ಪೊಲೀಸರನ್ನೇ ದೋಚಿದ ದರೋಡೆ ಕೋರರು!

ದುಷ್ಕರ್ಮಿಗಳ ಕೃತ್ಯದಿಂದಾಗಿ ಪೊಲೀಸ್ ಇನ್ಸ್ ಪೆಕ್ಟರ್ ಗಾಯಗೊಂಡಿದ್ದಾರೆ. ಅವರ ಜೊತೆಗಿದ್ದ ಗೆಳೆಯನ ಮೇಲೂ ಹಲ್ಲೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಮಲ್ಯ ಆಸ್ಪತ್ರಗೆ ದಾಖಲಿಸಲಾಗಿದೆ.
ಘಟನೆ ಏನು : ಹೈ ಗ್ರಾಂಡ್ಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಿರೀಶ್ ಶುಕ್ರವಾರ ರಾತ್ರಿ 1.15ರ ವೇಳೆಗೆ ಊಟ ಮುಗಿಸಿಕೊಂಡು, ಸ್ನೇಹಿತ ಹರಿದಾಸ್ ಜೊತೆ ಕಾರಿನಲ್ಲಿ ಅಶೋಕ ನಗರದಲ್ಲಿರುವ ತಮ್ಮ ನಿವಾಸಕ್ಕೆ ಹೊರಟಿದ್ದರು.
ಕಾರು ನಂಜಪ್ಪ ಸರ್ಕಲ್ ಬಳಿ ಬರುತ್ತಿದ್ದಂತೆಯೇ ಬೈಕ್ ನಲ್ಲಿ ಆರು ಜನರ ತಂಡ ಗಿರೀಶ್ ಅವರಿದ್ದ ಕಾರನ್ನು ಅಡ್ಡಗಟ್ಟಿದೆ. ದುಷ್ಕರ್ಮಿಗಳು ತಮ್ಮ ಬಳಿ ಇದ್ದ ರಿವಾಲ್ವಾರ್ ತೋರಿಸಿ, ಹರಿದಾಸ್ ಮತ್ತು ಗಿರೀಶ್ ಅವರನ್ನು ಕಾರಿನಿಂದ ಕೆಳಗಿಳಿಸಿದ್ದಾರೆ.
ಗಿರೀಶ್ ಮಫ್ತಿಯಲ್ಲಿದ್ದರು ಆದ್ದರಿಂದ ಅವರು ಪೊಲೀಸ್ ಅಧಿಕಾರಿ ಎಂಬುದು ತಂಡಕ್ಕೆ ತಿಳಿದಿಲ್ಲ. ಇಬ್ಬರ ಬಳಿ ಇದ್ದ ಹಣ ಮತ್ತ ಮೊಬೈಲ್ ಗಳನ್ನು ಕೊಡುವಂತೆ ದುಷ್ಕರ್ಮಿಗಳು ಕೇಳಿದ್ದಾರೆ. ಇವರು ನಿರಾಕರಿಸಿದಾಗ, ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ, ಬೆದರಿಸಿದ್ದಾರೆ.
ಗಿರೀಶ್ ಮತ್ತು ಹರಿದಾಸ್ ತಮ್ಮ ಬಳಿ ಇದ್ದ 9 ಸಾವಿರ ಹಣ ಮತ್ತು ಮೊಬೈಲ್ ಕೊಟ್ಟ ತಕ್ಷಣ ಚಾಕುವಿನಿಂದ ಇಬ್ಬರಿಗೂ ಚುಚ್ಚಿದ್ದಾರೆ. ಹರಿದಾಸ್ ಅವರ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಬ್ಬರನ್ನು ರಸ್ತೆಯಲ್ಲಿ ಬಿಟ್ಟು ದುಷ್ಕರ್ಮಿಗಳ ತಂಡ ಪರಾರಿಯಾಗಿದೆ. ಹರಿದಾಸ್ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಗಿರೀಶ್ ಚಿಕಿತ್ಸೆಯಿಂದಾಗಿ ಚೇತರಿಸಿಕೊಂಡಿದ್ದಾರೆ.
ಸಿಸಿಟಿವಿಯಲ್ಲಿ ಸೆರೆ : ನಂಜಪ್ಪ ಸರ್ಕಲ್ ನಲ್ಲಿರುವ ಸಿಸಿಟಿವಿಯಲ್ಲಿ ದುಷ್ಕರ್ಮಿಗಳ ಕೃತ್ಯ ಸೆರೆಯಾಗಿದ್ದು, ಅದನ್ನು ಪಡೆದುಕೊಂಡಿರುವ ಅಶೋಕ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಔರಾದ್ಕಕರ್ ಭೇಟಿ : ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಘಟನೆಯ ನಂತರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ಗಿರೀಶ್ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.












Click it and Unblock the Notifications