ಅನ್ನಭಾಗ್ಯದ ಆಸೆ ಹೊತ್ತವರು ಮಸಣ ಸೇರಿದರು

ರೇಷನ್ ಕಾರ್ಡ್ಗೆ ಭಾವಚಿತ್ರ ತೆಗೆಸಿ ವಾಪಸಾಗುತ್ತಿದ್ದ ಎರಡು ಕುಟುಂಬಗಳ ಕೂಲಿಗಳನ್ನು ಜವರಾಯ ಬಲಿ ತೆಗೆದುಕೊಂಡ ಹೃದಯ ವಿದ್ರಾವಕ ಘಟನೆ ಜಿಲ್ಲೆಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಜಿಲ್ಲೆಯ ವಾಡಿ-ರಾಯಚೂರು ರಸ್ತೆಯಲ್ಲಿ ಟಂ ಟಂ ಮತ್ತು ಲಾರಿ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಏಳು ಮಂದಿ ಬಲಿಯಾಗಿದ್ದಾರೆ.
ಸಾವು ಎರಗಿ ಬಂದ ದೌರ್ಭಾಗ್ಯರನ್ನು ಯಾದಗಿರಿ ಜಿಲ್ಲೆ ಚಿತ್ತಾಪುರ ಕ್ಷೇತ್ರದ ಯಾದಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪತ್ತುತಾಂಡ್ಯದ ರೂಪ್ಲೆಬಸ್ಯ (60), ಆತನ ಪತ್ನಿ ಗಾಂಧಿಬಾಯಿ (55), ಮೊಮ್ಮಗಳು ಸುಮಿತ್ರಾಬಾಯಿ (4), ಸಂಬಂಧಿಕ ಮೋತಿಲಾಲ್ (28), ಜೀಜಿಬಾಯಿ (57), ವಿಜಯ್ ಹಾಡ್ಯ (30) ಎಂದು ಗುರುತಿಸಲಾಗಿದ್ದು, ಮತ್ತೊಬ್ಬರ ಹೆಸರು ತಿಳಿದುಬಂದಿಲ್ಲ. ಇವರೆಲ್ಲ ಮುಂಬೈನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.
ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ನಂತರ ಪಡಿತರ ಚೀಟಿ ಮಾಡಿಸಲು ತವರೂರಿಗೆ ಬಂದಿದ್ದರು. ನಿನ್ನೆ ವಾಡಿ ಪಟ್ಟಣದಲ್ಲಿ ಫೋಟೋ, ಬೆರಳಚ್ಚು ನೀಡಿ ಟಂ ಟಂನಲ್ಲಿ ಎರಡೂ ಕುಟುಂಬಗಳ ಸುಮಾರು 15 ಮಂದಿ ಊರಿಗೆ ವಾಪಸಾಗುತ್ತಿದ್ದರು.
ವಾಡಿ ಸಮೀಪಿಸುತ್ತಿದ್ದಂತೆ ಹೆದ್ದಾರಿಯಲ್ಲಿ ವೇಗವಾಗಿ ಎದುರಿಗೆ ಬಂದ ಲಾರಿ ಮುಖಾಮುಖಿ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿದರೆ, ಮತ್ತೊಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದರು. ಐದಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಅದರಲ್ಲಿ ಗೋಪಾಲ್ ಮತ್ತು ಕವಿತಾಬಾಯಿ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ರಾಯಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.












Click it and Unblock the Notifications