ದಾವಣಗೆರೆ : ಕಸದ ರಾಶಿಯಲ್ಲಿ ಸಿಕ್ತು ಮೂಟೆಗಟ್ಟಲೆ ಹಣ!

ಪೊಲೀಸ್ ಠಾಣೆ ಸಮೀಪ ಹಲವು ತಿಂಗಳಿನಿಂದ ಕಸದ ರಾಶಿ ಬಿದ್ದಿತ್ತು. ಮಹಾನಗರ ಪಾಲಿಕೆಯ ಕಾರ್ಮಿಕರು ಭಾನುವಾರ ಕಸದ ರಾಶಿ ತೆರವುಗೊಳಿಸಲು ಮುಂದಾದರು. ಕಸದ ರಾಶಿಯ ನಡುವೆ, ಪ್ಲಾಸ್ಟಿಕ್ ಕವರ್ ಗಳಲ್ಲಿ ಸಣ್ಣ ಸಣ್ಣ ಪೊಟ್ಟಣಗಳಾಗಿ ಸಂಗ್ರಹಿಸಲಾಗಿದ್ದ ಹಣ ಪತ್ತೆಯಾಯಿತು.
ನೋಟು ಮತ್ತು ಚಿಲ್ಲರೆಯನ್ನು ಗಂಟುಗಳಾಗಿ ಕಟ್ಟಿದ ಪೊಟ್ಟಣಗಳು ಪತ್ತೆಯಾದವು. ಸ್ಥಳಕ್ಕೆ ಆಗಮಿಸಿದ ಭಿಕ್ಷುಕಿ ಕೆಂಚಮ್ಮ ಇದು ನನಗೆ ಸೇರಿದ ಹಣ. ನಾನು ಭಿಕ್ಷೆ ಬೇಡಿ ಸಂಪಾದಿಸಿದ ಹಣ ಎಂದು ಪಾಲಿಕೆ ಅಧಿಕಾರಿಗಳೊಂದಿಗೆ ಜಗಳ ಪ್ರಾರಂಭಿಸಿದಳು.
ಒಂದು ರೂ., ಎರಡು ರೂ., ಐದು ರೂ. ನಾಣ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ ಇಡಲಾಗಿತ್ತು. ಪಾಲಿಕೆ ನೌಕರರು ಹಣದ ಚೀಲ ತೆರೆಯುತ್ತಿದ್ದಂತೆ ಕೆಂಚಮ್ಮ ಗಲಾಟೆ ಹೆಚ್ಚಾಯಿತು. ಸ್ಥಳೀಯರು ನಾಣ್ಯಗಳನ್ನು ಕೆಂಚಮ್ಮನಿಗೆ ಹಿಂದಿರುಗಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಣವನ್ನು ವಶಕ್ಕೆ ಪಡೆದುಕೊಂಡು, ಕೆಂಚಮ್ಮ ಅವರನ್ನು ಠಾಣೆಗೆ ಕೆರೆಯ್ದೊದರು. ನಂತರ ಪಾಲಿಕೆ ಸಿಬ್ಬಂದಿ ಕಸವನ್ನು ತೆರವುಗೊಳಿಸಿದರು.
ಪರಿಶೀಲನೆ ಬಳಿಕ ಹಣ ವಾಪಸ್ : ಪೊಲೀಸರು ಕೆಂಚಮ್ಮ ಅವರ ವಿಚಾರಣೆ ನಡೆಸುತ್ತಿದ್ದು, ಹಣ ಅವರದ್ದು ಎಂದು ಸಾಬೀತಾದರೆ, ವಾಪಸ್ ನೀಡುವುದಾಗಿ ಹೇಳಿದ್ದಾರೆ. ಕೆಂಚಮ್ಮ ಹಲವು ವರ್ಷಗಳಿಂದ ಆ ಜಾಗದಲ್ಲಿ ವಾಸಿಸುತ್ತಿದ್ದಳು. ಹಣ ಅವಳಿಗೆ ಸೇರಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.
ಕೆಂಚಮ್ಮನಿಗೆ ಸೂರಿನ ಭರವಸೆ : ಕಸದ ರಾಶಿಯಲ್ಲಿ ಹಣ ಸಿಕ್ಕಿರುವುದು ಕೆಂಚಮ್ಮನಿಗೆ ಸೂರು ಒದಗಿಸಿಕೊಟ್ಟಿದೆ. ಕೆಂಚಮ್ಮ ಕಸದ ರಾಶಿ ಪಕ್ಕದಲ್ಲಿ ವಾಸಿಸುವುದು ಬೇಡ, ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ವಾಸಿಸಲು ಸ್ಥಳಾವಕಾಶ ನೀಡುವುದಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.












Click it and Unblock the Notifications