ಅಮಾನತ್ ಹಗರಣ: ಜಾಫರ್ ಷರೀಫ್ ಸತ್ಯಾಗ್ರಹ
ಬೆಂಗಳೂರು, ಆ.2: ಅಮಾನತ್ ಕೋ - ಆಪರೇಟಿವ್ ಬ್ಯಾಂಕ್ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಶುಕ್ರವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ನಗರದ ಮಿಲ್ಲರ್ ರಸ್ತೆ ಬಳಿಯ ಹಜರತ್ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಶುಕ್ರವಾರ ಮಧ್ಯಾಹ್ನ ಸತ್ಯಾಗ್ರಹ ಆರಂಭಿಸಿದರು. ಸುಮಾರು 5 ದಿನಗಳ ನಡೆಯಲಿದೆ. ಈ ಅವಧಿಯಲ್ಲಿ ಮುಖಂಡರಾದ ಸಿ.ಎಂ. ಇಬ್ರಾಹಿಂ, ರೋಶನ್ ಬೇಗ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸರ್ಕಾರದ ಸೂಕ್ತ ಸ್ಪಂದನೆ ಸಿಕ್ಕರೆ ಮಾತ್ರ ಸತ್ಯಾಗ್ರಹ ನಿಲ್ಲಿಸಲಾಗುತ್ತದೆ ಎಂದು ಜಾಫರ್ ಷರೀಫ್ ಹೇಳಿದ್ದಾರೆ.
ಬ್ಯಾಂಕಿನಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಸಿಬಿಐ ತನಿಖೆಗೆ ವಹಿಸಬೇಕು. ಹಾಲಿ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಆಡಳಿತಾಧಿಕಾರಿ ನೇಮಿಸಬೇಕು. ಹೊಸ ಆಡಳಿತ ಮಂಡಳಿ ರಚನೆಗೆ ಅವಕಾಶ ನೀಡಬೇಕು. ಬ್ಯಾಂಕ್ ಪುನಶ್ಚೇತನಕ್ಕೆ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಮುಖ್ಯಮಂತ್ರಿ ಅವರಿಗೆ ಆಗ್ರಹಿಸಲಾಗಿದೆ. ಆದರೆ, ಇದಕ್ಕೆ ಯಾವುದೇ ಉತ್ತರ ಸಿಗದ ಕಾರಣ ಉಪವಾಸ ಸತ್ಯಾಗ್ರಹ ಮಾಡಬೇಕಾಗಿ ಬಂದಿದೆ' ಎಂದು ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಹೇಳಿದರು.

ಭಾರಿ ವಂಚನೆ: 'ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ನಲ್ಲಿ 700 ಕೋಟಿ ರೂ. ಮೀಸಲಿಟ್ಟಿದ್ದಾರೆ. ಆದರೆ, ಅಮಾನತ್ ಬ್ಯಾಂಕಿಗೆ ನೆರವು ಒದಗಿಸಿಲ್ಲ. ಸಿಬಿಐ ತನಿಖೆ ವಿಚಾರದಲ್ಲೂ ಗಮನ ಹರಿಸಿಲ್ಲ. ಬ್ಯಾಂಕ್ ಲೂಟಿ ಮಾಡಿದವರಿಗೆ ಬಡ ಮುಸಲ್ಮಾನರು ಹಾಗೂ ಠೇವಣಿದಾರರ ಕಷ್ಟ ಅರ್ಥವಾಗುತ್ತಿಲ್ಲ. ಬದಲಾಗಿ ಈ ಬ್ಯಾಂಕನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ವಿಲೀನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅಮಾನತ್ ಬ್ಯಾಂಕ್ ಅಸ್ತಿತ್ವ ಉಳಿಯುವುದು ಮುಖ್ಯವಾಗಿದ್ದು, ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದರು.
ವಿಜಾಪುರ ಅಲ್-ಅಮೀನ್ ಮೆಡಿಕಲ್ ಕಾಲೇಜು ಕೂಡ ಖಾಸಗಿ ಬಿಲ್ಡರ್ ಪಾಲಾಗುವುದರಲ್ಲಿದೆ. ವಕ್ಫ್ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡು ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ಈ ಚಟುವಟಿಕೆಯನ್ನೂ ನಿಯಂತ್ರಿಸಬೇಕು ಎಂದರು.
ಸುಮಾರು 100 ಕೋಟಿ ರು.ಗೂ ಅಧಿಕ ಅವ್ಯವಹಾರದ ನಂತರ ಅಮಾನತ್ ಕೋ ಆಪರೇಟಿವ್ ಬ್ಯಾಂಕ್ ಮುಚ್ಚುವ ಪರಿಸ್ಥಿತಿ ತಲುಪಿದೆ. ಬ್ಯಾಂಕ್ ವಿಲೀನ ಅಥವಾ ಮುಚ್ಚುವುದರಿಂದ ವಂಚನೆ, ಹಣ ದುರುಪಯೋಗ ಹಗರಣ ಕೂಡಾ ಮುಚ್ಚು ಹೋಗುತ್ತದೆ ಎಂದು ಜಾಫರ್ ಷರೀಫ್ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications