು ನನ್ನ ಉದ್ದೇಶ' ಎಂದು ಕ್ಲುಪ್ತವಾಗಿ ಹೇಳಿದರು.












Click it and Unblock the Notifications