ಹೈದರಾಬಾದ್, ಪಟ್ನಾದಲ್ಲಿ ನರೇಂದ್ರ ಮೋದಿ ಕರಾಮತ್ತು
ಅಹಮದಾಬಾದ್, ಜುಲೈ 1: ಪ್ರಧಾನಿ ಹುದ್ದೆ ಅಲಂಕರಿಸಲು ಪಣತೊಟ್ಟಿರುವ ಗುಜರಾತಿನ ಹಾಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮುಂದಿನ ಲೋಕಸಭೆ ಚುನಾವಣೆಗಾಗಿ ಮಹತ್ವಾಕಾಂಕ್ಷಿ ಗೇಮ್ ಪ್ಲಾನ್ ಸಿದ್ದಪಡಿಸಿದ್ದಾರೆ. ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಈ ಕುರಿತು ಬಿಜೆಪಿ ನಾಯಕರ ಜತೆ ಆಮೂಲಾಗ್ರವಾಗಿ ಚರ್ಚಿಸಿರುವ ಮೋದಿ ಒಂದೊಂದಾಗಿ ಆಯಕಟ್ಟಿನ ಸ್ಥಳಗಳಲ್ಲಿ ಚುನಾವಣೆ ಪ್ರಚಾರ ಸಭೆಗಳನ್ನು ಆರಂಭಿಸಿದ್ದಾರೆ.
ಏನೇ ಆಗಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಮುಂದಿನ 10 ತಿಂಗಳಲ್ಲಿ ಕರಾರುವಕ್ಕಾದ ಚುನಾವಣಾ ಸಭೆ/ ಕಾರ್ಯಕ್ರಮಗಳನ್ನು ಆಯೋಜಿಸಿ ಗರಿಷ್ಠ ಪ್ರಯೋಜನ ಪಡೆಯುವಂತೆ ಮೋದಿ ಬಿಜೆಪಿ ನಾಯಕರಿಗೆ ತಾಕೀತು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಇದರ ಹೊರತಾಗಿ ಲೋಕಸಭೆಯ 165 ಕ್ಷೇತ್ರಗಳಲ್ಲಿ ಅಂತರ್ಜಾಲ ಆಧಾರಿತ ಸಾಮಾಜಿಕ ಜಾಲತಾಣಗಳು ಬಲಿಷ್ಠವಾಗಿವೆ. ಆ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆಯೂ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳು ಮೊದಲ ಸಭೆಯನ್ನು ಪಂಜಾಬಿನಲ್ಲಿ ಯಶಸ್ವಿಯಾಗಿ ನಡೆಸಿದ ಸಿಎಂ ಮೋದಿ ಮುಂದಿನ ಹಂತದಲ್ಲಿ ಹೈದರಾಬಾದ್ ಮತ್ತು ಪಟ್ನಾದಲ್ಲಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಅಂದರೆ ಹೈದರಾಬಾದಿನಲ್ಲಿ ಸಂಸದ ಅಸಾಸುದ್ದೀನ್ ಓವೈಸಿ, ಶಾಸಕ ಅಕ್ಬರುದ್ದೀನ್ ಓವೈಸಿ ಮತ್ತು ಪಟ್ನಾದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹಿಮ್ಮೆಟ್ಟುವ ಬಗ್ಗೆ ಸ್ಥಳೀಯ ನಾಯಕರೊಂದಿಗೆ ಸಭೆಯಲ್ಲಿ ಸಮಗ್ರವಾಗಿ ಸಮಾಲೋಚನೆ ನಡೆಸಲು ತೀರ್ಮಾನಿಸಿದ್ದಾರೆ.
ಕಳೆದ ವಾರ ಮುಂಬೈನಲ್ಲಿ ಈ ಕುರಿತು ಬಿಜೆಪಿ ಮತ್ತು ಶಿವಸೇನೆ ನಾಯಕರೊಂದಿಗೆ ಚರ್ಚಿಸಿದ ಸಿಎಂ ಮೋದಿ, ಜುಲೈ 27ರಂದು ಹೈದರಾಬಾದಿನಲ್ಲಿ ತಮ್ಮ ಮುಂದಿನ ಚುನಾವಣಾ ತಯಾರಿ ಸಭೆಯನ್ನು ಆಯೋಜಿಸಲು ತೀರ್ಮಾನಿಸಿದರು ಎಂದು ತಿಳಿದುಬಂದಿದೆ. ಹಾಗೆಯೇ ಅಕ್ಟೋಬರ್ 7ರಂದು ಪಟ್ನಾದಲ್ಲಿಯೂ ಮಹತ್ವದ ಸಭೆ ನಡೆಸಲು ಆಲೋಚಿಸಿದ್ದಾರೆ.
ಈ ಎರಡರ ಪೈಕಿ ಹೈದರಾಬಾದಿನ ಸಭೆಗೆ ವಿಶೇಷ ಮಹತ್ವ ಬಂದಿದೆ. ಏಕೆಂದರೆ MIM ನಾಯಕರಾದ ಓವೈಸಿ ಸೋದರರು ಮೋದಿಯನ್ನು ಗುರಿಯಾಗಿಸಿಕೊಂಡು ವರ್ಷದ ಹಿಂದೆ ತೀವ್ರ ವಾಗ್ದಾಳಿ ನಡೆಸಿದ್ದರು. ಅವರಿಗೆ ತಕ್ಕ ಉತ್ತರ ನೀಡುವ ಬಗ್ಗೆ ಹೈದರಾಬಾದ್ ಚುನಾವಣಾ ಸಭೆಯಲ್ಲಿ ಮೋದಿ ಗೇಮ್ ಪ್ಲಾನ್ ಸಿದ್ಧಪಡಿಸುವ ಆಲೋಚನೆ ನಡೆಸಿದ್ದಾರೆ ಎಂದಿ ಬಿಜೆಪಿ ಮೂಲಗಳು ಹೇಳಿವೆ. ಜತೆಗೆ, ತೆಲಂಗಾಣ ಪರ ಬಿಜೆಪಿ ಹೊಂದಿರುವ ನಿಲುವನ್ನು ಸ್ಪಷ್ಟಪಡಿಸುವ ಹೊಣೆಗಾರಿಕೆಯೂ ಮೋದಿ ಮೇಲಿದೆ.












Click it and Unblock the Notifications