ನವೀನ್ ಸೂರಿಂಜೆ ಮೇಲಿನ ಕ್ರಿಮಿನಲ್ ಕೇಸ್ ವಾಪಸ್

ಪಡೀಲ್ ನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ದಾಳಿ ಸಂಬಂಧ ಬಂಧನಕ್ಕೊಳಗಾಗಿದ್ದ ಕಸ್ತೂರಿ ನ್ಯೂಸ್ ಚಾನೆಲಿನ ವರದಿಗಾರ ನವೀನ್ ಸೂರಿಂಜೆ ಅವರನ್ನು ಬಂಧ ಮುಕ್ತಗೊಳಿಸಲು ಅಂದಿನ ಬಿಜೆಪಿ ಸರ್ಕಾರವೇ ನಿರ್ಧರಿಸಿತ್ತು.
ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ನಿರ್ಣಯ ತೆಗೆದುಕೊಳ್ಳಲಾಗಿದ್ದು, ವರದಿಗಾರ ನವೀನ್ ಸೂರಿಂಜೆ ವಿರುದ್ಧದ ಪ್ರಕರಣವನ್ನು ವಾಪಸ್ ತೆಗೆದುಕೊಳ್ಳಲು ನಿರ್ಧರಿಸಿದ್ದರು.
ಆದರೆ, ಈಗ ಮತ್ತೊಮ್ಮೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು, ನವೀನ್ ಅವರ ಮೇಲಿನ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಲಾಗಿದೆ.
ಜಾಮೀನು ಮಂಜೂರು: ಮಂಗಳೂರಿನ ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳಿಗೆ ಶುಕ್ರವಾರ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಕಳೆದ ವರ್ಷ ಜುಲೈ 28ರಂದು ನಡೆದ ಹೋಂ ಸ್ಟೇ ದಾಳಿ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ರಾಜೇಶ್, ತಾರಾನಾಥ್, ಶೈಲೇಶ್ ಹಾಗೂ ಶ್ರೇಯಸ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟಿನ ಏಕ ಸದಸ್ಯ ಪೀಠ, 20 ಸಾವಿರ ರುಪಾಯಿ ಬಾಂಡ್ ಹಾಗೂ ಓರ್ವ ವ್ಯಕ್ತಿಯ ಶೂರಿಟಿ ಮೇಲೆ ಜಾಮೀನು ನೀಡಿದೆ.
2012 ಜುಲೈ 28ರಂದು ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ನಡೆದ ದಾಳಿ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ, ಅದನ್ನೆಲ್ಲ ಸ್ವತಃ ಚಿತ್ರೀಕರಿಸಿದ್ದರ ವಿರುದ್ಧ ಜಿಲ್ಲಾ ಪೊಲೀಸರು ಗರಂ ಆಗಿದ್ದರು. ಹಾಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಪತ್ರಕರ್ತ ನವೀನ್ ಸೂರಿಂಜೆ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ 'ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ' ಜ.5, 2013ರಿಂದ ಮೂರು ದಿನಗಳ ಕಾಲ ಫ್ರೀಡಂ ಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದೆ.
ಸಾಕ್ಷಿಯನ್ನಾಗಿ ಪರಿಗಣಿಸಬೇಕಿದ್ದ ನವೀನ್ ಸೂರಿಂಜೆಯನ್ನು ಆರೋಪಿಯನ್ನಾಗಿ ಹೆಸರಿಸಿ ಇಂದಿನವರೆಗೂ ಬಂಧನದಲ್ಲಿರುವಂತೆ ನೋಡಿಕೊಂಡಿರುವುದು ಕೇವಲ ಪತ್ರಿಕಾ ಸ್ವಾತಂತ್ರ್ಯದ ಹರಣ ಮಾತ್ರವಲ್ಲ, ಸಂವಿಧಾನಬದ್ಧ ನಾಗರಿಕ ಹಕ್ಕುಗಳನ್ನು ಹತ್ತಿಕ್ಕುವಂತಹ ದಮನಕಾರಿ ನಡೆಗಳೂ ಸಹ ಎಂದು ವೇದಿಕೆ ಆರೋಪಿಸಿದೆ
ಪತ್ರಕರ್ತರ ನಿಯೋಗ ರಾಜ್ಯಪಾಲರನ್ನು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದರು. ಈ ವಿಚಾರವನ್ನು ಗೃಹಮಂತ್ರಿಗಳ ಗಮನಕ್ಕೂ ತರಲಾಗಿತ್ತು. ಪತ್ರಕರ್ತ ನವೀನ್ ಸೂರಿಂಜೆ ಬಂಧನ ವಿರೋಧಿಸಿ ರಾಜ್ಯಾದ್ಯಂತ ಪಕ್ಷಾತೀತವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಭಾರಿ ಪ್ರತಿಭಟನೆಗಳು ನಡೆದಿತ್ತು.
ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಸಿಪಿಐ, ಎಸ್ಡಿಪಿಐ ಸಹಿತ ಹಲವು ರಾಜಕೀಯ ಪಕ್ಷಗಳು ಹಾಗೂ ಇನ್ನೂ ಹಲವಾರು ಸಂಘಟನೆಗಳು ನವೀನ್ ಬಂಧನವನ್ನು ಖಂಡಿಸಿದ್ದವು.












Click it and Unblock the Notifications