ಅಪ್ಪಮಗ ಕಣ್ಣೀರಿಟ್ಟರು, ಇತ್ತ ಜನರೂ ಭಾವುಕರಾದರು

ಇದು ಕಾಂಗ್ರೆಸ್ಸಿನ ಹಿರಿಯ ಜೀವ ಮತ್ತು ಸಂಸದ ಧರಂ ಸಿಂಗ್ ಕಣ್ಣೀರಿಟ್ಟ ಕಥೆ. ಜಿಲ್ಲೆಯ ಜೇವರ್ಗಿಯಲ್ಲಿ ಶಾಸಕ ಮತ್ತು ಧರಂ ಸಿಂಗ್ ಅವರ ಪುತ್ರ ಅಜಯ್ ಸಿಂಗ್ ಅವರಿಗೆ ಸೋಮವಾರ ( ಜು 1) ಅಭಿನಂದನಾ ಸಮಾರಂಭವನ್ನು ಸ್ಥಳೀಯರು ಆಯೋಜಿಸಿದ್ದರು.
ಸಮಾರಂಭದಲ್ಲಿ ಮಾತನಾಡುತ್ತಿದ್ದ ಧರಂ ಸಿಂಗ್, ನನ್ನ ರಾಜಕೀಯ ಜೀವನಕ್ಕೆ ಇಲ್ಲಿನ ಜನತೆ ಆಧಾರ. ನೀವು ನನಗೆ ಕೊಟ್ಟ ಬೆಂಬಲ ಮತ್ತು ಸಹಕಾರವನ್ನು ನನ್ನ ಮಗನಿಗೂ ನೀಡಿ ಅವನನ್ನು ಜಯಶೀಲರನ್ನಾಗಿ ಮಾಡಿದ್ದೀರಿ.
ಕಳೆದ ಮೂರು ದಶಕಗಳಿಂದ ನನ್ನನ್ನು ಸತತವಾಗಿ ಲೋಕಸಭೆ ಮತ್ತು ವಿಧಾನಸಭೆ ಆರಿಸಿ ಕಳುಹಿಸಿದ್ದೀರಿ. ನಿಮ್ಮ ಅಭಿಮಾನಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನ ಜೀವಕ್ಕೆ ಶಕ್ತಿ ಇರುವವರೆಗೆ ನಾನು ಸಾಮಾಜಿಕ ಸೇವೆಯಲ್ಲಿ ತೊಡಗುತ್ತೇನೆ ಎಂದು ಸಭೆಯಲ್ಲೇ ಗಳಗಳನೇ ಕಣ್ಣೀರ ಕೋಡಿ ಹರಿಸಿದರು.
ಇದನ್ನು ನಿರೀಕ್ಷಿಸದ ವೇದಿಕೆಯಲ್ಲಿದ್ದವರು ಒಂದು ಕ್ಷಣ ಅವಕ್ಕಾದರು. ಕೂಡಲೇ ಪುತ್ರ ಅಜಯ್ ಸಿಂಗ್ ತಂದೆಯ ಬಳಿಗೆ ಹೋಗಿ ಅವರನ್ನು ಸಮಾಧಾನ ಪಡಿಸುವಾಗ ಅವರೂ ಭಾವುಕರಾಗಿ ಕಣ್ಣೀರಿಟ್ಟರು.
ಇದಕ್ಕೆಲ್ಲಾ ಸಾಕ್ಷಿಯಾದ ನೆರೆದಿದ್ದ ಜನತೆ ತಮ್ಮ ತಮ್ಮ ಕರ್ಚೀಫ್ ಹೊರತೆಗೆದರು.












Click it and Unblock the Notifications