ಚಿಕ್ಕಮಗಳೂರು: ಮಳೆ ಕಾಟ ನಿಂತರೆ ಸಾಕಪ್ಪ ತಂದೆ!
ಚಿಕ್ಕಮಗಳೂರು, ಆ.2: ರಾಜ್ಯದ ಒಳನಾಡು ಭಾಗದಲ್ಲಿ ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಒದ್ದಾಡುತ್ತಿರುವ ರಾಜ್ಯದ ವಿವಿಧ ಭಾಗಗಳಲ್ಲಿ ಭರ್ಜರಿ ಮಳೆಯಾಗಿ ಪ್ರವಾಹ ಪರಿಸ್ಥಿತಿ ಕಂಡು ಬಂದಿದೆ. ಜೀವನದಿಗಳು ಮೈ ತುಂಬಿ ಹರಿದು ಅಣೆಕಟ್ಟುಗಳು, ಜಲಾಗಾರಗಳು ತುಂಬಿಕೊಂಡಿವೆ. ಅದರೆ, ಭರ್ಜರಿ ಮಳೆ ನಿಲ್ಲಿಸಲು ಕೆಲವೆಡೆ ವಿಶೇಷ ಪೂಜೆ ಸಲ್ಲಿಸಿದ ಸುದ್ದಿ ಸಿಕ್ಕಿದೆ.
ಈ ಹಿಂದೆ ಮಳೆ ಬಿದ್ದಿಲ್ಲ ಎಂದು ಅನೇಕ ರೀತಿ ಪೂಜೆ ಸಲ್ಲಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಪರ್ಜನ್ಯ ಜಪ, ವಿಶೇಷ ಪೂಜೆ, ಹೋಮ-ಹವನ ಮಾಡುವುದು, ಕತ್ತೆ ಮದುವೆ, ಕಪ್ಪೆ ಮದುವೆ ಮುಂತಾದವುಗಳನ್ನು ನಾಡು ಕಂಡಿದೆ. ಆದರೆ ಸುರಿಯುತ್ತಿರುವ ಮಳೆ ನಿಲ್ಲಿಸುವಂತೆ ದೇವರಿಗೆ ಮೊರೆಯಿಡುವುದು ಅದರಲ್ಲೂ ಚಿಕ್ಕಮಗಳೂರಿನ ಮಲೆನಾಡಿನ ಭಾಗ ಈ ರೀತಿ ಪ್ರಾರ್ಥನೆ ಸಲ್ಲಿಸಿರುವುದು ಕಂಡು ವರುಣ ದೇವ ಮುಸಿಮುಸಿ ನಕ್ಕಿರಲಿಕ್ಕು ಸಾಕು.
ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಮಳೆ ಬಿದಿಲ್ಲ ಎಂದು ಅಂದಿನ ಮುಜರಾಯಿ ಇಲಾಖೆ ವತಿಯಿಂದ ಎಲ್ಲಾ ದೇಗುಲ(ಸುಮಾರು 34,000)ಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಸಲು ಆದೇಶಿಸಿತ್ತು. ಇದಕ್ಕಾಗಿ ಸುಮಾರು 17.5 ಕೋಟಿ ರು ಬೊಕ್ಕಸದಿಂದ ನೀಡಲಾಗಿತ್ತು. ಸಾರ್ವಜನಿಕರ ಹಣ ದುರುಪಯೋಗವಾಗುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲೆ ಮೂಲದ ಎಚ್ ಎಸ್ ನೀಲಕಂಠಪ್ಪ ಎಂಬುವವರು ಕೋರ್ಟಿನಲ್ಲಿ ಅರ್ಜಿ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಲೆನಾಡಿನ ಹೆಬ್ಬಾಗಿಲು, ಕಾಫಿ ನಾಡು ಚಿಕ್ಕಮಗಳೂರಿನ ಕೊಪ್ಪದ ಬಂಡಿಗಡಿಯಲ್ಲಿ ವಿವಿಧ ಸಂಘಟನೆಗಳು ಒಂದೆಡೆ ಸೇರಿ ಪೂಜೆ, ಹೋಮ ನಡೆಸಿದ್ದಾರೆ. ಜೂನ್ ನಲ್ಲಿ ಆರಂಭವಾದ ಮಳೆ ಪಶ್ಚಿಮಘಟ್ಟದ ಮಡಿಲು ಚಿಕ್ಕಮಗಳೂರಿನಲ್ಲಿ ನಿಂತೇ ಇಲ್ಲ. ನಿರಂತರ ಧಾರಾಕಾರ ಮಳೆ ಎಡೆಬಿಡದೆ ಸುರಿಯುತ್ತಿದೆ. ಕೊಪ್ಪ ತಾಲೂಕು, ಕೊಟ್ಟಿಗೆಹಾರಗಳಲ್ಲಿ ವಾಡಿಕೆಗಿಂತ ಎಷ್ಟು ಪಟ್ಟು ಹೆಚ್ಚು ಮಳೆಯಾಗುತ್ತಿದೆ. ಈ ಕಾಫಿ ಕಾಯಿಗಳು ಹಣ್ಣಾಗುವ ಸಮಯ. ಆದರೆ, ನಿರಂತರ ಮಳೆಯಿಂದ ಅನೇಕ ಕಡೆ ಕೊಳೆ ರೋಗ ಬಡಿಯುವ ಭೀತಿ ಎದುರಾಗಿದೆ.
ಮಳೆಯಿಂದ ಹಲವೆಡೆ ಕಾಫಿ ಗಿಡಗಳೇ ಕೊಳೆತು ಹೋಗುತ್ತಿರುವ ವರದಿ ಬಂದಿವೆ. ಅಡಿಕೆ-ತೆಂಗು ಹೂವು ಹೆಚ್ಚು ಉದುರುತ್ತಿವೆ. ಈಗ ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ ಎಂಬುದು ಅವರ ಗೋಳು.
ಕೂಲಿಗಳಿಗೆ ಕೆಲಸವಿಲ್ಲ: ಕೂಲಿ ಕಾರ್ಮಿಕರು ಸುಮಾರು ಒಂದೂವರೆ ತಿಂಗಳಿಂದ ಕೆಲಸಕ್ಕೆ ಹೋಗಿಲ್ಲ. ಇಲ್ಲಿನ ಕಾಫಿ ತೋಟಗಳ ಕೆಲಸ ನಂಬಿಕೊಂಡು ಹೊರ ಜಿಲ್ಲೆ, ರಾಜ್ಯಗಳಿಂದ ಇಲ್ಲಿಗೆ ಬಂದಿರುವ ಸಾವಿರಾರು ಕೂಲಿ ಕಾರ್ಮಿಕರ ಕುಟುಂಬಗಳು ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡು ಮಲಗುವ ಸಂಕಷ್ಟದಲ್ಲಿದ್ದಾರೆ. ಬಯಲು ಸೀಮೆಯಿಂದ ಮಲೆನಾಡಿಗೆ ಮಳೆಕಾಡಿಗೆ ಬಂದು ಇಲ್ಲಿನ ಚಳಿ ಗಾಳಿಗೆ ಮೈಯೊಡ್ಡಿ ಹಾಗೂ ಹೀಗೂ ಅಡ್ಜೆಸ್ಟ್ ಮಾಡಿಕೊಂಡಿದ್ದ 'ಮಂದಿ' ಈಗ ಬೆಚ್ಚಿದ್ದಾರೆ.
ರಸ್ತೆಗಳೆಲ್ಲ ಹಾಳಾಗಿ ಹೊರಗೆ ಸಂಚರಿಸುವಂತಿಲ್ಲ. ಮಕ್ಕಳು ಶಾಲೆಗೆ ಹೋಗುವಂತಿಲ್ಲ. ಅಲ್ಲದೆ ಮಳೆ ಶೀತ ಗಾಳಿಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಚಿಕ್ಕಮಗಳೂರು ಹಾಗೂ ಇತರ ಮಲೆನಾಡ ತಾಲೂಕುಗಳಲ್ಲಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಈಗ ಇಲ್ಲಿನ ಸಾರ್ವಜನಿಕರು, ಸಂಘ ಸಂಸ್ಥೆಗಳವರು ಒಂದೆಡೆ ಸೇರಿ ಪೂಜೆ, ವರುಣ ಶಾಂತಿ ಹೋಮ, ಸಾಮೂಹಿಕ ಪ್ರಾರ್ಥನೆಗಳ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ವರುಣ ಏನು ಉತ್ತರ ಕೊಡುತ್ತಾನೆ, ವೈಮಾನಿಕ ಪರೀಕ್ಷೆ ಮಾಡಿ ತನ್ನ ಆರ್ಭಟ ನಿಲ್ಲಿಸುತ್ತಾನಾ ಕಾದುನೋಡಬೇಕಿದೆ. ಸದ್ಯಕ್ಕಂತೂ ಬೆಂಗಳೂರಿನಿಂದ ಯಾವ ಜನಪ್ರತಿನಿಧಿಯೂ ಈ ಕಡೆಗೆ ಹೋಗಲು ಸಾಧ್ಯವಿಲ್ಲ. ರಸ್ತೆ ಸಂಪರ್ಕ ಎಲ್ಲೆಡೆ ಹಾಳಾಗಿದೆ.











Click it and Unblock the Notifications