ಕೇದಾರನಾಥ ದೇಗುಲ ಅಚ್ಚಳಿಯದೆ ಉಳಿದಿದ್ದು ಹೇಗೆ?
ಬೆಂಗಳೂರು, ಜೂ.27: ಲೋಕರಕ್ಷಕ, ದೀನನಾಥ ಕೇದಾರನಾಥ ಈಗ ಅನಾಥನಲ್ಲ ಆತನ ಪೂಜೆ ಪುನಸ್ಕಾರ ಈ ವಾರದಿಂದಲೇ ಆರಂಭಗೊಳ್ಳಲಿದೆ ಎಂದು ಉತ್ತರಾಖಂಡ್ ರಾಜ್ಯದ ಕೇದಾರನಾಥ ದೇಗುಲದ ವೀರಶೈವ ಪರಂಪರೆಯ ಅರ್ಚಕರು ಹೇಳಿದ್ದಾರೆ. ಅದರೆ, ದೇಗುಲಕ್ಕೆ ಬರುವ ಹಾದಿ ಸರಿಪಡಿಸಲು ಇನ್ನೆರಡು ವರ್ಷವಾದರೂ ಬೇಕಾಗುತ್ತದೆ.
ಗಂಗೆಯ ಆರ್ಭಟಕ್ಕೆ ಕೇದಾರನಾಥದ ಸುಂದರ ದೇಗುಲ ಸ್ಮಶಾನದಂತೆ ಆಗಿದೆ. ಗಾಂಧಿ ಸರೋವರದಿಂದ ಹರಿದು ಬಂದ ಹಿಮಪ್ರವಾಹಕ್ಕೆ ಮೈಯೊಡ್ಡಿ ನಿಂತ ಕೇದಾರನಾಥ ಮಲೀನಗೊಂಡರೂ ಜಖಂಗೊಂಡಿಲ್ಲ. ವಾಸ್ತು ಶಿಲ್ಪಶಾಸ್ತ್ರ ತಜ್ಞರ ಕುತೂಹಲಕ್ಕೆ ಕಾರಣವಾಗಿರುವ ಕೇದಾರನಾಥ ದೇಗುಲದ ಸುತ್ತ ಒಂದು ನೋಟ ಇಲ್ಲಿದೆ.
ಹಿಮ ಸ್ಫೋಟ, ಜಲ ಪ್ರಳಯದ ನಂತರ ಕೇದಾರನಾಥನ ದೇವಸ್ಥಾನದ ಸುತ್ತಾ 10 ಅಡಿಗೂ ಅಧಿಕ ಆಳದ ಮಣ್ಣು ಕುಸಿತ ಆರಂಭವಾಗಿತ್ತು. ದೇಗುಲದ ಸಮಸ್ತ ಆಸ್ತಿ, ಆಭರಣಗಳು ಕೊಚ್ಚಿ ಹೋಗಿದ್ದವು. ಆದರೂ, ದೇಗುಲದ ಮುಖ್ಯ ಕಟ್ಟಡ ಭದ್ರವಾಗಿ ನಿಂತಿತ್ತು.
ಉತ್ತರಾಖಂಡ್ ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳಗಳಲ್ಲಿರುವ ಕಟ್ಟಡಗಳು ಧರೆಗುಳಿದ್ದು ಭಕ್ತಾದಿಗಳಿಗೆ ಕಣ್ಣಿಗೆ ಕಟ್ಟಿದ್ದಂತಿದೆ. ಆದರೆ, ಕೇದಾರಾನಾಥ ದೇಗುಲ ಮಾತ್ರ ಸಣ್ಣ ಪುಟ್ಟ ತರಚು ಗಾಯದೊಂದಿಗೆ ಅಳುಕದೆ ಭಕ್ತಾದಿಗಳ ಆಗಮನದ ನಿರೀಕ್ಷೆಯಲ್ಲಿ ಭದ್ರವಾಗಿ ನಿಂತಿದ್ದಾದರೂ ಹೇಗೆ? ಈ ಕಟ್ಟಡಕ್ಕೆ ಪರಮಶಿವನ ಅನುಗ್ರಹವಿದೆಯೆ? ದೇವರೇ ಇಲ್ಲಿ ನೆಲೆಸಿ ರಕ್ಷಿಸಿದನೇ? ಕಟ್ಟಡ ಉಳಿಸಿದ ದೇವರು ಭಕ್ತರು ಸಾಯಲು ಬಿಟ್ಟಿದ್ದು ಏಕೆ?
ಸುಮಾರು 5 ಸಾವಿರಕ್ಕೂ ಅಧಿಕ ಇತಿಹಾಸ, ಪುರಾಣವುಳ್ಳ ಜ್ಯೋತಿರ್ಲಿಂಗ ದೇಗುಲದ ವಾಸ್ತು ಶಿಲ್ಪದ ಬಗ್ಗೆ ವಿಜ್ಞಾನಿಗಳು ಏನು ಹೇಳುತ್ತಾರೆ. ವಿಜ್ಞಾನಿಗಳು ಕೇವಲ 400 ವರ್ಷಗಳ ಲೆಕ್ಕ ಕೊಡುವುದು ಏಕೆ? ಉತ್ತರಕ್ಕೆ ಮುಂದೆ ಓದಿ...
ದೇಗುಲದ ರಚನೆ
ಕೇದಾರನಾಥ ದೇಗುಲದ ವಾಸ್ತು ವಿನ್ಯಾಸವೇ ಅದರ ರಕ್ಷಣೆ ಮಾಡಿದೆ. ಇದರಲ್ಲಿ ಯಾವುದೆ ಅತೀಂದ್ರೀಯ ಶಕ್ತಿ ಕೈವಾಡ ಇಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ದೇಗುಲದ ರಚನೆಯಲ್ಲಿ ಹಲವಾರು ಹಳದಿ ಬಣ್ಣದ ರೇಖೆಗಳನ್ನು ಕಾಣಬಹುದು ಇವು ಕಲ್ಲಿನ ನಡುವೆ ಘರ್ಷಣೆ ತಪ್ಪಿಸುವ ಹಿಮ ನದಿ (Glacier) ಸಂಚಲನವನ್ನು ಸೂಚಿಸುತ್ತದೆ.ಮಣ್ಣು ಹಾಗೂ ಕಲ್ಲು ಸಮ್ಮಿಶ್ರಣ ಹೊಂದಿರುವ ಹಿಮ ನದಿ ಸಂಚಲನ ಕೂಡಾ ವಿಕೋಪಕ್ಕೆ ತುತ್ತಾಗಿ ಸವೆತಕ್ಕೊಳಗಾಗಬಹುದು. ಇದನ್ನು ಕಟ್ಟಡದಲ್ಲಿ ಅಲ್ಲಲ್ಲಿ ಉಂಟಾಗಿರುವ ಹಳದಿ ರೇಖೆಗಳ ಮೂಲಕ ಗುರುತಿಸಬಹುದಾಗಿದೆ ಎಂದು ವಾಡಿಯಾ ಇನ್ಸ್ಟಿಟ್ಯೂಟ್ ನ ಭೂಗರ್ಭಶಾಸ್ತ್ರಜ್ಞರು ಹೇಳಿದ್ದಾರೆ.
ಒಳ ವಿನ್ಯಾಸ ರಚನೆ
ಇದಲ್ಲದೆ ದೇಗುಲದ ಒಳಭಾಗದ ವಿನ್ಯಾಸದಲ್ಲೂ ಈ ರೀತಿ ರೇಖೆಗಳನ್ನು ಕಾಣಬಹುದಾಗಿದೆ. ಆದರೆ, ಇಲ್ಲಿರುವ ಕಲ್ಲುಗಳು ಸಂಪೂರ್ಣವಾಗಿ ಸವೆತಕ್ಕೆ ಸಿಕ್ಕಿವೆ.
ಹಿಮನದಿ ಪ್ರಕೃತಿ ವೈಪರೀತ್ಯದ ಸಂದರ್ಭದಲ್ಲಿ ಗುಪ್ತವಾಗಿ ಹರಿಯುವ ಮೂಲಕ ಕಟ್ಟಡದ ಹೊರಮೈಗೆ ಹಾನಿ ಉಂಟು ಮಾಡಿ, ಮೂಲ ಕಟ್ಟಡ ಅಲುಗಾಡದಂತೆ ಹಿಡಿದಿಡುತ್ತದೆ. ಹೀಗಾಗಿ ಹಿಮಸ್ಫೋಟಕ್ಕೆ ಸಿಲುಕಿದರೂ ಕೇದಾರನಾಥ ದೇಗುಲ ಭದ್ರವಾಗಿ ನಿಂತಿದೆ.
ಮೇಲ್ಭಾಗದ ಗಾಂಧಿ ಸರೋವರ ಅಥವಾ ಚಾರೋಬಾರಿ ತಾಲ್ ಇರುವುದು ಸಮುದ್ರಮಟ್ಟದಿಂದ 13 ಸಾವಿರ ಅಡಿ ಎತ್ತರದಲ್ಲಿ ಅದು ಸುನಾಮಿಯಂತೆ 11 ಸಾವಿರ ಅಡಿ ಎತ್ತರದಲ್ಲಿರುವ ಕೇದಾರ ನಾಥ ದೇಗುಲದ ಮೇಲೆ ಬಿದ್ದಿದೆ. ಹಿಮನದಿ ಹೊಡೆತ ಎತ್ತರದ ಪ್ರದೇಶದಿಂದ ಆಗಿರುವುದರಿಂದ ಕೇದಾರನಾಥ್ ಸೇಫ್ ಆಗಿದ್ದಾನೆ.
ದೇಗುಲ ನಿರ್ಮಾಣವಾಗಿದ್ದು ಯಾವಾಗ?
ದೇಗುಲ ನಿರ್ಮಾಣವಾಗಿದ್ದು ಮಹಾಭಾರತ ಕಾಲದಲ್ಲಿ ಎಂದು ಹಲವರ ನಂಬಿಕೆ. ಇದಕ್ಕೆ ಶಿವ ಪುರಾಣ, ಮಹಾಭಾರತದ ಉಪಕಥೆ ಆಧಾರವೂ ಇದೆ. ಐತಿಹಾಸಿಕವಾಗಿ ಮಾಳ್ವ ದೇಶ ರಾಜ ಭೋಜನ ಕಾಲದಲ್ಲಿ ಅಂದರೆ ಕ್ರಿ.ಶ 1076 ರಿಂದ 1099 ರಲ್ಲಿ ಕಟ್ಟಲಾಗಿದೆ ಎಂಬುದಕ್ಕೂ ಆಧಾರವಿದೆ.
ದ್ವಾಪರ ಯುಗದಲ್ಲಿ ಪಾಂಡವರು ಈ ದೇಗುಲ ಕಟ್ಟಿದರು ಎಂಬುದಕ್ಕೆ ಪೂರಕ ಕಥೆ ಇದೆ. ಆದರೆ, ಇದು ಹಿಂದೂ ಧರ್ಮ ಸಂಸ್ಥಾಪನೆ ಕಾರ್ಯ ಕೈಗೆತ್ತಿಕೊಂಡಿದ್ದ ಆದಿ ಗುರು ಶಂಕರಾಚಾರ್ಯರು ನಿರ್ಮಿಸಿದ ದೇಗುಲ, ಕೇದಾರನಾಥನ ದೇಗುಲಕ್ಕೆ 8ನೇ ಶತಮಾನದಲ್ಲಿ ಜೀವ ತುಂಬಿದ್ದು ಶಂಕರರು ಎನ್ನಲಾಗುತ್ತದೆ.
ಹಿಮನದಿಯ ಭಾಗವಾಗಿ ದೇಗುಲ ಬೆಳೆಯಬೇಕಾದರೆ ಹಿಮಯುಗ ಕಾಲದಲ್ಲಿ ದೇಗುಲದ ಅಸ್ತಿತ್ವವಿರಬೇಕು. ಏನಿಲ್ಲವೆಂದರೂ ಕ್ರಿ.ಶ 1300-1900 ರ ಹಿಂದಿನ ಕಾಲದಲ್ಲಿ ನಿರ್ಮಿತಗೊಂಡಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ದೇಗುಲ ನಿರ್ಮಾಣ ರಹಸ್ಯ
Lichenometric ಡೇಟಿಂಗ್ ಮೂಲಕ ಕೇದಾರನಾಥ ದೇಗುಲದ ಕಲ್ಲುಗಳು ಯಾವ ಕಾಲದ್ದು ಎಂದು ಪರೀಕ್ಷಿಸಲಾಗಿದೆ. ಪುರಾಣ ಕಥೆ ಏನೇ ಇದ್ದರೂ ಈಗಿರುವ ಕಟ್ಟಡದ ಕಲ್ಲುಗಳು ಹೇಳುವ ಸತ್ಯ 14ನೇ ಶತಮಾನಕ್ಕೆ ಬಂದು ನಿಲ್ಲುತ್ತದೆ.
ಹಿಮನದಿಗೂ ಕೇದಾರನಾಥ ದೇಗುಲಕ್ಕೂ ಅವಿನಾಭಾವ ಸಂಬಂಧವಿದೆ. ಇದೇ ದೇಗುಲದ ಕಟ್ಟಡ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ. ಇಲ್ಲಿನ ಹಿಮನದಿಗಳ ಬಗ್ಗೆ ಮುಂದೆ ಓದಿ..
ದೇಗುಲ ನಿರ್ಮಾಣ
ಚಾರೋಬಾರಿ ಹಿಮನದಿ ವಲಯಕ್ಕೆ ಸೇರಿರುವ ಕೇದಾರನಾಥ ಕಣಿವೆಯಲ್ಲಿ ಯಾವುದೇ ಕಟ್ಟಡ ಅಳಿವು ಉಳಿವನ್ನು ಹಿಮನದಿ, ಗುಪ್ತ ಜಲ ಸಂಚಲನ ನಿರ್ಧರಿಸುತ್ತದೆ. ಗಾಂಧಿ ಸರೋವರದ ಬಳಿ ಮಂದಾಕಿನಿ, ಮಧುಗಂಗಾ, ಚಿಹಿರ್ ಗಂಗಾ, ಸರಸ್ವತಿ ಹಾಗೂ ಸ್ವರ್ಣಧಾರಿ ನದಿಗಳು ಹುಟ್ಟುತ್ತವೆ.
ಇದಲ್ಲದೆ ಇನ್ನೂ ಅನೇಕ ನದಿಗಳು ಜನ್ಮತಾಳಿದರೂ ಅವುಗಳ ಬೆಳವಣಿಗೆ ಪತ್ತೆಹಚ್ಚಲಾಗಿಲ್ಲ. ಈ ಪೈಕಿ ಸರಸ್ವತಿ ಗುಪ್ತಗಾಮಿನಿಯಾದರೆ, ಮಂದಾಕಿನಿ ಅಬ್ಬರದ ಮೂಲಕ ಸಾಗುತ್ತಾಳೆ, ಹಿಮಕರಗಿದಾಗ, ಮಳೆ ಸುರಿವಾಗ ಗಂಗೆಯನ್ನೇ ಹೋಲುತ್ತಾಳೆ. ಮುಂದೆ ಅಲಕಾನಂದ ಸೇರುತ್ತಾಳೆ.
ದೇಗುಲದ ಕಟ್ಟಡ ಹೇಗಿದೆ?
ಸುಮಾರು 85 ಅಡಿ ಎತ್ತರ, 187 ಅಡಿ ಅಗಲವಿರುವ ಕೇದಾರನಾಥ ದೇಗುಲದ ಅಡಿಪಾಯದಲ್ಲಿ ಎಂದೂ ಮಾಸದ ಅದ್ಭುತ ಕಲ್ಲುಗಳಿವೆ. 6 ಅಡಿ ವೇದಿಕೆಯಂಥ ಕಲ್ಲಿನ ಮೇಲೆ ಕಟ್ಟಡದ ಪ್ರಮುಖ ಭಾಗ ನಿಂತಿದೆ. ದೇಗುಲದ ಮೂಲೆಗಳು ಹಾಗೂ ಒಳಾಂಗಣ ವಿನ್ಯಾಸ ಎಲ್ಲವೂ ಪಕ್ಕಾ ರೇಖಾಶಾಸ್ತ್ರ ಆಧಾರಿತವಾಗಿದ್ದು, ಕಟ್ಟಡ ನಿರ್ಮಾಣ ವೇಳೆ ಈ ರೀತಿ ಪ್ರಕೃತಿ ವಿಕೋಪದಿಂದ ರಕ್ಷಣೆ ಪಡೆಯುವ ಸಾಮರ್ಥ್ಯ ಇರುವಂತೆ ನಿರ್ಮಿಸಲಾಗಿದೆ.
ವಿಕೋಪಕ್ಕೆ ಸವಾಲು
ಪ್ರಾಕೃತಿಕ ವಿಕೋಪದ ಮುಂದೆ ಏನು ಮಾಡಲು ಆಗುವುದಿಲ್ಲ ಎಂದು ಕೈಚೆಲ್ಲುವ ಸಮಯದಲ್ಲಿ ವಾಸ್ತು ಶಾಸ್ತಜ್ಞರಿಗೆ ಕೇದಾರನಾಥ ದೇಗುಲ ಅದ್ಭುತ ಕುತೂಹಲಕಾರಿ ರಚನೆಯಾಗಿ ಕಾಣುತ್ತಿದೆ. ಹಿಮಸ್ಫೋಟ ಸುನಾಮಿ ದೇಗುಲಕ್ಕೆ ಅಪ್ಪಳಿಸಿದ್ದು ಸುಮಾರು 15 ನಿಮಿಷವಾದರೂ ನಿರಂತರ ಮಳೆ, ಹಿಮ ಕರಗಿ ಪ್ರವಾಹ ಭೀತಿ ನಡುವೆ ಕಟ್ಟಡ ಉಳಿಕೆಗೆ ಹಿಮನದಿ, ಗುಪ್ತಗಾಮಿನಿಯರೇ ಕಾರಣವೇ? ಸರ್ವನಾಶ ಮಾಡುವ ಶಿವ ಸಂರಕ್ಷಕನ ಪಾತ್ರವಹಿಸುತ್ತಿದ್ದಾನೆಯೇ? ಕಲಿಯುಗದಲ್ಲೂ ಇದು ಶ್ರದ್ಧೆ ಭಕ್ತಿ ನಂಬಿಕೆಯ ಸಂಕೇತವೇ ಕಾಲವೇ ಉತ್ತರಿಸಬೇಕು
ಭಕ್ತಿಧಾಮ
ಬದರಿನಾಥ್, ಕೇದಾರನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಉತ್ತರಾಖಂಡ್ ರಾಜ್ಯದ ನಾಲ್ಕು ಪ್ರಸಿದ್ಧ ಭಕ್ತಿಧಾಮಗಳು. ಉಳಿದಂತೆ ರುದ್ರಪ್ರಯಾಗ್, ಜೋಶಿಮಠ ಹೃಷಿಕೇಶ,ಹೇಮಕುಂಡ ಸೇರಿದಂತೆ ಹಲವು ಪ್ರಕೃತಿ ವಿಸ್ಮಯ, ಭಕ್ತಿಧಾಮಗಳನ್ನು ಹೊಂದಿರುವ ಉತ್ತರಾಖಂಡ್ ರಾಜ್ಯ ಹಲವು ರುದ್ರ ರಮಣೀಯ ತಾಣಗಳ ಜೊತೆಗೆ ವಿಸ್ಮಯ ಕಟ್ಟಡಗಳ ತವರೂ ಕೂಡಾ ಹೌದು