ವ್ಯಾಪಾರಿಗಳಿಗೆ ಡಿಕ್ಕಿ ಹೊಡೆದ ಕಾರು, ನಾಲ್ವರು ಸಾವು

ಸೋಮವಾರ ತಡರಾತ್ರಿ ವೇಳೆಗೆ ಪರಪ್ಪನ ಅಗ್ರಹಾರದ ಸಮೀಪದ ಜಂಕ್ಷನ್ ನಲ್ಲಿ ಮಾಜಿ ನಗರಸಭಾಧ್ಯಕ್ಷ ಕೃಷ್ಣಪ್ಪ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು, ಪುಟ್ ಪಾತ್ ಮೇಲೆ ತರಕಾರಿ ವ್ಯಾಪಾರ ಮಾಡಿ ಮನೆಗೆ ಮರಳಲು ಸಜ್ಜಾಗುತ್ತಿದ್ದ ಜನರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದಾಗಿ ಇಂದ್ರಾಣಿ (40) ಮತ್ತು ವಿಶ್ವ ಕುಮಾರ್ (42) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಘಟನೆಯ ನಂತರ ಕಾರು ಬಿಟ್ಟು ಕೃಷ್ಣಪ್ಪ ಸ್ಥಳದಿಂದ ಪರಾರಿಯಾಗಿದ್ದಾರೆ. ಪುಟ್ ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದ 10ಕ್ಕೂ ಅಧಿಕ ಜನರು ಅಪಘಾತದಿಂದಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂರನೇ ಸಾವು : ಕಾರು ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಪುಷ್ಪಾರಾಣಿ (42) ಎಂಬ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಪುಷ್ಪಾರಾಣಿ ಅವರು ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪುಟ್ ಪಾತ್ ಮೇಲಿನ ಕಲ್ಲಿನ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕೃಷ್ಣಪ್ಪ ಯಾರು : ಬೊಮ್ಮನಹಳ್ಳಿ ನಗರಸಭೆ ಅಸ್ತಿತ್ವದಲ್ಲಿ ಇದ್ದಾಗ ಕೃಷ್ಣಪ್ಪ ಅದರ ಅಧ್ಯಕ್ಷರಾಗಿದ್ದರು. ಸೋಮವಾರ ರಾತ್ರಿ ಕುಡಿದ ಅಮಲಿನಲ್ಲಿ ಲ್ಯಾಂಡ್ ರೋವರ್ ಕಾರಿನಲ್ಲಿ ವೇಗವಾಗಿ ಬಂದು ಪುಟ್ ಪಾತ್ ವ್ಯಾಪಾರಿಗಳಿಗೆ ಡಿಕ್ಕಿ ಹೊಡೆದಿದ್ದಾರೆ. ವ್ಯಾಪಾರಿಗಳಿಗೆ ಡಿಕ್ಕಿ ಹೊಡೆದ ನಂತರ ಸ್ವಲ್ಪ ದೂರದಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ.
ಅತಿವೇಗವೇ ಕಾರಣ : ಸಾರ್ವಜನಿಕ ಪ್ರದೇಶದಲ್ಲಿ ಅತಿವೇಗವಾಗಿ ಕಾರು ಚಲಾಯಿಸಿದ್ದೆ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ. ಕಾರಿನಲ್ಲಿ ಮದ್ಯದ ಬಾಟಲಿಗಳು ಲಭ್ಯವಾಗಿದ್ದು, ಕುಡಿದು ವಾಹನ ಚಾಲನೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಕೃಷ್ಣಪ್ಪ ಅವರಿಗಾಗಿ ಹುಡುಕಾಟ ಪ್ರಾರಂಭವಾಗಿದೆ.
ನಾಲ್ಕನೇ ಸಾವು : ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಬಸವರಾಜ್ ನಾಯ್ಕ್ ಮಾಥ್ಯೂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಮೂಲದವರಾದ ಇವರು ಹೊಸೂರಿಲ್ಲಿ ವಾಸಿಸುತ್ತಿದ್ದರು. ಪರಪ್ಪನ ಅಗ್ರಹಾರ ಬಳಿಯ ಜಂಕ್ಷನ್ ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications