ಉತ್ತರ ಪ್ರದೇಶವನ್ನು ವಿಭಜಿಸಿ ಅಂದ್ರು ಮಾಯಾವತಿ

ಉತ್ತರ ಪ್ರದೇಶ ರಾಜ್ಯವನ್ನು ವಿಭಜನೆ ಮಾಡಿ ಎಂಬುದು ನಮ್ಮ ಬಹುದಿನದ ಬೇಡಿಕೆ. ಬಿಎಸ್ಪಿ ರಾಜ್ಯ ವಿಭಜನೆ ಪರವಾಗಿದೆ, ಉತ್ತಮ ಆಡಳಿತ ನಡೆಸುವ ದೃಷ್ಠಿಯಿಂದ ರಾಜ್ಯವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಬೇಕು ಎಂದು ಮಾಯಾವತಿ ಹೇಳಿದ್ದಾರೆ.
ರಾಜ್ಯವನ್ನು ನಾಲ್ಕು ಭಾಗಗಳಾಗಿ ವಿಭಜಿಸುವ ಕುರಿತು ನವೆಂಬರ್ 23, 2011ರಲ್ಲಿ ವಿಧಾನಸಭೆಯಲ್ಲಿ ಪ್ರಸ್ತಾವನೆಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ಅದನ್ನು ತಡೆಹಿಡಿಯಲಾಗಿದೆ.
ತೆಲಂಗಾಣ ರಾಜ್ಯ ರಚನೆಗೆ ಅವಕಾಶ ನೀಡಿದಂತೆ, ಉತ್ತರ ಪ್ರದೇಶವನ್ನು ವಿಭಜನೆ ಮಾಡಬೇಕು. ಒಂದು ಭಾಷೆ ಒಂದು ರಾಜ್ಯ ಎಂಬ ನಿಯಮದಡಿ ರಾಜ್ಯವನ್ನು ವಿಭಜನೆ ಮಾಡಬೇಕೆಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಾಲ್ಕು ಭಾಗ : ಉತ್ತರ ಪ್ರದೇಶವನ್ನು ಪೂರ್ವಾಂಚಲ, ಬುಂದೇಲ್ಖಂಡ್, ಅವಧ್ ಪ್ರದೇಶ ಮತ್ತು ಪಶ್ಚಿಮಾಂಚಲ ಎಂದು ನಾಲ್ಕು ಭಾಗಗಳಾಗಿ ವಿಭಜಿಸುವಂತೆ ಮಾಯಾವತಿ ಬೇಡಿಕೆ ಮುಂದಿಟ್ಟಿದ್ದಾರೆ.
ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳದಿಂದ ಗೂರ್ಖಾಲ್ಯಾಂಡ್ ಮತ್ತು ಮಹಾರಾಷ್ಟ್ರದಿಂದ ವಿದರ್ಭವನ್ನು ಪ್ರತ್ಯೇಕಿಸಲು ಇರುವ ಬೇಡಿಕೆಗಳ ಜತೆಗೆ ಉತ್ತರ ಪ್ರದೇಶವನ್ನು ನಾಲ್ಕು ಭಾಗಗಳಾಗಿ ವಿಭಜಿಸುವ ಪ್ರಸ್ತಾವನೆಯನ್ನು ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
ಸಂಸದರಿಗೆ ಕರೆ : ರಾಜ್ಯದ ಸಂಸದರು ಮತ್ತು ಕೇಂದ್ರ ಸಚಿವರು ಉತ್ತರ ಪ್ರದೇಶ ವಿಭಜನೆ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಅವರು ಆಗ್ರಹಿಸಿದ್ದಾರೆ.
ಯುಪಿ ವಿಭಜಿಸಿ ಜೈರಾಮ್ ರಮೇಶ್ : ಉತ್ತರ ಪ್ರದೇಶವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಉತ್ತರ ಪ್ರದೇಶ ಹೊಂದಿದೆ. ಆದ್ದರಿಂದ ತೆಲಂಗಾಣ ಮಾದರಿಯಲ್ಲಿ ಉತ್ತರ ಪ್ರದೇಶವನ್ನು ವಿಭಜಿಸುವುದು ಉತ್ತಮ ಎಂದು ಜೈರಾಮ್ ರಮೇಶ್ ಹೇಳಿಕೆ ನೀಡಿದ್ದಾರೆ.












Click it and Unblock the Notifications