ಕರ್ನಾಟಕದ ಮಾಜಿ ರಾಜ್ಯಪಾಲ ಖುರ್ಷೀದ್ ಇನ್ನಿಲ್ಲ

95 ವರ್ಷದ ಖುರ್ಷೀದ್ ಅವರಿಗೆ ಹೃದಯಬೇನೆ ಕಾಣಿಸಿಕೊಂಡಿದ್ದ ಕಾರಣ ಕಳೆದ ಆರು ದಿನಗಳ ಹಿಂದೆ ಎಸ್ಕಾರ್ಟ್ಸ್ ಹೃದಯದಾಸ್ಪತ್ರೆಗೆ ಅವರನ್ನು ಸೇರಿಸಲಾಗಿತ್ತು. ಖಾನ್ ಅವರಿಗೆ ತೀವ್ರ ಜ್ವರ ಮತ್ತು ಹೃದಯ ಸೋಂಕು ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಟಿ.ಎಸ್. ಕ್ಲೇರ್ ಅವರು ತಿಳಿಸಿದ್ದಾರೆ.
ಹೃದಯ ಕವಾಟಕ್ಕೆ ಸಂಬಂಧಿಸಿದ ಅಯೋರ್ಟಿಕ್ ಸ್ಟೆನೋಸಿಸ್ ಎಂಬ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗಿನ ಜಾವ 3 ಗಂಟೆಗೆ ಅವರು ಕೊನೆಯುಸಿರೆಳೆದರು ಎಂದು ವೈದ್ಯರು ಮಾಧ್ಯಮಗಳಿಗೆ ತಿಳಿಸಿದರು.
ಖುರ್ಷೀದ್ ಅವರ ಸಾವಿಗೆ ಕಂಬನಿ ಮಿಡಿದಿರುವ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು, ದೇಶದ ನಿಜವಾದ ಸೇವಕನನ್ನು ಇಂದು ನಾವು ಕಳೆದುಕೊಂಡಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಸರಕಾರದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಅವರು ದೇಶಕ್ಕೆ ನಿಸ್ವಾರ್ಥದಿಂದ ಸೇವೆಗೈದಿದ್ದಾರೆ. ಅವರ ಸಾವಿನಿಂದ ರಾಷ್ಟ್ರಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಸಿಂಗ್ ನುಡಿದಿದ್ದಾರೆ.
ಕರ್ನಾಟಕದ ರಾಜ್ಯಪಾಲರಾಗುವ ಮೊದಲು ಅವರು 1998ರಿಂದ 1991ರ ನಡುವೆ ಗೋವಾದ ರಾಜ್ಯಪಾಲರೂ ಆಗಿದ್ದರು. ಇದಕ್ಕೂ ಮೊದಲು ಅವರು ಕೇಂದ್ರ ವಿದೇಶಾಂಗ ಖಾತೆಯನ್ನು ಅಲಂಕರಿಸಿದ್ದರು. ರಾಜ್ಯಸಭಾ ಸದಸ್ಯರಾಗಿ, ಸಂಸದರಾಗಿ ಕೂಡ ಅವರು ಸೇವೆ ಸಲ್ಲಿಸಿದ್ದರು. ಭಾರತದ ಮೂರನೇ ರಾಷ್ಟ್ರಪತಿ ಡಾ. ಜಾಕಿರ್ ಹುಸೇನ್ ಅವರ ಮಗಳನ್ನು ಮದುವೆಯಾಗಿದ್ದರು.
1919ರ ಫೆಬ್ರವರಿ 5ರಂದು ಉತ್ತರ ಪ್ರದೇಶದ ಫರುಖಾಬಾದ್ ಜಿಲ್ಲೆಯ ಪಿತೌರಾ ಗ್ರಾಮದಲ್ಲಿ ಜನಿಸಿದ ಖುರ್ಷೀದ್ ಆಲಂ ಖಾನ್ ಅವರು ಆಗ್ರಾ ವಿಶ್ವವಿದ್ಯಾಲಯದ ಪ್ರತಿಷ್ಠಿತ ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಪದವಿ ಪಡೆದ ಅವರು, ಮುಂದೆ ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ಮೆಂಟ್ ಸ್ಟಡೀಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.












Click it and Unblock the Notifications