ಅಕ್ಕಿ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೆ ಸೋಲು
ಬೆಂಗಳೂರು, ಜೂನ್ 14: ಆಸೆಗಳಿಗೇನು ಎಲ್ಲರಿಗೂ ಇರುತ್ತದೆ. ಆದರೆ ಅದನ್ನು ಜಾರಿಗೊಳಿಸಲು ಸಾಧ್ಯವಾಗಬೇಕಲ್ಲ. ಅದೂ ನಾಡಿನ ಜನಕ್ಕೆ ಅದರಲ್ಲೂ ಬಡಜನತೆಗೆ ಹೊಟ್ಟೆತುಂಬಾ ಉಣಿಸಬೇಕು ಎಂಬ ಆಸೆ ಯಾವ ಮುಖ್ಯಮಂತ್ರಿಗೆ ಇರೋಲ್ಲ ಹೇಳಿ. ಆದರೆ ಅದು ಸಾಧ್ಯವಾಗಬೇಕಲ್ಲ?
ಹಾಗಂತ ಕನಿಷ್ಠ ಮಟ್ಟದ ಸಣ್ಣ ಲೆಕ್ಕಾಚಾರವೂ ಇಲ್ಲದೇ ಹೋದರೆ ನಮ್ಮ ನೂತನ ಮುಖ್ಯಮಂತ್ರಿ ಸಿದ್ದು ಮಾದರಿ ಎಡುವಬೇಕಾಗುತ್ತದೆ. ಎಡವಟ್ಟೂ ಆಗುತ್ತದೆ. ನೋಡಿ ನಮ್ಮ ಸಿಎಂ ಸಾಹೇಬರು 'ರೂಪಾಯಿ ಅಕ್ಕಿ' ಕೊಡ್ತೀನಿ ಎಂದು ಅಧಿಕಾರಕ್ಕೆ ಬಂದ ಮೊದಲ ದಿನವೇ ರಣೋತ್ಸಾಹದಲ್ಲಿ ಘೋಷಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅದೊಂದೇ ಅಂತಲ್ಲ. ಅವರು ಘೋಷಿಸಿದ ಅನೇಕ ಅಗ್ಗದ ಜನಪ್ರಿಯ ಯೋಜನೆಗಳು ಜಾರಿಗೊಳಿಸುವುದು ಅಧಿಕಾರಿಗಳಿಗೆ ದುಸ್ಸಾಧ್ಯವಾಗಿದೆ.

ಆದರೆ ನಿನ್ನೆ 'ರೂಪಾಯಿ ಅಕ್ಕಿ' ವಿತರಣೆ ಬಗ್ಗೆ ಸಿದ್ದು ಸಂಪುಟ ತೆಗೆದುಕೊಂಡಿರುವ ನಿರ್ಣಯ ನಿಜಕ್ಕೂ ನಗೆಪಾಟಿಲಿನದ್ದಾಗಿದೆ. ಬಡಜನತೆಗೆ ಹೊಟ್ಟೆ ತುಂಬಾ ಉಣ್ಣಲು ಅಕ್ಕಿ ಕೊಡಲಾಗದೆ ಕೈ ಎತ್ತಿದ ಸಿಎಂ ಸಿದ್ದು ನಿಜಕ್ಕೂ ಅಸಹಾಯಕರಂತೆ ಕಂಡುಬಂದಿದ್ದಾರೆ.
ಈಗ ಸನ್ಮಾನ್ಯ ಮುಖ್ಯಮಂತ್ರಿಗಳು ಹೇಳುತ್ತಿರುವುದೇನು ಗೊತ್ತೇ? ಮೊದಲಾ ದಿನ ನೀಡಿದ್ದ ವಾಗ್ದಾನದಂತೆ 30 ರೂಪಾಯಿಗೆ 30 ಕೆಜಿ ಅಕ್ಕಿ ಕೊಡೋಕ್ಕೆ ನಮ್ಮ 'ಕೈ'ಯಲ್ಲಿ ಸಾಧ್ಯವಾಗುತ್ತಿಲ್ಲ. ಬದಲಿಗೆ ಒಬ್ಬರೇ ಇರುವ ಬಿಪಿಎಲ್ ಕಾರ್ಡ್ಗೆ 10 ಕೆಜಿ ಮಾತ್ರ ಅಕ್ಕಿ ವಿತರಣೆ ಸಾಕು. ಇಬ್ಬರಿದ್ದರೆ 20 ಕೆಜಿ ಕೊಡ್ತೇವೆ. ಇಬ್ಬರಿಗಿಂತ ಹೆಚ್ಚಿದ್ದರೆ 30 ಕೆಜಿ ಅಕ್ಕಿ ಕೊಡ್ತೇವೆ ಎನ್ನುತ್ತಿದ್ದಾರೆ ನಮ್ಮ ಘನ ಸಿಎಂ.
ಅದೂ ಜುಲೈ 1ಕ್ಕೇ ಈ ಪಾಟಿ ಅಕ್ಕಿ ಬಂದು ನಿಮ್ಮ ಮನೆ ಬಾಗಿಲಿಗೆ ಬೀಳುತ್ತದೆ ಎಂದು ಅನ್ನಕ್ಕೆ ಹೆಸರಿಟ್ಟುಕೊಂಡು ಕುಳಿತುಕೊಳ್ಳಬೇಡಿ ಬಿಪಿಎಲ್ ಕಾರ್ಡುದಾರರೇ! ಏಕೆಂದರೆ ಜುಲೈ 1ಕ್ಕೇ ಯಾವುದೇ ಬದಲಾವಣೆಯಿಲ್ಲದೆ ಅಕ್ಕಿ ಕೊಟ್ಟೇ ಕೊಡ್ತೀವಿ ಎಂದು ಎರಡೆರಡು ಬಾರಿ ವಾಗ್ದಾನ ನೀಡಿದ್ದ ಸಿದ್ದು ಮತ್ತೆ ಜುಲೈ 10ರ ವೇಳೆಗಾದರೂ ಅಕ್ಕಿ ವಿತರಿಸ್ತೇವೆ ಎನ್ನುತ್ತಿದ್ದಾರೆ.
ಹೀಗೆ ನೀವೇ ಆಸೆ ಹುಟ್ಟಿಸಿ ಈಗ 'ನಾನು ಅಸಹಾಯಕ ನನ್ನ ಕೈಲಾಗೋಲ್ಲ' ಎಂದರೆ ಅದರಿಂದ ಬಡವರನ್ನು ಅಪಹಾಸ್ಯ ಮಾಡಿದಂತಾಗುವುದಿಲ್ಲವೇ ಸಿದ್ದರಾಮಯ್ಯನವರೇ? ಅಸಲಿಗೆ ಯಾರು ಕೇಳಿದ್ದರು ನಿಮ್ಮನ್ನು ರೂಪಾಯಿ ಅಕ್ಕಿ ಕೊಡಿ ಎಂದು?
ಸಿದ್ದರಾಮಯ್ಯನವರೇ ಬರೆದಿಟ್ಟುಕೊಳ್ಳಿ ನಿಮ್ಮ ಕೈಯಲ್ಲಿ ಇದನ್ನೂ ಕೊಡೋಕ್ಕೆ ಆಗೋಲ್ಲ. ಏಕೆಂದರೆ ಅಕ್ಕಿಯನ್ನು ಯಾವತ್ತೂ ನೀವು ತೂಗಿಲ್ಲ ಬಿಡಿ. ಇನ್ನು ರಾಜ್ಯದ ಬಡಜನತೆಗೆ ಎಷ್ಟು ಕೆಜಿ ಬೇಕಾಗುತ್ತದೆ ಎಂಬುದರ ಪರಿಕಲ್ಪನೆಯೂ ನಿಮಗಿಲ್ಲ.
ನೋಡಿ ಅದೇನೂ ಹೇಳ್ತಿದ್ದೀರಲ್ಲಾ ಒಬ್ಬರಿದ್ದರೆ 10 ಕೆಜಿ ಮಾತ್ರ ಅಂತ. ಸ್ವಾಮಿ ಸಿದ್ದರಾಮಯ್ಯನವರೇ, ಬಿಪಿಎಲ್ ಕುಟುಂಬಗಳಲ್ಲಿ ಒಬ್ಬರೇ ಇರೋರು ಎಲ್ಲೂ ಸಿಗೋಲ್ಲ ಬಿಡಿ. ಸಿಕ್ಕಿದರೂ ಅದರಿಂದ ಅಕ್ಕಿ ಉಳಿಸ್ತೀನಿ ಎಂದು ಕನಸು ಕಾಣಬೇಡಿ. ಏಕೆಂದರೆ ಒಬ್ಬರೇ ಬಿಪಿಎಲ್ ಕಾರ್ಡು ಹೊಂದಿರುವವರ ಸಂಖ್ಯೆ ತುಂಬಾ ಕಡಿಮೆ.
Next, ಇಬ್ಬರಿದ್ದರೆ 20 ಕೆಜಿ ಕೊಡ್ತೇವೆ ಅನ್ನೋದು... ಅದೂ ಸಾಧ್ಯವಿಲ್ಲ ಬಿಡಿ. ಏಕೆಂದರೆ ಬಿಪಿಎಲ್ ಕುಟುಂಬಗಳು ಅಂದರೆ ಅಲ್ಲಿ ಕನಿಷ್ಠ 5 ಜನ ಇದ್ದೇ ಇರುತ್ತಾರೆ. ಅಲ್ಲಿಗೆ ನಿಮ್ಮ ಲೆಕ್ಕ ಮತ್ತೆ ಅಲ್ಲಿಗೇ ಬಂತು. ಅಂದರೆ ಇಬ್ಬರಿಗಿಂತ ಹೆಚ್ಚಿದ್ದರೆ 30 ಕೆಜಿ ಅಕ್ಕಿ ಕೊಡ್ತೇವೆ ಎನ್ನುವುದು. ಅದೇ ಅಂತಿಮ.
ಸೋ ನೀವು ಹೀಗೆ ಅಕ್ಕಿ ವಿತರಣೆ ಪ್ರಮಾಣವನ್ನು ತಗ್ಗಿಸಿ ಎಲ್ಲರಿಗೂ ರೂಪಾಯಿ ಅಕ್ಕಿ ಕೊಡ್ತೇನೆ ಎಂಬ ನಿಮ್ಮ ಕನಸು ನನಸಾಗುವುದಿಲ್ಲ. ತಿಳ್ಕೊಳ್ಳಿ, ಶೇ. 90ರಷ್ಟು ಬಿಪಿಎಲ್ ಕುಟುಂಬಗಳಿಗೆ ನೀವು ತಲಾ 30 ಕೆಜಿ ಅಕ್ಕಿಯನ್ನೇ ಕೊಡಬೇಕಾಗುತ್ತದೆ.
ಅಥವಾ ಅದರ ಬದಲು ಆಯಾ ಪ್ರದೇಶಗಳ ಜನರಿಗೆ ಅನುಗುಣವಾಗಿ ಅದೇನೋ ಅಕ್ಕಿ/ಜೋಳ/ ಗೋಧಿ ಕೊಡ್ತೇವೆ ಎಂದು ನಿಮ್ಮ ಜಯಚಂದ್ರ ಸಾಹೇಬರು ಹೇಳಿದ್ದಾರೆ. ಇದರ ಬಗ್ಗೆ ಪರಿಕಲ್ಪನೆ ನಿಮಗೆ ಮೊದಲೇ ಇರಲಿಲ್ವಾ? ಏಕಾಂಗಿಯಾಗಿ ಅಗ್ಗದ ಘೋಷಣೆಗಳನ್ನು ಮಾಡುವ ಮುನ್ನ ಇನ್ನು ಮುಂದಾದರೂ ಮುಂದಾಲೋಚನೆ ಮಾಡಿ.












Click it and Unblock the Notifications