ಮಗು ಕೊಂದು ಕಿಡ್ನಾಪ್ ಕಥೆ ಕಟ್ಟಿದ ಹೆತ್ತಮ್ಮ!
ತನ್ನ ಮಗುವನ್ನು ತಾನೇ ಹತ್ಯೆಗೈದಿದ್ದರೂ ಯಾರೋ ಬೇರೆಯವರು ತನ್ನ ಮಗುವನ್ನು ಅಪಹರಿಸಿ ನಾಲೆಗೆ ಎಸೆದು ಕೊಲೆಗೈದಿದ್ದಾರೆ ಎಂದು ಆಕೆಯೇ ಕಥೆ ಕಟ್ಟಿದ್ದಳು. ತನಿಖೆಯ ಸಂದರ್ಭದಲ್ಲಿ ಎಲ್ಲ ಸತ್ಯಸಂಗತಿ ಬಯಲಾಗಿದ್ದು, ಆಕೆಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮಗುವನ್ನು ಅಪಹರಿಸಲಾಗಿದೆ ಎಂದು ಶಾಂತಿನಗರದ ಆಟೋ ಚಾಲಕ ಫೈರೋಜ್ ಖಾನ್ನ ಹೆಂಡತಿ ಸುಮಯ್ಯಾ ಖಾನ್ ಎಂದು ಮಂಡಿ ಠಾಣೆಯ ಪೊಲೀಸರಿಗೆ ನಾಲ್ಕು ದಿನಗಳ ಹಿಂದೆ ದೂರು ನೀಡಿದ್ದಳು. ಒಡವೆಗಳನ್ನು ಗಿರವಿ ಇಡಲು ಅಶೋಕ ರಸ್ತೆಗೆ ಬಂದಾಗ ನನ್ನನ್ನು ಹಾಗೂ ಮಗುವನ್ನು ಮಾರುತಿ ವ್ಯಾನ್ನಲ್ಲಿ ಬಂದ ದುಷ್ಕರ್ಮಿಗಳು ಅಪಹರಣ ಮಾಡಿದ್ದು ನನ್ನನ್ನು ಬೆಂಗಳೂರು ರಸ್ತೆಯ ಕೊಲಂಬಿಯಾ ಆಸ್ಪತ್ರೆ ಬಳಿ ಇಳಿಸಿ ಮಗುವನ್ನು ಎತ್ತಿಕೊಂಡು ಹೋದರೆಂದು ದೂರು ಸಲ್ಲಿಸಿದ್ದಳು.
ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಜೂನ್ 21ರಂದು ಬೆಂಗಳೂರು ಮೈಸೂರು ರಸ್ತೆಯಲ್ಲಿರುವ ಕಳಸ್ತವಾಡಿಯ ಬಳಿ ವಿರಿಜಾ ನಾಲೆಯಲ್ಲಿ ಮಗುವಿನ ಶವ ಸಿಕ್ಕಿತ್ತು. ಆಗ ನಾಟಕವಾಡಿದ್ದ ಸುಮಯ್ಯಾ ಎದೆ ಬಡಿದುಕೊಂಡು ಅತ್ತಿದ್ದಳು. ದುಷ್ಕರ್ಮಿಗಳು ಹಣಕ್ಕಾಗಿ ತನ್ನ ಮಗುವನ್ನು ಅಪಹರಿಸಿ ಕೊಲೆಗೈದಿದ್ದಾರೆ ಎಂದು ರಂಪಾಟ ಮಾಡಿದ್ದಳು.
ಸುಮಯ್ಯಾ ಮತ್ತು ಆಕೆಯ ಗಂಡನನ್ನು ವಿಚಾರಣೆಗೆ ಗುರಿಪಡಿಸಿದಾಗ ಒಂದೊಂದೇ ಸತ್ಯಗಳು ಬಯಲಾಗಲು ಪ್ರಾರಂಭಿಸಿದವು. ಅವರ ಹೇಳಿಕೆಗಳು ವ್ಯತಿರಿಕ್ತವಾಗಿದ್ದವು ಮತ್ತು ಮಗುವನ್ನು ಅಪಹರಿಸಲು ಸಾಧ್ಯವೇ ಇಲ್ಲ ಎಂಬುದು ಪೊಲೀಸರಿಗೆ ಮನದಟ್ಟಾಯಿತು. ಹಸುಗೂಸನ್ನು ಅಪಹರಿಸಿ ನಾಲೆಗೆ ಎಸೆದು ಕೊಲೆಗೈದಿದ್ದು ಆಕೆ ಹೇಳಿದ ಕಟ್ಟುಕಥೆ ಎಂದು ತಿಳಿದುಬಂದಿತು. ಕೊನೆಗೆ ತಾನೇ ಮಗುವನ್ನು ಹತ್ಯೆಗೈದಿದ್ದಾಗಿ ಸುಮಯ್ಯಾ ಪೊಲೀಸರೆದಿರು ಒಪ್ಪಿಕೊಂಡಳು.
ಕುಟುಂಬದ ಹಿನ್ನೆಲೆಯನ್ನು ಕೆದಕಿದ ಪೊಲೀಸರಿಗೆ ಮಗು ನ್ಯುಮೋನಿಯಾ ರೋಗದಿಂದ ಬಳಲುತ್ತಿದ್ದದ್ದು ಗೊತ್ತಾಯಿತು. ಜೊತೆಗೆ ಎರಡು ದಿನಗಳ ಹಿಂದೆಯಷ್ಟೆ ಮಿಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿತ್ತು. ಮಗುವಿನ ಚಿಕಿತ್ಸೆ ಕಷ್ಟವಾದ ಕಾರಣ ಫೈರೋಜ್ ಖಾನ್ಗೆ ತಿಳಿಯದಂತೆ ಮಗುವನ್ನು ಹತ್ಯೆಗೈದು ನಾಲೆಗೆ ಎಸೆದು ಬಳಿಕ ಕಿಡ್ನಾಪ್ ಕಥೆ ಕಟ್ಟಿರುವುದು ಇದೀಗ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭ ಒಪ್ಪಿಕೊಂಡಿದ್ದಾಳೆ.
ಈ ಕಥೆಯನ್ನು ಕೇಳಿ ಜನರು ಸುಮಯ್ಯಾ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ. ತನಗೆ ಸಾಕಲು ಕಷ್ಟವಾಗುತ್ತಿದ್ದರೆ ಮಗುವನ್ನು ಅನಾಥಾಶ್ರಮಕ್ಕೆ ಕೊಡಬಹುದಾಗಿತ್ತು ಅಥವಾ ಮಕ್ಕಳಿಲ್ಲದವರು ದತ್ತು ಪಡೆಯಬಹುದಾಗಿತ್ತು. ಅದು ಬಿಟ್ಟು, ಹಡೆದ ಮಗುವನ್ನೇ ಹತ್ಯೆಗೈದಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ. ಲೋಕದ ಪರಿವೆ ಅರಿಯದ ಕಂದಮ್ಮನ ಹತ್ಯೆಗೈಯ್ಯುವ ಕೃತ್ಯಕ್ಕೆ ಕೈಹಾಕಿದ್ದು ಇಡೀ ಹೆಣ್ಣು ಕುಲಕ್ಕೆ ಅವಮಾನ ಎಂದು ಜರಿಯುತ್ತಿದ್ದಾರೆ. ಮಗುವನ್ನು ನಾಲೆಗೆ ಎಸೆಯುವ ಮುನ್ನ ಆ ಅಮ್ಮನಿಗೆ ಕರಳು ಚುರುಕ್ ಅನ್ನಲಿಲ್ಲವೆ?