ಉಡುಪಿಯಲ್ಲಿ ಸತ್ತ, ಬಾಗಲಕೋಟೆಯಲ್ಲಿ ಎದ್ದುಬಂದ!

ಅಚ್ಚರಿಯಾದರೂ ಇದು ಸತ್ಯ. ಉಡುಪಿಯಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಬಾಗಲಕೋಟೆಯ ಸುಳೇಭಾವಿಯ ನಿವಾಸಿ ಪರುಶರಾಮ (34) ವಾಹನ ಅಪಘಾತದಲ್ಲಿ ಸತ್ತಿದ್ದಾನೆ ಎಂದು ಕುಟುಂಬದವರು, ಪೊಲೀಸರು ಕೊಟ್ಟ ದೇಹದ ಅಂತ್ಯಕ್ರಿಯೆ ಮಾಡಿದ್ದರು.
ಆದರೆ, ಭಾನುವಾರ ಬೆಳಗ್ಗೆ ಮನೆಗೆ ಮರಳಿರುವ ಪರುಶರಾಮ ತಾನಿನ್ನೂ ಜೀವಂತವಾಗಿದ್ದೇನೆ ಎಂದು ಸಾಬೀತು ಪಡಿಸಿದ್ದಾನೆ. ಹಾಗಾದರೆ ತಾವು ಸುಟ್ಟ ಶವಯಾರದ್ದು, ಎಂದು ಗ್ರಾಮಸ್ಥರು ತಲೆಕೆಡಿಸಿಕೊಂಡಿದ್ದಾರೆ.
ಘಟನೆ ಏನು : ಬಾಗಲಕೋಟೆಯ ಪರುಶರಾಮ 9 ತಿಂಗಳ ಹಿಂದೆ ಕೆಲಸ ಹುಡುಕಿಕೊಂಡು ಉಡುಪಿಗೆ ಬಂದಿದ್ದ. ಕೆಲವು ದಿನಗಳಿಂದ ಈತ ಮನೆಯವರ ಜೊತೆ ಮಾತನಾಡಿರಲಿಲ್ಲ. ಅವರ ಸಂಪರ್ಕಕ್ಕೂ ದೊರಕಿರಲಿಲ್ಲ.
ಜುಲೈ 14 ರಂದು ಉಡುಪಿಯಲ್ಲಿ ರಸ್ತೆ ಅಪಘಾತ ಸಂಭವಿಸಿತು. ಅದರಲ್ಲಿ ಒಬ್ಬ ವ್ಯಕ್ತಿ ಸತ್ತಿದ್ದರು. ಪರುಶರಾಮ ಜೊತೆ ಕೆಲಸ ಮಾಡುತ್ತಿದ್ದ ಸಹ ಕಾರ್ಮಿಕರು ಶವವನ್ನು ಗುರುತಿಸಿ, ಇದು ಪರುಶರಾಮನ ಶವ, ಆತ ಬಾಗಲಕೋಟೆ ಜಿಲ್ಲೆಯವನು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದರು.
ಪೊಲೀಸರು ಪರುಶರಾಮನ ಮನೆಯವರಿಗೆ ಕರೆ ಮಾಡಿ ಜು.15ರಂದು ಶವವನ್ನು ನೀಡಿದರು.ಜು.16ರಂದು ಗ್ರಾಮಸ್ಥರು ಮತ್ತು ಕುಟುಂಬದವರು ಶವದ ಅಂತ್ಯಸಂಸ್ಕಾರ ನಡೆಸಿ, ಜು.18ರಂದು ಉತ್ತರಾಧಿ ಕ್ರಿಯೆಯನ್ನು ಮಾಡಿ ಮುಗಿಸಿದ್ದರು.
ಜು.20ರಂದು ಉಡುಪಿಯಲ್ಲಿ ಮತ್ತೆ ಪ್ರತ್ಯಕ್ಷನಾದ ಪರುಶರಾಮ ಸಹ ಕಾರ್ಮಿಕರ ಬಳಿ ಹೋಗಿದ್ದಾನೆ. ಅವರಿಂದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಭಾನುವಾರ ಬಾಗಲಕೋಟೆಯ ಮನೆಗೆ ಹೋಗಿ, ಕುಟುಂಬದವರು ಮತ್ತು ಜನರ ಅಚ್ಚರಿ ಮೂಡಿಸಿದ್ದಾನೆ.
ಹಚ್ಚೆಯೇ ಕಾರಣ : ಪರುಶರಾಮ ಸತ್ತಿದ್ದಾನೆ ಎಂದು ನಿರ್ಧರಿಸಲು ಬಲಗೈ ಮೇಲಿದ್ದ ಹಚ್ಚೆಯೇ ಕಾರಣವಾಗಿದೆ. ಹೌದು ರಸ್ತೆ ಅಪಘಾತದಲ್ಲಿ ಸತ್ತ ವ್ಯಕ್ತಿಯ ಕೈ ಮೇಲೂ ಆಂಜನೇಯ ದೇವರ ಹಚ್ಚೆ ಇತ್ತು. ಪರುಶರಾಮನ ಕೈ ಮೇಲೂ ಹಚ್ಚೆ ಇತ್ತು.
ಅಪಘಾತ ನಡೆದಾಗ ಶವದ ಮುಖ ಗುರುತು ಹಿಡಿಯುವ ಸ್ಥಿತಿಯಲ್ಲಿರಲಿಲ್ಲ. ಪರುಶರಾಮ ಬೇರೆ ನಾಪತ್ತೆಯಾಗಿದ್ದ. ಬಲಗೈ ಮೇಲಿನ ಹಚ್ಚೆ ನೋಡಿದ ಸಹ ಕಾರ್ಮಿಕರು ಶವ ಪರುಶರಾಮನದ್ದು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದರು.
ಪರುಶರಾಮ ಎಲ್ಲಿದ್ದ : ಉಡುಪಿಯ ಬೇರೆ ಗ್ರಾಮದಲ್ಲಿ ಕೆಲಸ ಸಿಕ್ಕಿದ್ದರಿಂದ ಸಹ ಕಾರ್ಮಿಕರಿಗೆ ಹೇಳದೆ, ಪರುಶರಾಮ ಜು13ರಂದು ಅಲ್ಲಿಗೆ ಹೋಗಿದ್ದ. ಇದರಿಂದಾಗಿ ಇಲ್ಲದ ಗೊಂದಲ ಉಂಟಾಗಿ, ಸಿಕ್ಕ ಶವವನ್ನು ಪರುಶರಾಮನದ್ದು ಎಂದು ಅಂತ್ಯ ಸಂಸ್ಕಾರ ಮಾಡಲಾಗಿತ್ತು.
ಎಲ್ಲಾ ಗೊಂದಲ ಬಗೆಹರಿದು ಪರುಶರಾಮ ಈಗ ಬದುಕಿ ಬಂದಿದ್ದಾನೆ. ಹಾಗಾದರೆ ಉಡುಯಪಿಯಲ್ಲಿ ಸತ್ತಿದ್ದು, ಯಾರು? ಎಂಬುದನ್ನು ಪೊಲೀಸರು ಈಗ ಪತ್ತೆ ಹಚ್ಚ ಬೇಕಾಗಿದೆ.












Click it and Unblock the Notifications