ಒತ್ತಡಕ್ಕೆ ಮಣಿದ ಸರ್ಕಾರ, ಬಿಎಂಟಿಸಿ ದರ ಇಳಿಕೆ
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬಿಎಂಟಿಸಿ ಪ್ರಯಾಣ ದರವನ್ನು ಮೊದಲ ಸ್ಟೇಜ್ ಗೆ 1ರೂ. ಇಳಿಕೆ ಮಾಡಲಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ಹೇಳಿದರು. ಸಂಸ್ಥೆಯನ್ನು ನಷ್ಟದಲ್ಲಿ ನಡೆಸಲು ಸಾಧ್ಯವಿಲ್ಲ, ಆದ್ದರಿಂದ ಪ್ರಯಾಣದರವನ್ನು ಹೆಚ್ಚಳ ಮಾಡಲಾಗಿತ್ತು ಎಂದರು.
ಕೆಂಗೇರಿಯಲ್ಲಿ ನೂತನ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರು. ಪ್ರಯಾಣದರ ಹೆಚ್ಚಳ ಮಾಡುವುದು ಸಂಸ್ಥೆಗೆ ಅನಿವಾರ್ಯವಾಗಿತ್ತು. ಸಂಸ್ಥೆ ನಷ್ಟದಲ್ಲಿ ಸಾಗುತ್ತಿದೆ. ಆದರೆ, ಜನರಿಗೆ ಹೊರೆ ಆಗುತ್ತದೆ ಎಂದು ಪ್ರಯಾಣದರವನ್ನು 1 ರೂ. ಇಳಿಕೆ ಮಾಡಲಾಗಿದೆ ಎಂದು ಹೇಳಿದರು.(ನಷ್ಟದ ಬಂಡಿಮೇಲೆ ಓಡುತ್ತಿದೆ ಬಿಎಂಟಿಸಿ ಬಸ್)
ಹಂತ-ಹಂತವಾಗಿ ದರವನ್ನು ಸಂಸ್ಥೆ ಪರಿಷ್ಕರಿಸಲಿದೆ. ಮೊದಲ ಹಂತವಾಗಿ ಫಸ್ಟ್ ಸ್ಟೇಜ್ ಪ್ರಯಾಣದರವನ್ನು 1ರೂ.ಕಡಿತ ಮಾಡಲಾಗಿದ್ದು, ಶುಕ್ರವಾರ ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬರಲಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಹಂತಗಳ ಪ್ರಯಾಣದರವನ್ನು ಕಡಿಮೆ ಮಾಡುವ ಕುರಿತು ಆಲೋಚಿಸಲಾಗುವುದು ಎಂದು ತಿಳಿಸಿದರು. (ಬಸ್ ದರ ಏರಿಕೆ ವಿರುದ್ಧ ಸಿಡಿದೆದ್ದ ಪ್ರಯಾಣಿಕ)
ಜೂನ್ 15ರಂದು ಬಿಎಂಟಿಸಿ ಸಂಸ್ಥೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಶೇ 16ರಷ್ಟು ದರ ಹೆಚ್ಚಳ ಮಾಡಲಾಗಿತ್ತು. ಸಾರ್ವಜನಿಕರು ಮತ್ತು ವಿಪಕ್ಷಗಳು ಸಹ ಸರ್ಕಾರದ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಹಲವಾರು ಜನರ ಒತ್ತಡಗಳಿಗೆ ಮಣಿದಿರುವ ಸರ್ಕಾರ ಮೊದಲ ಸ್ಟೇಜ್ ಗೆ ಮಾತ್ರ 1 ರೂ. ಪ್ರಯಾಣದ ದರ ಇಳಿಕೆ ಮಾಡುವ ಮೂಲಕ ಜನರ ಕಣ್ಣೋರೆಸುವ ತಂತ್ರ ಅನುಸರಿಸಿದೆ.(ಬಿಎಂಟಿಸಿ ಪ್ರಯಾಣ ಎಷ್ಟು ಹೆಚ್ಚಾಗಿದೆ)
ಬಸ್ ದಿನಕ್ಕೆ ಪ್ರತಿಭಟನೆ ಸ್ವಾಗತ : ಬಿಎಂಟಿಸಿ ಬಸ್ ಪ್ರಯಾಣ ದರ ಇಳಿಕೆಗೆ ಆಗ್ರಹಿಸಿ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಕಾರ್ಯಕರ್ತರು ಬಸ್ ದಿನವಾದ ಗುರುವಾರ ಪ್ರತಿಭಟನೆ ನಡೆಸಿ ಬಿಎಂಟಿಸಿ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೆಜೆಸ್ಟಿಕ್, ಹೆಬ್ಬಾಳ ಹಾಗೂ ಶಾಂತಿನಗರ ಬಸ್ನಿಲ್ದಾಣಗಳಲ್ಲಿ ಬ್ಲಾಕ್ ಡೇ (ಕಪ್ಪುದಿನ) ಆಚರಿಸಲಾಯಿತು. ನೂರಾರು ಬಸ್ ಪ್ರಯಾಣಿಕರು ತೋಳಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಶನಿವಾರ ಲೋಕಸತ್ತಾ ಪಕ್ಷದ ಪ್ರತಿಭಟನೆ : ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಪ್ರಯಾಣದರವನ್ನು ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿರುವ ಸರ್ಕಾರ ಕ್ರಮವನ್ನು ಖಂಡಿಸಿ, ಲೋಕಸತ್ತಾ ಪಕ್ಷ ಶನಿವಾರ ಪ್ರತಿಭಟನೆ ನಡೆಸಿಲಿದೆ. ಶಾಂತಿನಗರದ ಸಾರಿಗೆ ಸಂಸ್ಥೆ ಕಚೇರಿಯ ಮುಂದೆ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಯಲಿದೆ.