ಚೊಚ್ಚಲ ಬಜೆಟ್ ಮಂಡನೆಗೆ ಸಿದ್ದರಾಮಯ್ಯ ಸಜ್ಜು
ಬೆಂಗಳೂರು, ಜೂ.18: ಸುಮಾರು 9 ವರ್ಷಗಳ ನಂತರ ಅಧಿಕಾರ ಪೀಠವೇರಿರುವ ಕಾಂಗ್ರೆಸ್ ಸರ್ಕಾರ ಅಭೂತಪೂರ್ವ ಬಜೆಟ್ ನೀಡುವ ಸುಳಿವು ನೀಡಿದೆ. ಮುಖ್ಯಮಂತ್ರಿ, ವಿತ್ತಸಚಿವ ಸಿದ್ದರಾಮಯ್ಯ ಅವರು ಒಂದು ತಿಂಗಳ ಅಧಿಕಾರ ಅವಧಿ ಪೂರೈಸಿದ ಬೆನ್ನಲ್ಲೇ ಬಜೆಟ್ ಬಗ್ಗೆ ವಿಸ್ತಾರವಾಗಿ ಮಾತನಾಡಿದ್ದಾರೆ.
ಕಳೆದ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಕೇಂದ್ರ ಬಜೆಟ್ ಗೂ ಮುನ್ನವೇ ಬಜೆಟ್ ಮಂಡಿಸಿ ನಾಲ್ಕು ತಿಂಗಳ ಲೇಖಾನುದಾನ ಪಡೆದಿದೆ. ಈ ಅವಧಿ ಜುಲೈ ತಿಂಗಳಿನಲ್ಲಿ ಮುಗಿಯುತ್ತದೆ. ಹೀಗಾಗಿ ಮತ್ತೊಮ್ಮೆ ಬಜೆಟ್ ಮಂಡನೆ ಮಾಡಲೇಬೇಕಿದೆ ಎಂದು ಸಿದ್ದರಾಮಯ್ಯ ವಾದ ಮಂಡಿಸುತ್ತಾರೆ.
ಶೆಟ್ಟರ್ ವಿರೋಧ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ತಕ್ಷಣ ಹೊಸ ಬಜೆಟ್ ಮಂಡಿಸುತ್ತಿರುವುದೇಕೆ? ಕಾಂಗ್ರೆಸ್ ಸರ್ಕಾರ ಹೊಸ ಜನಪರ ಯೋಜನೆಗಳನ್ನು ಜಾರಿಗೊಳಿಸಲಿ. ಆದರೆ, ಅದಕ್ಕಾಗಿ ನೂತನ ಬಜೆಟ್ ಮಂಡಿಸುವ ಅವಶ್ಯಕತೆ ಇಲ್ಲ
ಬಿಜೆಪಿ ಸರ್ಕಾರ ಬಜೆಟ್ ಮಂಡಿಸುವಾಗ ಪ್ರಕಟಿಸಿದ ಯೋಜನೆಗಳನ್ನು ಜಾರಿಗೊಳಿಸಿದರೂ ಅದು ಕಾಂಗ್ರೆಸ್ ಪಕ್ಷದ ಸಾಧನೆ ಎಂದೇ ಬಿಂಬಿತವಾಗುತ್ತದೆ. ಆದ್ದರಿಂದ ಪ್ರತ್ಯೇಕ ಬಜೆಟ್ ಮಂಡಿಸುವ ಅಗತ್ಯವಿಲ್ಲ. [ಕರ್ನಾಟಕ ಬಜೆಟ್ 2013-14 ಮುಖ್ಯಾಂಶಗಳು]
ಹಿಂದಿನ ಬಜೆಟ್ ನ ಜನಪರ ಕಾರ್ಯಕ್ರಮಗಳನ್ನೆ ಮುಂದುವರೆಸಿಕೊಂಡು ಹೋಗಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದರು. ಆದರೆ, ಇದು ಕಾಂಗ್ರೆಸ್ ಸರ್ಕಾರದ ಕಿವಿಗೆ ಬಿದ್ದಿಲ್ಲ. ಸಿದ್ದರಾಮಯ್ಯ ಬಜೆಟ್ ನಲ್ಲಿ ಬಿಜೆಪಿ ಹಲವು ಯೋಜನೆಗಳಿಗೆ ಕತ್ತರಿ ಬೀಳುವ ಸೂಚನೆ ಸಿಕ್ಕಿದೆ.. ಬಜೆಟ್ ಏನು ಎತ್ತ ಮುಂದೆ ನೋಡಿ...

ಹೊಸ ತಾಲೂಕು ರಚನೆ ಕಷ್ಟ
* ಚುನಾವಣೆ ದೃಷ್ಟಿಯಿಂದ ಶೆಟ್ಟರ್ ಸರ್ಕಾರ ಕಳೆದ ಬಜೆಟ್ ನಲ್ಲಿ ಸುಮಾರು 43 ಹೊಸ ತಾಲೂಕುಗಳನ್ನು ರಚನೆ ಮಾಡಲು 86 ಕೋಟಿ ರು ಘೋಷಿಸಿತ್ತು.
* ಹೊಸ ತಾಲೂಕು ರಚನೆಗೆ ಯಾವುದೇ ಸಮಿತಿ, ಆಯೋಗ ಶಿಫಾರಸು ಮಾಡಿಲ್ಲ. ಸಾರ್ವಜನಿಕರ ಬೇಡಿಕೆಯೂ ಬಂದಿಲ್ಲ. ಅವೈಜ್ಞಾನಿಕವಾಗಿ ತಾಲೂಕು ರಚನೆ ಮಾಡಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
* ನಿಮ್ಮ ಮಾಹಿತಿಗೆ, ಒಂದು ಜಿಲ್ಲೆ ರಚನೆಗೆ ಸುಮಾರು 15 ರಿಂದ 20 ಕೋಟಿ ಖರ್ಚಾಗುತ್ತದೆ. ತಾಲೂಕುಗಳ ರಚನೆಗೂ ಕೋಟಿಗಟ್ಟಲೆ ಹಣ ರಾಜ್ಯ ಬೊಕ್ಕಸದಿಂದ ವ್ಯಯ ಮಾಡಬೇಕಾಗುತ್ತದೆ.

ಮಠಗಳಿಗೆ ದೇಣಿಗೆ
ಬಿಜೆಪಿ ಸರ್ಕಾರ ನಾಲ್ಕೂವರೆ ವರ್ಷಗಳಿಂದ ಮಠಗಳಿಗೆ, ಜಾತಿ ಅಧಾರಿತ ಸಂಸ್ಥೆಗಳಿಗೆ ನೀಡಿರುವ 'ದೇವರ ದುಡ್ಡು' ಕನಿಷ್ಠವೆಂದರೂ 500 ಕೋಟಿ ರು ದಾಟುತ್ತದೆ. ಇದರಲ್ಲಿ ಬಿಎಸ್ ಯಡಿಯೂರಪ್ಪ ಅವರೇ 300 ಕೋಟಿ ರು ನೀಡಿದ್ದು ವಿಶೇಷ.
ಆದರೆ, ಸಿದ್ದರಾಮಯ್ಯ ಅವರು ಯಾವ ಮಠವೂ ತಾನಾಗಿ ಬೇಡಿಕೆ ಸಲ್ಲಿಸದ ಹೊರತು ಜನರ ದುಡ್ಡು ದಾನ ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಬಿಬಿಎಂಪಿ ಭವಿಷ್ಯ ತೂಗುಯ್ಯಾಲೆ
ಟೆಂಡರ್ ಹಗರಣಗಳಲ್ಲಿ ಸಿಲುಕಿರುವ ಬಿಬಿಎಂಪಿ ಭವಿಷ್ಯ ಸದ್ಯಕ್ಕೆ ತೂಗುಯ್ಯಾಲೆಯಲ್ಲಿದೆ. ಮೇಯರ್ ಚುನಾವಣೆ ಗೊಂದಲ ಒಂದು ಕಡೆಯಾದರೆ, ಸರ್ಕಾರ ನೀಡುವ ಅನುದಾನದಲ್ಲಿ ಭಾರಿ ಕಡಿತ ನಿರೀಕ್ಷಿಸಬಹುದು.
ಬೆಂಗಳೂರನ್ನು ಭೂತವಾಗಿ ಕಾಡಿದ ಕಸದ ಸಮಸ್ಯೆಗೆ ಬಿಜೆಪಿ ಸರ್ಕಾರದ ಅಸಡ್ಡೆಯೇ ಕಾರಣ ಎಂದು ಕಾಂಗ್ರೆಸ್ ನಂಬಿದೆ. ಘನ ತ್ಯಾಜ್ಯ ಟೆಂಡರ್ ಗುತ್ತಿಗೆಗೆ ನೀಡಿದ 115 ಕೋಟಿ ರು ಗೂ ಕುತ್ತು ಬೀಳಬಹುದು. ಬಿಬಿಎಂಪಿ ಸೂಪರ್ ಸೀಡ್ ಬಗ್ಗೆ ಕೂಡಾ ಯೋಚನೆ ನಡೆದಿದೆ.

ಸಕಾಲ ಮುಂದುವರಿಕೆ
ಬಿಜೆಪಿ ಸರ್ಕಾರ ತಂದಿರುವ ಸಕಾಲ ಉತ್ತಮ ಯೋಜನೆಯಾಗಿದೆ.ಬೆಂಗಳೂರಿನಲ್ಲಿ ಸುಮಾರು 30 ಸಾವಿರ ಎಕರೆ ಭೂಮಿ ಅಕ್ರಮವಾಗಿ ಒತ್ತುವರಿಯಾಗಿದೆ. ಈಗಾಗಲೇ 20 ಸಾವಿರ ಎಕರೆ ವಶಪಡಿಸಿಕೊಳ್ಳಲಾಗಿದೆ. ಉಳಿದ 10 ಸಾವಿರ ಎಕರೆಯನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ ಎಂದು ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ನೀಡಿದ ಹೇಳಿಕೆ ನೋಡಿದರೆ ಸಕಾಲಕ್ಕೆ ಶುಭ ಕಾಲ ಬಂದಿದೆ ಎನ್ನಬಹುದು.

ಯಾವುದಕ್ಕೆ ಆದ್ಯತೆ?
*ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ಜನರನ್ನು ವಂಚಿಸುವುದಿಲ್ಲ. ಕೃಷಿ, ನೀರಾವರಿ, ಇಂಧನ, ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ, ಕೈಗಾರಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು.
* ರೈತರಿಗೆ ನ್ಯಾಯಯುತ ಬೆಲೆ, ಬಿತ್ತನೆ ಬೀಜ, ಉತ್ತಮ ಮಾರುಕಟ್ಟೆ ಒದಗಿಸುವುದು ನಮ್ಮ ಕರ್ತವ್ಯ
* ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ, ಎರಡನೇ ಹಂತದ ನಗರಗಳಿಗೆ ಮಾಹಿತಿ, ತಂತ್ರಜ್ಞಾನ ಕೇಂದ್ರ ಸ್ಥಾಪನೆ ನಮ್ಮ ಗುರಿ

ಆಕ್ಕಿ ಸಮಸ್ಯೆ ಪರಿಹಾರ
11 ಲಕ್ಷ ಅಂತ್ಯೋದಯ ಸೇರಿದಂತೆ 98.15 ಲಕ್ಷ ಬಿಪಿಎಲ್ ಕಾರ್ಡ್ ದಾರರಿಗೆ ಪ್ರತಿ ಕೆಜಿಗೆ 1 ರು ನಂತೆ ಅಕ್ಕಿ ನೀಡಲಾಗುತ್ತದೆ. ಇದಕ್ಕಾಗಿ ಚತ್ತೀಸ್ ಗಢದಿಂದ 1.3 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಸಲಾಗುತ್ತದೆ.
ಎಪಿಲ್ ಕಾರ್ಡ್ ದಾರರು ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ ಖರೀದಿಸುತ್ತಿಲ್ಲ. ಹೀಗಾಗಿ ಅವರಿಗೆ ಅಕ್ಕಿ ನೀಡುತ್ತಿಲ್ಲ. ಅಕ್ಕಿ ಬಳಸದ ಕಡೆಗಳಲ್ಲಿ ರಾಗಿ, ಜೋಳ ನೀಡುವ ಚಿಂತನೆ ನಡೆದಿದೆ.












Click it and Unblock the Notifications