ಗೋವಾ ಕಾಂಗ್ರೆಸ್ ಅಧ್ಯಕ್ಷರಿಗೆ ಅಸ್ಥಿಪಂಜರ ಕಿರಿಕ್

ಶಿರೋಡಾ ಗ್ರಾಮದಲ್ಲಿರುವ ಮೆಡಿಕಲ್ ಕಾಲೇಜಿನ ಹಿಂಭಾಗದಲ್ಲಿ ಮಾನವ ಅಸ್ಥಿಪಂಜರ ಸಿಕ್ಕಿದೆ. ಈ ಕಾಲೇಜು ಗೋವಾ ಕಾಂಗ್ರೆಸ್(GPCC) ಅಧ್ಯಕ್ಷ ಸುಭಾಶ್ ಅವರಿಗೆ ಸೇರಿದ್ದಾಗಿದೆ. ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಆದೇಶಿಸಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಹೇಳಿದ್ದಾರೆ.
ಶಿರೋಡಾದಲ್ಲಿರುವ ಶ್ರೀ ಕಾಮಾಕ್ಷಿ ಹೋಮೋಪಥಿಕ್ ಕಾಲೇಜಿನಲ್ಲಿ ಕಳೆದ ವಾರಾಂತ್ಯದಲ್ಲಿ ಸುಮಾರು 9 ಮಾನವ ಅಸ್ಥಿಪಂಜರಗಳು ಪತ್ತೆಯಾಗಿತ್ತು.
ಸಾಮೂಹಿಕ ಹತ್ಯೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಗೃಹಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಮನೋಹರ್ ಹೇಳಿದ್ದಾರೆ.
ಇಲ್ಲಿ ಸಿಕ್ಕಿರುವ ಮಾನವ ಅಸ್ಥಿ ಪಂಜರಕ್ಕೂ ಸೀರಿಯಲ್ ಕಿಲ್ಲರ್ ಮಹಾನಂದ್ ನಾಯಕ್ ಗೂ ಸಂಬಂಧವಿದೆಯೇ ಎಂಬ ಪ್ರಶ್ನೆಯೊಂದಿಗೆ ತನಿಖೆ ಆರಂಭಗೊಂಡಿದೆ.
ಸರಣಿ ಹಂತಕ ಮಹಾನಂದ ನಾಯಕ್ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿ ಜೈಲು ಸೇರುವ ಮುನ್ನ ಸುಮಾರು 18 ಬರ್ಬರ ಹತ್ಯೆಗಳನ್ನು ಮಾಡಿ ಗೋವಾ ಬೆಚ್ಚು ಬೀಳುವಂತೆ ಮಾಡಿದ್ದ.
ಜಿಪಿಸಿಸಿ ಅಧ್ಯಕ್ಷ ಸುಭಾಶ್ ಅವರ ಕಾಲೇಜಿನ ಆವರಣದಲ್ಲಿ ಸಾಲು ಸಾಲು ಮಾನವ ಅಸ್ಥಿಪಂಜರ ಪತ್ತೆಯಾದರೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ನಾಯಕ ಮನೋಹರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
'ಇದೇ ಮಾನವ ಅಸ್ಥಿಪಂಜರಗಳು ಪಣಜಿ ಕ್ಷೇತ್ರ(ಮನೋಹರ್ ಅವರು ಪ್ರತಿನಿಧಿಸುವ ಕ್ಷೇತ್ರ)ದಲ್ಲಿ ಸಿಕ್ಕಿದ್ದರೆ ಕಾಂಗ್ರೆಸ್ ನವರ ಆರ್ಭಟ ಜೋರಾಗಿರುತ್ತದೆ' ಎಂದು ಪಾರಿಕ್ಕಾರ್ ಟೀಕಿಸಿದ್ದಾರೆ.
ಪ್ರಕರಣದ ಬಗ್ಗೆ ಪಿಟಿಐಗೆ ಪ್ರತಿಕ್ರಿಯಿಸಿರುವ ಶಿರೋಡ್ಕರ್ 'ನಾನು ಎಲ್ಲಾ ರೀತಿಯ ತನಿಖೆಗೆ ಸಿದ್ಧ. ನಾನು ಯಾವುದೇ ತಪ್ಪು ಎಸಗಿಲ್ಲ' ಎಂದಿದ್ದಾರೆ.
ಈ ಅಸ್ಥಿಪಂಜರಗಳು ಕಾಲೇಜಿಗೆ ಸಂಬಂಧಿಸಿದ್ದು ನಿಜ. ಹೋಮಿಯೋಪಥಿಕ್ ಕಾಲೇಜಿನಲ್ಲಿ ಅಧ್ಯಯನ ನಡೆಸಲು ಬಳಸಲಾದ ಅಸ್ಥಿಪಂಜರಗಳು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಅಸ್ಥಿಪಂಜರಗಳು ಈಗಿರುವ ರೀತಿ ನೋಡಿದರೆ ತಿಳಿಯುತ್ತದೆ. ಆಳದ ಗುಂಡಿ ತೆಗೆದು ಹೂಳಲಾಗಿದೆ. ಇದಕ್ಕೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಬೋರ್ಡ್ ನ ಪ್ರಮಾಣ ಪತ್ರವನ್ನು ಪಡೆಯಲಾಗಿದೆ. ಮಳೆ, ಗಾಳಿಗೆ ಸಿಲುಕಿ ಮಣ್ಣು ಕೊಚ್ಚಿಕೊಂಡು ಹೋದ ಪರಿಣಾಮ ಅಸ್ಥಿಪಂಜರ ಮೇಲ್ಭಾಗಕ್ಕೆ ಕಾಣಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಸುಭಾಶ್ ಹೇಳಿದ್ದಾರೆ.












Click it and Unblock the Notifications