ವೈದ್ಯರ ಯಡವಟ್ಟು, ಯುವತಿ ಕೋಮಾ ಸ್ಥಿತಿಗೆ

ಚಿತ್ರದುರ್ಗ ಜಿಲ್ಲೆಯ ಹಿರೇಬೆನ್ನೂರು ಗ್ರಾಮದ ಚೇತನಾ (21) ಎಂಬ ಯುವತಿ ನಿದ್ರಾಹೀನತೆಯಿಂದ ಬಳಲುತ್ತಿದ್ದಳು. ಆಕೆಯನ್ನು ನಗರದ ಕೃಷ್ಣಾ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದಾರೆ. ವೈದ್ಯರು ಆಕೆಗೆ, ಹೆಚ್ಚಿನ ಪ್ರಮಾಣದಲ್ಲಿ ಅನಸ್ತೇಶಿಯಾ ನೀಡಿದ್ದರಿಂದ, ಆಕೆ ಕೋಮಾ ಸ್ಥಿತಿಗೆ ತಲುಪಿದ್ದಾಳೆ.
ಎರಡು ದಿನಗಳಾದರೂ ಚೇತನಾ ಎಚ್ಚರವಾದ ಕಾರಣ ಆಕೆಯನ್ನು, ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಯೂ ಒಂದು ವಾರ ಕಳೆದರೂ ಆಕೆಗೆ, ಪ್ರಜ್ಞೆ ಬಂದಿಲ್ಲ. ವೈದ್ಯರು ಆಕೆ ಚೇತರಿಸಿಕೊಳ್ಳುವ ಭರವಸೆ ನೀಡದಿದ್ದಾಗ, ಪೋಷಕರು ವಾಪಸ್ ಮನೆಗೆ ಕರೆತಂದಿದ್ದಾರೆ.
ಶನಿವಾರ ಚೇತನಾಳನ್ನು ಪುನಃ ಚಿತ್ರದುರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆಕೆಗೆ ಪ್ರಜ್ಞೆ ಮರಳಿಲ್ಲ. ಘಟನೆಯ ಮಾಹಿತಿ ತಿಳಿದ ಆರೋಗ್ಯ ಸಚಿವ ಯು.ಟಿ.ಖಾದರ್ ಆಕೆಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ.
ಭಾನುವಾರ ಸಂಜೆ ಚೇತನಾಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯೂನಲ್ಲಿ ಇಟ್ಟು, ಚಿಕಿತ್ಸೆ ನೀಡಲಾಗುತ್ತಿದೆ. ಚೇತನಾ ಕಳೆದ ಮೂರು ವಾರಗಳಿಂದ ಕೋಮಾ ಸ್ಥಿತಿಯಲ್ಲಿದ್ದಾಳೆ. ಆಕೆಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಆಸ್ಪತ್ರೆಯ ವೈದ್ಯರಾದ ವಿ.ಎಲ್.ಸತೀಶ್ ಹೇಳಿದ್ದಾರೆ.
ಸಂಬಂಧಿಕರ ಪ್ರತಿಭಟನೆ : ಚೇತನಾ ಪರಿಸ್ಥಿತಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ, ಆಕೆಯ ಪೋಷಕರು ಮತ್ತು ಸಂಬಂಧಿಕರು ಭಾನುವಾರ ಚಿತ್ರದುರ್ಗದ ಕೃಷ್ಣಾ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಿದರು.
ವೈದ್ಯರು ಘಟನೆಯ ಕುರಿತು ವಿವರಣೆ ನೀಡುವಂತೆ ಒತ್ತಾಯಿಸಿದರು. ಇದರಿಂದಾಗಿ ಆಸ್ಪತ್ರೆ ಬಳಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನು ನಡೆಸಿದರು.












Click it and Unblock the Notifications