ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಿಎಂ ಸಿದ್ದು!
ಬೆಂಗಳೂರು, ಜು.5 : "ನೀವು ಇರೋದು ಜನರ ಕೆಲಸ ಮಾಡಲಿಕ್ಕೆ ಅಲ್ವೇನ್ರೀ. ಅವರಿಗೆ ಏಕೆ ತೊಂದರೆ ಕೊಡ್ತಿರಾ? ಬೇಗ ಕೆಲಸ ಮಾಡಿಕೊಡಿ". ಜಿಲ್ಲಾಧಿಕಾರಿಗಳೊಬ್ಬರಿಗೆ ಸಿಎಂ ಸಿದ್ದರಾಮಯ್ಯ ಪೋನಿನಲ್ಲಿ ತರಾಟೆಗೆ ತಗೆದುಕೊಂಡಿದ್ದು ಹೀಗೆ. ಇದು ನಡೆದದ್ದು, ಜನತಾದರ್ಶನ ಕಾರ್ಯಕ್ರಮದಲ್ಲಿ.
ಶುಕ್ರವಾರ ಬೆಳಗ್ಗೆ ಸಿಎಂ ಗೃಹ ಕಚೇರಿಯಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮ ವಿಭಿನ್ನವಾಗಿತ್ತು. ಸ್ಥಳದಿಂದಲೇ ಅಧಿಕಾರಿಗಳಿಗೆ ಫೋನ್ ಮಾಡಿದ ಸಿಎಂ ಸಿದ್ದರಾಮಯ್ಯ ಜನರ ಕೆಲಸ ಮಾಡಿಕೊಡಲು ಏಕೆ ವಿಳಂಬ ಮಾಡುತ್ತೀರಿ ಎಂದು ತಮ್ಮದೇ ಶೈಲಿಯಲ್ಲಿ ಅವರನ್ನು ತರಾಟೆಗೆ ತೆಗೆದುಕೊಂಡರು.
ನಿಮ್ಮ ಜಿಲ್ಲೆಯ ಸಮಸ್ಯೆ ಬಗೆಹರಿಸಲು ಆಗುವುದಿಲ್ಲವೇ? ಜನರಿಗೆ ಸುಮ್ಮನೆ ಏಕೆ ತೊಂದರೆ ಕೊಡುತ್ತೀರಿ? ಎಂದು ಪ್ರಶ್ನಿಸಿದರು. ಇಂದಿನ ಜನತಾ ದರ್ಶನದಲ್ಲಿ ಸಿಎಂ ಸುಮಾರು ಸುಮಾರು 3೦೦ಕ್ಕೂ ಹೆಚ್ಚು ಜನ ವಿವಿಧ ದೂರು-ದುಮ್ಮಾನಗಳನ್ನು ಸ್ವೀಕರಿಸಿದರು. ಪರಿಹಾರ ಒದಗಿಸಿಕೊಡಿ ಎಂದು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರಿಗೆ ಒದಗಿಸುವ ಭರವಸೆ ನೀಡಿದರು.
ಬಿಡಿಎ, ಬಿಬಿಎಂಪಿ, ಪೊಲೀಸರು, ಕಂದಾಯ, ಸಮಾಜ ಕಲ್ಯಾಣ ಹೀಗೆ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಸಿಎಂ ಜೊತೆಗಿದ್ದರು. ಶಿಸ್ತುಬದ್ಧವಾಗಿ ನಡೆದ ಕಾರ್ಯಕ್ರಮದಲ್ಲಿ, ಸಾರ್ವಜನಿಕರಿಂದ ಸ್ವೀಕರಿಸುವ ಪ್ರತಿಯೊಂದು ಅರ್ಜಿಗೂ ನಂಬರ್ ಕೊಟ್ಟು ದಾಖಲಾತಿ ಮಾಡುವ ಸಹ ನಡೆಯಿತು.
ಹೇಗಿತ್ತು ಸಿಎಂ ಕಾರ್ಯವಿಧಾನ : ಜನತಾ ದರ್ಶನದಲ್ಲಿ ಧಾರವಾಡದ ಗೋವಿಂದರೆಡ್ಡಿ ಎಂಬುವವರು ನನಗೆ ೪೦ ಎಕರೆ ಜಮೀನಿದೆ, ನನ್ನ ಜಮೀನಿನಲ್ಲಿ ನನಗೆ ವ್ಯವಸಾಯ ಮಾಡಲು ರಿಯಲ್ ಎಸ್ಟೇಟ್ ಮಾಫಿಯಾದವರು ಅವಕಾಶ ನೀಡುತ್ತಿಲ್ಲ ಎಂದು ಮನವಿ ಮಾಡಿದರು.
ತಕ್ಷಣ ಸ್ಪಂದಿಸಿದ ಸಿಎಂ ಅವರು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅವರಿಗೆ ಕರೆ ಮಾಡಿ, ಇವರ ಸಮಸ್ಯೆ ಬೇಗ ಬಗೆಹರಿಸಬೇಕು. ಯಾರೂ ತೊಂದರೆ ಕೊಡಬಾರದು ಎಂದರು. ಇವರನ್ನು ನಿಮ್ಮ ಬಳಿ ಕಳುಹಿಸುತ್ತಿದ್ದೇನೆ. ಅವರ ಕೆಲಸ ಬೇಗ ಮಾಡಿಕೊಡಿ ಎಂದು ಪೊಲೀಸ್ ಜೀಪಿನಲ್ಲಿ ಅವರನ್ನು ಎಡಿಜಿಪಿ ಕಚೇರಿಗೆ ಕಳುಹಿಸಿಕೊಟ್ಟರು.
ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಜನತಾ ದರ್ಶನ ಕಾರ್ಯಕ್ರಮ ನಡೆಯಲಿದೆ. ಸ್ವತಃ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ದಂಡಿನೊಂದಿಗೆ ಜನತಾ ದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ಮುಂದಿನ ವಾರದ ಜನತಾ ದರ್ಶನ ಹೇಗಿರುತ್ತದೆ? ಕಾದು ನೋಡೋಣ.