ನಮ್ಮ ಕುಟುಂಬದಿಂದ ಯಾರು ಸ್ಪರ್ಧಿಸುತ್ತಿಲ್ಲ: ಗೌಡ್ರು
ಚನ್ನಪಟ್ಟಣ, ಜು.31: ಈಗ ಬಂದಿರುವ ಲೋಕಸಭೆ ಮರು ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆ ಅಥವಾ ಬೇಡವೇ ಎನ್ನುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎನ್ನುವ ಮೂಲಕ ಜೆಡಿಎಸ್ ವರಿಷ್ಟ ಎಚ್.ಡಿ. ದೇವೇಗೌಡ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದರು.
ಈಗ ಚುನಾವಣೆ ನಡೆದರೂ ಮುಂದಿನ 120-130 ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ಭವಿಷ್ಯ ನುಡಿದ ಗೌಡರು, ಈ ಮರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಚುನಾವಣೆ ಎದುರಿಸುವ ಆರ್ಥಿಕ ಶಕ್ತಿ ನಮ್ಮ ಪಕ್ಷಕ್ಕಿಲ್ಲವೆಂದರು.
ಅದರೂ ಎರಡನೇ ಹಂತದ ನಾಯಕರು ಈ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಹಾಕದಿದ್ದರೇ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಗೊಂದಲ ಮೂಡುತ್ತದೆ ಎನ್ನುವ ದೃಷ್ಟಿಯಿಂದ ಅಭ್ಯರ್ಥಿ ಕಣಕ್ಕಿಳಿಸಿ ಎಂದು ಹೇಳುತ್ತಿದ್ದಾರೆ, ಅವರ ಆತಂಕದ ಬಗ್ಗೆಯೂ ನಾವು ಸಮಲೋಚನೆ ಮಾಡಬೇಕಿದೆ ಎಂದು ಅತ್ಯಂತ ಮಂದಸ್ಮಿತರಾಗಿದ್ದ ಗೌಡರು ಲೋಕಾವಿರಾಮವಾಗಿ ಕಾರ್ಯಕರ್ತರೊಂದಿಗೆ ಚರ್ಚಿಸಿದರು.

"ನಾನು ದುಡ್ಡುಕೊಟ್ಟು ರಾಜಕಾರಣ ಮಾಡಿದವನಲ್ಲ. ನಾನು ನನ್ನ ಸಮಕಾಲೀನ ರಾಜಕಾರಣಿಗಳು ಕಾರ್ಯಕರ್ತರ ನೋವುಗಳಿಗೆ ಸ್ಪಂದಿಸಿ, ಆಯ್ಕೆಯಾಗುತ್ತಿದ್ದೆವು. ಆದರೆ, ಇಂದು ಹಣದ ವಹಿವಾಟಿನ ಚುನಾವಣೆ ನಡೆಯುತ್ತಿದ್ದು, ಹಣ ಕೊಟ್ಟು ಚುನಾವಣೆ ಗೆಲ್ಲಬೇಕಾಗಿ ಬಂದಿದೆ. ಇಂಥ ಚುನಾವಣೆಯಲ್ಲಿ ನಾವು ನಿಲ್ಲಬೇಕೆ ಎನ್ನುವ ಪ್ರಶ್ನೆ ಕಾಡುತ್ತದೆ" ಎಂದು ವ್ಯಾಖ್ಯಾನಿಸಿದರು.
ನಮ್ಮ ಕುಟುಂಬದಿಂದ ಯಾರು ಚುನಾವಣಾ ಕಣದಲ್ಲಿ ಇರುವುದಿಲ್ಲ. ಕಾರ್ಯಕರ್ತರು ಒಪ್ಪುವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಎಲ್ಲಾ ತಾಲೂಕುಗಳಲ್ಲೂ ಚರ್ಚಿಸುತ್ತಿದ್ದೇನೆ ಎಂದರು.
ಗೌಡರ ಜತೆಯಲಿದ್ದ ಪಿಜಿಆರ್ ಸಿಂಧ್ಯ ಮತ್ತು ಡಿ.ಎಂ. ವಿಶ್ವನಾಥ್ ಅವರನ್ನು ಕಣಕ್ಕಿಳಿಸುವಂತೆ ಕಾರ್ಯಕರ್ತರು ಒತ್ತಡ ತಂದರು. ಇದಕ್ಕೆ ಪ್ರತಿಕ್ರಿಸಿದ ಸಿಂಧ್ಯಾ ನನಗೆ ಇನ್ನು ಚುನಾವಣೆ ಬೇಡ ಎಂದು ನುಣುಚಿಕೊಂಡರೆ, ಡಿ.ಎಂ.ವಿಶ್ವನಾಥ್ ನಾನು ಸಾಯುವವರೆಗೂ ಜೆಡಿಎಸ್ ನಲ್ಲಿ ಇರುತ್ತೇನೆ. ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲವೆಂದು ಘೋಷಿಸಿದರು.












Click it and Unblock the Notifications